ಪರ್ವೇಜ್ ಮುಷರಫ್ ಹೇಳಿಕೆ ಸರಿ ಎಂದ ಕಾಂಗ್ರೆಸ್‌ ನಾಯಕ

First Published Jun 22, 2018, 8:38 PM IST
Highlights
  • ಕಾಶ್ಮೀರಿಗಳು ಪಾಕಿಸ್ತಾನಕ್ಕೆ ಸೇರುವ ಬದಲು ಸ್ವಾತಂತ್ರ್ಯವನ್ನೇ ಬಯಸುತ್ತಾರೆ ಎಂಬ ಪರ್ವೇಜ್ ಮುಷರಫ್ ಹೇಳಿಕೆ ಸರಿ ಎಂದ ಕಾಂಗ್ರೆಸ್‌ ನಾಯಕ ಸೈಫುದ್ದೀನ್ ಸೋಜ್‌
  • ಪಿಡಿಪಿ ಮತ್ತು ಬಿಜೆಪಿ ಮೈತ್ರಿ ಸರ್ಕಾರ ಪತನವಾದ ಬೆನ್ನಲ್ಲೆ ಕಾಂಗ್ರೆಸ್ ನಾಯಕರ ಹೇಳಿಕೆಗಳು ಬೆಂಕಿಗೆ ತುಪ್ಪ ಸುರಿಯೋ ಕೆಲಸ ಮಾಡುತ್ತಿದೆ

ನವದೆಹಲಿ[ಜೂ.22]: ಕಣಿವೆ ರಾಜ್ಯ ಜಮ್ಮುಕಾಶ್ಮೀರದಲ್ಲಿ ಸೈನಿಕರು ಉಗ್ರರ ವಿರುದ್ಧ ಬಂಧೂಕಿನ ಮೂಲಕ ಮಾತನ್ನಾಡುತ್ತಿದ್ದಾರೆ. ಆದರೆ ರಾಜಕಾರಣಿಗಳು ಬೇಜವಾಬ್ದಾರಿಯಿಂದ ನಾಲಿಗೆ ಹರಿಬಿಡ್ತಿದ್ದಾರೆ.

ರಾಜಕೀಯ ಪಕ್ಷಗಳ ನಡುವೆ ಕೆಸರೆರಚಾಟ ಆರಂಭವಾಗಿದೆ. ಪಿಡಿಪಿ ಮತ್ತು ಬಿಜೆಪಿ ಮೈತ್ರಿ ಸರ್ಕಾರ ಪತನವಾದ ಬೆನ್ನಲ್ಲೆ ಕಾಂಗ್ರೆಸ್ ನಾಯಕರ ಹೇಳಿಕೆಗಳು ಬೆಂಕಿಗೆ ತುಪ್ಪ ಸುರಿಯೋ ಕೆಲಸ ಮಾಡುತ್ತಿದೆ.  ಕಾಶ್ಮೀರಿಗಳು ಪಾಕಿಸ್ತಾನಕ್ಕೆ ಸೇರುವ ಬದಲು ಸ್ವಾತಂತ್ರ್ಯವನ್ನೇ ಬಯಸುತ್ತಾರೆ ಎಂಬ ಪಾಕಿಸ್ತಾನ ಮಾಜಿ ಸರ್ವಾಧಿಕಾರಿ  ಪರ್ವೇಜ್ ಮುಷರಫ್  ಹೇಳಿಕೆ ಸರಿಯಾಗಿದೆ ಎಂದು ಕಾಂಗ್ರೆಸ್‌ ನಾಯಕ ಸೈಫುದ್ದೀನ್ ಸೋಜ್‌ ಸಮರ್ಥಿಸಿಕೊಂಡಿದ್ದಾರೆ. 

ಈ ಹೇಳಿಕೆ ದೇಶದ ರಾಜಕೀಯ ವಲಯದಲ್ಲಿ ಬಾರೀ ತಲ್ಲಣಕ್ಕೆ ಕಾರಣವಾಗಿದೆ. ಇದಕ್ಕೆ ತೀಕ್ಷ್ಣ ತಿರುಗೇಟು ನೀಡಿರುವ ಬಿಜೆಪಿ, ಒಂದು ಪಾಕಿಸ್ತಾನ ಭಾರತದ ಹೊರಗಿದೆ; ಮತ್ತು ಕಾಂಗ್ರೆಸ್‌ನ ಒಳಗೇ ಒಂದು ಪಾಕಿಸ್ತಾನವಿದೆ' ಎಂದು ಟೀಕಿಸಿದೆ.

ಗಲಾಂ ನಬಿಯಿಂದ ಸೇನೆಗೆ ಅಪಮಾನ..!
ಇನ್ನು ಕಾಶ್ಮೀರದಲ್ಲಿ ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ವಾಪಸ್ ಪಡೆಯುತ್ತಲೇ ಉಗ್ರರ ವಿರುದ್ಧದ ಸೇನಾಪಡೆಗಳ ಹಿಡಿತ ಬಿಗಿಯಾಗುತ್ತಿದೆ.ಈ ಮಧ್ಯೆ ಸೇನಾಪಡೆಗಳ ಕಾರ್ಯಾಚರಣೆ ಬಗ್ಗೆ ಕಾಂಗ್ರೆಸಿನ ಗುಲಾಮ್ ನಬಿ ಆಜಾದ್ ಅಪಸ್ವರ ಎತ್ತಿದ್ದರು. ಆಶ್ಚರ್ಯ ಅಂದ್ರೆ ಕಾಂಗ್ರೆಸ್ ವ್ಯಕ್ತಪಡಿಸಿದ್ದ ಅಪಸ್ವರಕ್ಕೆ ಉಗ್ರಗಾಮಿ ಸಂಘಟನೆ ಲಷ್ಕರ್-ಎ-ತಯ್ಯಬಾ ಬೆಂಬಲ ವ್ಯಕ್ತಪಡಿಸಿದೆ.

ಈ ಹೇಳಿಕೆ ಭಾರತೀಯರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಟ್ವಿಟರ್ ಮೂಲಕ ಅನೇಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಪಾಕಿಸ್ತಾನದ ನಿಲುವನ್ನೇ ಕಾಂಗ್ರೆಸ್ ತನ್ನ ನಿಲುವು ಎಂಬಂತೆ ಹೇಳಿಕೆ ನೀಡುತ್ತಲೇ ಬಿಜೆಪಿ ತೀವ್ರವಾಗಿ ವಿರೋಧಿಸಿದೆ. 

ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ಗೊಂದಲಗಳ ನಡುವೆಯೇ ಉಗ್ರರು ಮತ್ತು ಸೇನಾಪಡೆಗಳ ನಡುವಣ ಕಾಳಗ ಮುಂದುವರಿದಿದೆ. ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇಂದು ನಾಲ್ವರು ಉಗ್ರರನ್ನು ಬೇಟೆಯಾಡಲಾಗಿದೆ. ಈ ಕಾರ್ಯಾಚರಣೆ ಬೆನ್ನಲ್ಲೇ ಸೇನಾಪಡೆ ಪಾಕಿಸ್ತಾನ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯೊಂದನ್ನು ಸಿದ್ದಮಾಡಿದೆ. ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ 11, ಲಷ್ಕರ್ ಇ ತಯ್ಯಬಾದ 7 ಉಗ್ರರು ಈ ಪಟ್ಟಿಯಲ್ಲಿ ಸೇರಿದ್ದಾರೆ. ಇವರಿಗೆಲ್ಲಾ ಮಾರಿಹಬ್ಬ ಕಾದಿರೋದಂತೂ ಸುಳ್ಳಲ್ಲ.  

 

click me!