
ನವದೆಹಲಿ(ಅ. 12): ಪಾಕ್ ಗಡಿಭಾಗದೊಳಗೆ ಭಾರತ ನಡೆಸಿದ ಸರ್ಜಿಕಲ್ ಕಾರ್ಯಾಚರಣೆಗೆ ಸೇಡು ತೀರಿಸಿಕೊಳ್ಳಲು ಪಾಕ್ ಪ್ರಚೋದಿತ ಉಗ್ರರ ಗುಂಪು ಗೋವಾದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ. ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಸಾರ್ಕ್ ಶೃಂಗಸಭೆಯು ಭಾರತದ ಕಾರಣದಿಂದಾಗಿ ಮುರಿದುಬಿದ್ದಿದ್ದರಿಂದ ಕುಪಿತಗೊಂಡಿರುವ ಐಎಸ್'ಐ ಉಗ್ರರ ಮೂಲಕ ಗೋವಾದಲ್ಲಿ ದಾಳಿ ನಡೆಸಲು ಯೋಜಿಸಿದೆಯಂತೆ. ಗೋವಾದಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯದಂತೆ ಮಾಡುವುದು ಪಾಕಿಸ್ತಾನದ ಚಿತಾವಣಿಯಾಗಿದೆ. ಗುಪ್ತಚರ ಮಾಹಿತಿ ಪ್ರಕಾರ ಇನ್ನೆರಡು ದಿನಗಳಲ್ಲಿ ಗೋವಾದಲ್ಲಿ ದಾಳಿ ನಡೆಲು ಉಗ್ರರು ಪ್ರಯತ್ನಿಸಬಹುದು ಎಂದು ಇಂಡಿಯಾ ಟುಡೇ ತನ್ನ ವರದಿಯಲ್ಲಿ ತಿಳಿಸಿದೆ.
ಇದೇ ವೇಳೆ, ಉಗ್ರರ ಸ್ಲೀಪಿರ್ ಸೆಲ್'ಗಳನ್ನು ಜಾಗೃತಗೊಳಿಸಲಾಗಿದ್ದು, ಗೋವಾದಲ್ಲಿ ಈ ಉಗ್ರ ಸಹಾಯಕರನ್ನು ನಿಯೋಜಿಸಲಾಗಿದೆ. ಬ್ರಿಕ್ಸ್ ಸಭೆ ಆರಂಭಕ್ಕೂ ಮುನ್ನ ಗೋವಾದಲ್ಲಿನ ಖ್ಯಾತ ಪ್ರವಾಸೀ ತಾಣವೊಂದರನ್ನು ಟಾರ್ಗೆಟ್ ಮಾಡುವಂತೆ ಸೂಚಿಸಲಾಗಿದೆ ಎಂಬಂತಹ ಮಾಹಿತಿಯನ್ನು ಗುಪ್ತಚರರು ನೀಡಿದ್ದಾರೆ. ಮತ್ತೊಂದು ಸುದ್ದಿಯ ಪ್ರಕಾರ, 2008ರಲ್ಲಿ ಸಮುದ್ರದ ಮೂಲಕ ದೋಣಿಯಲ್ಲಿ ಬಂದು ಮುಂಬೈನಲ್ಲಿ ದಾಳಿ ಎಸಗಿದ ರೀತಿಯಲ್ಲೇ ಗೋವಾದಲ್ಲೂ ದಾಳಿ ನಡೆಸಲು ಸಂಚು ರೂಪಿಸಲಾಗಿದೆಯಂತೆ.
ಮಹಾರಾಷ್ಟ್ರದಲ್ಲಿ ಸಿಕ್ಕಿಬಿದ್ದಿರುವ ಉಗ್ರರು ಹಾಗೂ ಪಾಕಿಸ್ತಾನದಲ್ಲಿನ ಹ್ಯಾಂಡ್ಲರ್'ಗಳ ನಡುವೆ ನಡೆದ ಸಂಭಾಷಣೆಯ ವಿವರವು ಗುಪ್ತಚರರಿಗೆ ಸಿಕ್ಕಿದ್ದು, ಈ ಮೂಲಕ ಗೋವಾದಲ್ಲಿ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿರುವ ವಿಷಯ ಪತ್ತೆಯಾಗಿದೆ. ಗೋವಾದಲ್ಲಿ ಶೃಂಗ ಸಭೆ ನಡೆಯುವ ಸ್ಥಳ ಹಾಗೂ ವಿಐಪಿಗಳು, ಅತಿಥಿಗಳು ಉಳಿದುಕೊಳ್ಳುವ ಹೋಟೆಲ್ ರೂಮುಗಳಲ್ಲಿ ಭದ್ರತಾ ತಪಾಸನೆಗಾಗಿ ಇಂಡೋ ಟಿಬೇಟನ್ ಗಡಿ ಪೊಲೀಸ್ ಪಡೆಯ ವಿಶೇಷ ಕೆ9 ತಂಡಗಳನ್ನು ಕರೆತರಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.