
ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳು ಒಟ್ಟಾಗಿ ಓರ್ವ ಅಭ್ಯರ್ಥಿಯನ್ನು ಎನ್ಡಿಎ ವಿರುದ್ಧ ಕಣಕ್ಕಿಳಿಸುವ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ಶುಕ್ರವಾರ 17 ವಿಪಕ್ಷಗಳ ಸಭೆ ನಡೆಯಿತು. ‘ಒಮ್ಮತದ ಅಭ್ಯರ್ಥಿಯನ್ನು ಸರ್ಕಾರ ಕಣಕ್ಕಿಳಿಸದೇ ಹೋದರೆ, ನಾವು ಒಟ್ಟಾಗಿ ಎದುರಾಳಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ನಿರ್ಧರಿಸಲಿದ್ದೇವೆ' ಎಂದು ಸಭೆ ಅಂಗೀಕರಿಸಿತು.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಯು ಮುಖಂಡ ಶರದ್ ಯಾದವ್ ಮತ್ತು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಜಂಟಿ ಹೇಳಿಕೆಯನ್ನು ಓದಿದರು. ‘ಕೇಂದ್ರ ಸರ್ಕಾರ ಜಾತ್ಯತೀತ ಮನೋಭಾವದ ಸರ್ವಸಮ್ಮತ ಅಭ್ಯರ್ಥಿಗೆ ಯತ್ನಿಸಬೇಕು. ಒಂದು ವೇಳೆ ಆಗದೇ ಹೋದರೆ ವಿಪಕ್ಷಗಳು ಒಟ್ಟಾಗಿ ದೇಶದ ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸುವ ಅಭ್ಯರ್ಥಿಯನ್ನು ಕಣಕ್ಕಿಳಿಸಲಿವೆ' ಎಂದರು. ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ‘ ಸಭೆಯಲ್ಲಿ ಯಾವ ಹೆಸರುಗಳ ಬಗ್ಗೆಯೂ ಚರ್ಚೆಯಾಗಿಲ್ಲ. ಆದರೆ ಒಂದು ವೇಳೆ ಒಮ್ಮತ ಮೂಡದಿದ್ದರೆ ಸಣ್ಣ ಸಮಿತಿ ಯೊಂದನ್ನು ರಚಿಸಿ ಅಭ್ಯರ್ಥಿ ಅಂತಿಮ ಗೊಳಿಸಲು ಯತ್ನಿಸಲಾಗುವುದು' ಎಂದು ಹೇಳಿದರು.
ಸಭೆಯಲ್ಲಿ ಸಿಪಿಎಂನ ಸೀತಾರಾಂ ಯೆಚೂರಿ, ಡಿ. ರಾಜಾ, ಪಿ. ಕರುಣಾಕರನ್ ಜೆಡಿಯುನ ಶರದ್ ಯಾದವ್, ಕೆ.ಸಿ. ತ್ಯಾಗಿ, ಬಿಎಸ್ಪಿಯ ಮಾಯಾವತಿ, ಸಮಾಜವಾದಿ ಪಾರ್ಟಿಯ ಅಖಿಲೇಶ್ ಯಾದವ್, ಎನ್ಸಿಪಿಯ ಶರದ್ ಪವಾರ್, ಆರ್ಜೆಡಿಯ ಲಾಲು ಯಾದವ್, ಡಿಎಂಕೆಯ ಕನಿಮೋಳಿ ಉಪಸ್ಥಿತರಿದ್ದರು.
ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಆಯ್ಕೆಯ ಚರ್ಚೆಗಾಗಿ ಸೋನಿಯಾ ಗಾಂಧಿ ಏರ್ಪಡಿಸಿದ್ದ ಭೋಜನಕೂಟಕ್ಕೆ ಗೈರಾಗಿದ್ದ ಬಿಹಾರ ಸಿಎಂ ನಿತೀಶ್, ಪ್ರಧಾನಿ ನರೇಂದ್ರ ಮೋದಿ ಶನಿವಾರ ಹಮ್ಮಿಕೊಂಡಿರುವ ಭೋಜನಕೂಟದಲ್ಲಿ ಹಾಜರಾಗಲಿದ್ದಾರೆ. ಇದು ಸಾಕಷ್ಟುಕುತೂಹಲಕ್ಕೆ ಕಾರಣವಾಗಿದೆ. ಮಾರಿಷಸ್ ಪ್ರಧಾನಿ ಜುಗ್ನಾಥ್ ಗೌರವಾರ್ಥ ವಾಗಿ ಭೋಜನಕೂಟ ಏರ್ಪಾಡಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.