ಮೈಸೂರು ಅರಮನೆ ದ್ವಾರದಲ್ಲಿ ಸರ್ಕಾರ ಸ್ಥಾಪಿಸಲು ಹೊರಟಿರುವ ಸುತ್ತೂರು ಶ್ರೀಗಳ ಪುತ್ಥಳಿಗೆ ಅಪಸ್ವರ ಕೇಳಿಬಂದಿದೆ. ಇದೀಗ ಅದೇ ಸ್ಥಳದಲ್ಲಿ ಮೈಸೂರು ರಾಜ ವಂಶದ ಕೊನೆಯ ಕುಡಿ, ದಿವಂಗತ ಶ್ರೀಕಂಠದತ್ತ ಒಡೆಯರ್ ಪ್ರತಿಮೆ ನಿರ್ಮಾಣ ಮಾಡುವಂತೆ ಒತ್ತಾಯ ಕೇಳಿಬಂದಿದೆ. ಈ ವಿಚಾರ ಈಗ ವಿವಾದಕ್ಕೀಡಾಗಿದೆ.
ಮೈಸೂರು: ಮೈಸೂರು ಅರಮನೆ ದ್ವಾರದಲ್ಲಿ ಸರ್ಕಾರ ಸ್ಥಾಪಿಸಲು ಹೊರಟಿರುವ ಸುತ್ತೂರು ಶ್ರೀಗಳ ಪುತ್ಥಳಿಗೆ ಅಪಸ್ವರ ಕೇಳಿಬಂದಿದೆ. ಇದೀಗ ಅದೇ ಸ್ಥಳದಲ್ಲಿ ಮೈಸೂರು ರಾಜ ವಂಶದ ಕೊನೆಯ ಕುಡಿ, ದಿವಂಗತ ಶ್ರೀಕಂಠದತ್ತ ಒಡೆಯರ್ ಪ್ರತಿಮೆ ನಿರ್ಮಾಣ ಮಾಡುವಂತೆ ಒತ್ತಾಯ ಕೇಳಿಬಂದಿದೆ. ಈ ವಿಚಾರ ಈಗ ವಿವಾದಕ್ಕೀಡಾಗಿದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪುತ್ಥಳಿಗಳಿಗೇನೂ ಭರವಿಲ್ಲ. ಇಲ್ಲಿನ ಗಲ್ಲಿ ಗಲ್ಲಿಗಳಲ್ಲಿ ಹಲವು ಮಹಾನ್ ವ್ಯಕ್ತಿಗಳ ಪುತ್ಥಳಿಗಳು ಕಾಣ ಸಿಗುತ್ತವೆ. ಆದರೆ ಈಗ ರಾಜ್ಯ ಸರ್ಕಾರ ಮತ್ತೊಂದು ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದೆ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 102ನೇ ಜಯಂತಿ ನಿಮಿತ್ತ ರಾಜ್ಯ ಸರ್ಕಾರ 2 ಕೋಟಿ ರೂ. ವೆಚ್ಚದಲ್ಲಿ ಪುತ್ಥಳಿ ನಿರ್ಮಿಸಲು ತೀರ್ಮಾನಿಸಿದೆ. ಅಂಬಾವಿಲಾಸ ಅರಮನೆ ದಕ್ಷಿಣ ಭಾಗದ ದ್ವಾರದಲ್ಲಿ ಸುತ್ತೂರು ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಪುತ್ಥಳಿ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ.
ಆದರೆ, ಕೆಲವು ಸಂಘಟನೆಗಳು ಶ್ರೀಗಳ ಪುತ್ಥಳಿ ಇಲ್ಲಿ ಬೇಡ ಎಂದು ಕ್ಯಾತೆ ತೆಗೆದಿವೆ. ಅವುಗಳು ಸುತ್ತೂರು ಶ್ರೀಗಳ ಪುತ್ಥಳಿ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಮೈಸೂರು ರಾಜ ವಂಶಸ್ಥ ಶ್ರೀಕಂಠದತ್ತ ಒಡೆಯರ್ ಪುತ್ಥಳಿ ನಿರ್ಮಾಣಕ್ಕೆ ಆಗ್ರಹಿಸುತ್ತಿದ್ದಾರೆ. ಇದ್ಯಾವುದನ್ನೂ ಲೆಕ್ಕಿಸದೇ ಸರ್ಕಾರ ಶ್ರೀಗಳ ಪುತ್ಥಳಿ ನಿರ್ಮಿಸಿ ಓಟ್ಬ್ಯಾಂಕ್ ರಾಜಕೀಯ ಮಾಡಲು ಹೊರಟಿದೆ ಎಂದು ಅವುಗಳು ಆರೋಪ ಮಾಡಿವೆ.
ಆಗಸ್ಟ್ 29 ರಂದು ಸಿಎಂ ಸಿದ್ದರಾಮಯ್ಯ ಪುತ್ಥಳಿ ನಿರ್ಮಾಣಕ್ಕೆ ಶಿಲನ್ಯಾಸ ಮಾಡಲಿದ್ದಾರೆ.. ಈ ಕಾರ್ಯಕ್ರಮಕ್ಕೆ ವಿರುದ್ಧವಾಗಿ ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾಗಿವೆ. ಒಟ್ಟಿನಲ್ಲಿ ಪುತ್ಥಳಿ ಪಾಲಿಟಿಕ್ಸ್ ಇನ್ನೊಂದು ರೂಪ ಪಡೆಯುವ ಲಕ್ಷಣ ಗೋಚರಿಸುತ್ತಿರೋದಂತೂ ಸತ್ಯ.
ವರದಿ: ಮಧು.ಎಂ.ಚಿನಕುರಳಿ