ತಂದೆ ಸಮಾಧಿ ಧ್ವಂಸಕ್ಕೆ ಸಿಎಂ ಆದೇಶ! ಈ ಜಾಗದಲ್ಲಿ ಸಾರ್ವಜನಿಕರಿಗೆ ಸೌಕರ್ಯ

By Kannadaprabha NewsFirst Published Nov 3, 2019, 12:22 PM IST
Highlights

ಪುರಿ ನಗರದಲ್ಲಿರುವ ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್‌ ಅವರ ಸಮಾಧಿ ಸುತ್ತ ನಿರ್ಮಿಸಲಾಗಿದ್ದ ಸ್ಮಾರಕ ಹಾಗೂ ಕಾಂಪೌಂಡ್‌ ಗೋಡೆಯನ್ನು ತೆರವುಗೊಳಿಸಲು ಖುದ್ದು ಅವರ ಪುತ್ರ ಹಾಗೂ ಹಾಲಿ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ನಿರ್ಧರಿಸಿದ್ದಾರೆ.
 

ಭುವನೇಶ್ವರ  (ನ.03): ಯಾರಾದರೂ ಗಣ್ಯರು ತೀರಿಕೊಂಡಾಗ ಅವರ ಸಮಾಧಿ ಮೇಲೆ ಸ್ಮಾರಕ ನಿರ್ಮಿಸಬೇಕು ಎಂದು ಅವರ ಅಭಿಮಾನಿಗಳು ಸರ್ಕಾರಕ್ಕೆ ಒತ್ತಾಯಿಸುವುದು ಮಾಮೂಲಿ ಸಂಗತಿ. ಆದರೆ ಪುರಿ ನಗರದಲ್ಲಿರುವ ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್‌ ಅವರ ಸಮಾಧಿ ಸುತ್ತ ನಿರ್ಮಿಸಲಾಗಿದ್ದ ಸ್ಮಾರಕ ಹಾಗೂ ಕಾಂಪೌಂಡ್‌ ಗೋಡೆಯನ್ನು ತೆರವುಗೊಳಿಸಲು ಖುದ್ದು ಅವರ ಪುತ್ರ ಹಾಗೂ ಹಾಲಿ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ನಿರ್ಧರಿಸಿದ್ದಾರೆ.

‘ಬಿಜು ಅವರು ಒಡಿಶಾ ಜನರ ಹೃದಯದಲ್ಲೇ ನೆಲೆಸಿದ್ದಾರೆ. ಹೀಗಾಗಿ ಅವರ ಸ್ಮಾರಕದ ಅಗತ್ಯವೇನೂ ಇಲ್ಲ. ಸ್ಮಾರಕವನ್ನು ತೆರವು ಮಾಡಿ ಅದನ್ನು ಜನೋಪಯೋಗಕ್ಕೆ ಬಳಸಲಾಗುವುದು’ ಎಂದು ಒಡಿಶಾ ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ. ಹೀಗಾಗಿ ಇನ್ನು ಬಿಜು ಸಮಾಧಿ ಮೇಲೆ ಕೇವಲ ಫಲಕ ಮಾತ್ರ ಇರಲಿದೆ.

ಬಯಲು ಶೌಚಕ್ಕೆ ಹೋದ್ರೆ ರೇಷನ್ ಕಟ್ !...

ಬಿಜು ಅವರು 1997ರಲ್ಲಿ ತೀರಿಕೊಂಡ ನಂತರ ಅವರ ಪಾರ್ಥಿವ ಶರೀರವನ್ನು ‘ಸ್ವರ್ಗದ್ವಾರ’ ಸರ್ಕಾರಿ ಸ್ಮಶಾನದಲ್ಲಿ ಹೂಳಲಾಗಿತ್ತು. ಅದರ ಸುತ್ತ 40 ಅಡ್ಡಿ40 ಅಡಿ ಸ್ಮಾರಕ ನಿರ್ಮಿಸಲಾಗಿತ್ತು. ಸ್ಮಾರಕಕ್ಕೆ ಸರ್ಕಾರಿ ಜಾಗದ ಬಳಕೆ ವಿರುದ್ಧ ಹಲವರು ಕೋರ್ಟ್‌ಗೆ ಹೋಗಿದ್ದರು.

ಆದರೆ ವಿವಾದಕ್ಕೆ ಪೂರ್ಣವಿರಾಮ ಹಾಕಿರುವ ನವೀನ್‌, ‘ಸ್ವರ್ಗದ್ವಾರ ಸ್ಮಶಾನ ಆಧುನೀಕರಣಗೊಳಿಸಲಾಗುವುದು. ಶವಸಂಸ್ಕಾರಕ್ಕೆ ಅತ್ಯಾಧುನಿಕ ಸೌಲಭ್ಯ ಕಲ್ಪಿಸಲಾಗುವುದು. ವಿಶ್ರಾಂತಿ ಗೃಹಗಳ ನಿರ್ಮಾಣ, ಚಿತಾಭಸ್ಮ ಹಾಗೂ ಮೂಳೆಗಳನ್ನು ಸಂಗ್ರಹಿಸಲು ಸೌಲಭ್ಯ ಕಲ್ಪಿಸಲಾಗುವುದು. ಸ್ಮಶಾನದ ಸೌಂದರ್ಯ ಹೆಚ್ಚಿಸಲು ಅರಣ್ಯೀಕರಣ ಮಾಡಲಾಗುವುದು. ಎಲ್ಲ ಯೋಜನೆಯನ್ನು 6 ತಿಂಗಳಲ್ಲಿ ಮುಗಿಸಲಾಗುವುದು’ ಎಂದಿದ್ದಾರೆ.

ನವೆಂಬರ್ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!