ಹಿಂದೆಂದಿಗಿಂತ ಈಗ ಚುನಾವಣೆ ಕಠಿಣ: ಸಿಎಂ

By Suvarna Web DeskFirst Published Apr 9, 2018, 7:23 AM IST
Highlights

ಸಾಮಾಜಿಕ ಜಾಲತಾಣಗಳು ಸೇರಿದಂತೆ ಮಾಧ್ಯಮ ಲೋಕ ಪ್ರತಿವ್ಯಕ್ತಿಯನ್ನು ತಲುಪಿರುವ ಹಿನ್ನೆಲೆಯಲ್ಲಿ ಚುನಾವಣೆ ಎದುರಿಸುವುದು ಹಿಂದೆಂದಿಗಿಂತಲೂ ಈಗ ಕಠಿಣವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.

ಬೆಂಗಳೂರು : ಸಾಮಾಜಿಕ ಜಾಲತಾಣಗಳು ಸೇರಿದಂತೆ ಮಾಧ್ಯಮ ಲೋಕ ಪ್ರತಿವ್ಯಕ್ತಿಯನ್ನು ತಲುಪಿರುವ ಹಿನ್ನೆಲೆಯಲ್ಲಿ ಚುನಾವಣೆ ಎದುರಿಸುವುದು ಹಿಂದೆಂದಿಗಿಂತಲೂ ಈಗ ಕಠಿಣವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.

ಭಾನುವಾರ ಅನೌಪಚಾರಿಕವಾಗಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಿಂದೆ ಒಂದು ಹಳ್ಳಿಗೆ ಹೋಗಿ ಅಲ್ಲಿನ ಮುಖಂಡರನ್ನು ಕರೆದು ಮಾತನಾಡಿಸಿದ್ದರೆ ಸಾಕಿತ್ತು. ಆದರೆ, ಈಗ ಮನೆ ಮನೆಗೆ ಹೋಗಬೇಕು. ಪ್ರತಿ ಮನೆಯ ಅಪ್ಪನಿಗೆ ಮಾತ್ರವಲ್ಲ, ಆತನ ಮಗನಿಗೂ ಪ್ರತ್ಯೇಕವಾಗಿ ಮನವಿ ಮಾಡಬೇಕು. ಅಪ್ಪನಿಗೆ ಹೇಳಿದರೆ ಮಗ ಮತ ಹಾಕುವುದಿಲ್ಲ. ಮಗನ ಜತೆಗೆ ಆತನ ಹೆಂಡತಿಗೂ ಮನವಿ ಮಾಡಿ ಬರಬೇಕಾದ ಪರಿಸ್ಥಿತಿಯಿದೆ ಎಂದು ಅವರು ಹೇಳಿದರು.

ಆದರೆ, ಚುನಾವಣೆಗಳಲ್ಲಿ ಜನರು ಜಾತಿಯ ಆಧಾರದ ಮೇಲೆ ಮತ ಹಾಕುತ್ತಾರೆ ಎಂದು ನಾನು ನಂಬುವುದಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಎಲ್ಲಾ ಒಕ್ಕಲಿಗರೂ ಜಿ.ಟಿ. ದೇವೇಗೌಡರಿಗೆ ಹಾಗೂ ಕುರುಬರು ನನಗೆ ಮತ ಹಾಕುತ್ತಾರೆ ಎಂದೇನೂ ಇಲ್ಲ. ನನ್ನೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ಒಕ್ಕಲಿಗರು ಹಾಗೂ ದೇವೇಗೌಡರೊಂದಿಗೆ ಉತ್ತಮ ಸಂಬಂಧವಿರುವ ಕುರುಬರು ಇರುತ್ತಾರೆ. ಹೀಗಾಗಿ ಜಾತಿ ಚುನಾವಣೆಗೆ ಆಧಾರವಲ್ಲ. ಮತದಾರರೊಂದಿಗೆ ಹೊಂದಿರುವ ಸಂಬಂಧ ಹಾಗೂ ಅಭಿವೃದ್ಧಿ ಕಾರ್ಯವೂ ಮುಖ್ಯವಾಗುತ್ತದೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.

ಚಾಮುಂಡೇಶ್ವರಿ ಬಿಡಲ್ಲ:

ಚಾಮುಂಡೇಶ್ವರಿ ಜತೆಗೆ ಅನ್ಯ ಕ್ಷೇತ್ರಗಳಿಂದಲೂ ಸ್ಪರ್ಧಿಸುವಂತೆ ನನ್ನ ಮೇಲೆ ತೀವ್ರ ಒತ್ತಡವಿದೆ. ಈ ಬಗ್ಗೆ ನಾನು ಇನ್ನೂ ತೀರ್ಮಾನಿಸಿಲ್ಲ. ಎಲ್ಲರೂ ನನಗೆ ಚಾಮುಂಡೇಶ್ವರಿ ಕಷ್ಟವಿದೆ ಎಂದೇ ಹೇಳುತ್ತಾರೆ. ಆದರೆ, ನಾನು ಅಲ್ಲಿ ಏಳು ಚುನಾವಣೆ ಎದುರಿಸಿದ್ದೇನೆ. ನನಗೆ ಅಲ್ಲಿನ ಜನರ ನಾಡಿ ಮಿಡಿತ ಗೊತ್ತು. ಈ ಬಾರಿ ಅಲ್ಲಿಂದಲೇ ನಾನು ಗೆದ್ದು ಬರುತ್ತೇನೆ ನೋಡುತ್ತಿರಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇವಿಎಂ ನಂಬಲ್ಲ; ಆಯೋಗ ನಂಬ್ತೇನೆ

ಮತಯಂತ್ರಗಳನ್ನು ಟ್ಯಾಂಪರ್‌ ಮಾಡಲು ಸಾಧ್ಯವಿದೆ ಎಂದು ತಜ್ಞರು ಹೇಳುತ್ತಾರೆ. ಆದರೆ, ನ್ಯಾಯಯುತವಾಗಿ ಚುನಾವಣೆ ನಡೆಸುತ್ತೇವೆ ಎಂದು ಹೇಳಿರುವ ಚುನಾವಣಾ ಆಯೋಗದ ವಾಗ್ದಾನವನ್ನು ನಾನು ನಂಬುತ್ತೇನೆ ಎಂದು ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಎಲೆಕ್ಟ್ರಾನಿಕ್‌ ಮತಯಂತ್ರಗಳ ಸಾಚಾತನದ ಬಗ್ಗೆ ಶಂಕೆಗಳೆದ್ದಾಗ ನಾನು ತಜ್ಞರನ್ನು ಕರೆಸಿ ಈ ಮತಯಂತ್ರಗಳ ಕುರಿತು ಚರ್ಚೆ ನಡೆಸಿದೆ. ಆಗ ಅವರು ಮತಯಂತ್ರಗಳನ್ನು ಟ್ಯಾಂಪರ್‌ ಮಾಡಲು ಸಾಧ್ಯವಿದೆ ಎಂದು ನಿದರ್ಶನ ಸಹಿತ ನನಗೆ ತಿಳಿಸಿದರು. ಆದಾಗ್ಯೂ, ಚುನಾವಣಾ ಆಯೋಗ ನ್ಯಾಯಯುತ ಚುನಾವಣೆ ನಡೆಸುವುದಾಗಿ ನೀಡಿರುವ ಭರವಸೆಯನ್ನು ನಾನು ನಂಬುತ್ತೇನೆ ಎಂದು ತಿಳಿಸಿದರು.

click me!