
ಶ್ರೀರಂಗಪಟ್ಟಣ: ಕಳೆದ 14 ವರ್ಷಗಳಿಂದಲೂ ಒತ್ತುವರಿ ಮಾಡಲಾಗಿರುವ ನಾಲೆ ಹಾಗೂ ಸಾರ್ವಜನಿಕ ರಸ್ತೆಯನ್ನು ತೆರವುಗೊಳಿಸುವಂತೆ ಜಿಲ್ಲೆ, ತಾಲೂಕು ಮಟ್ಟದ ಅಧಿಕಾರಿಗಳಿಗೆ 247 ಬಾರಿ ಮನವಿ ಸಲ್ಲಿಸಿ ಸೋತು ಸುಣ್ಣವಾಗಿರುವ ವ್ಯಕ್ತಿಯೊಬ್ಬರು ಈಗ ವಿಧಿ ಇಲ್ಲದೇ ದಯಾ ಮರಣವನ್ನಾದರೂ ಕರುಣಿಸಿ ಎಂದು ತಹಸೀಲ್ದಾರ್ಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ತಾಲೂಕಿನ ದರಸಗುಪ್ಪೆಯ ಡಿ.ಪ್ರಭಾಕರ್ ಸಾರ್ವಜನಿಕರ ಹಿತಾಸಕ್ತಿಗೂ ನ್ಯಾಯ ಸಿಗದೆ ಹೋಗಿದ್ದರಿಂದ ಬೇಸತ್ತು, ಅಧಿಕಾರ ನಿರ್ಲಕ್ಷ್ಯಕ್ಕೆ ರೋಸಿಹೋಗಿ ದಯಾಮರಣಕ್ಕೆ ಶರಣಾಗುವ ನಿರ್ಧಾರ ಮಾಡಿದ್ದಾರೆ. ಸ್ವತಃ ಪ್ರಭಾಕರ್ ತಮ್ಮ ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಿ ಅಧಿಕಾರಿಗಳ ವಿರುದ್ಧ ನನ್ನಿಂದ ಏನೂ ಮಾಡಲು ಸಾಧ್ಯವಿಲ್ಲದೇ ಹೋದಾಗ ಕೊನೆಗೆ ದಯಾ ಮರಣವೇ ಗತಿ ಎಂಬ ನಿಲುವಿಗೆ ಬಂದಿದ್ದಾರೆ.
ಪ್ರಕರಣ ಏನು?: ದರಸಗುಪ್ಪೆ ಗ್ರಾಮದ ಸರ್ವೆ ನಂ 1078/1, 1078/4 ಹಾಗೂ 1033/1ಬಿ2 ರ ಜಮೀನಿನ ನೆಡುತೋಪು ಇರುವ ಸಿಡಿಎಸ್ ನಾಲೆಯ 62ನೇ ತೂಬಿನ ಕೆಳಗೆ ಹಾದು ಹೋಗುವ ಪಿಕಪ್ ನಾಲಾ ಹಾಗೂ ರಸ್ತೆ ಒತ್ತುವರಿಯಾಗಿದೆ. ಈ ಖರಾಬು (ಸರ್ಕಾರಿ ಜಮೀನು) ಸಾರ್ವಜನಿಕ ನಾಲಾ ಹಾಗೂ ನಾಲಾ ಏರಿ ರಸ್ತೆ ಒತ್ತುವರಿ ತೆರವು ದುರಸ್ತಿ ಕಾಮಗಾರಿ ನಡೆಸುವಂತೆ ಒತ್ತಾಯಿಸಿ ಕಳೆದ 2004ರಿಂದಲೂ ಒತ್ತಾಯ ಮಾಡುತ್ತಲೇ ಬರಲಾಗಿದೆ.
ಈ ಸಂಬಂಧವಾಗಿ ನಂ. 3 ವಿಸಿ ಉಪವಿಭಾಗ ಪಾಂಡವಪುರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿಗೆ 46 ಬಾರಿ ಮನವಿ ಪತ್ರ ನೀಡಲಾಗಿದೆ. ಕೆ.ಆರ್. ಸಾಗರ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಕಚೇರಿಗೆ 16 ಬಾರಿ, ಮಂಡ್ಯ ಅಧೀಕ್ಷಕ ಇಂಜಿನಿಯರ್ 10 ಬಾರಿ, ಶ್ರೀರಂಗಪಟ್ಟಣ ತಹಸೀಲ್ದಾರ್ ರವರಿಗೆ ಒಟ್ಟು 43 ಬಾರಿ ಮನವಿ, ಪಾಂಡವಪುರ ಉಪವಿಭಾಗಾಕಾರಿಗಳಿಗೆ 16 ಬಾರಿ, ಜಿಲ್ಲಾಕಾರಿಗಳಿಗೂ 16 ಬಾರಿ ಸೇರಿದಂತೆ ಸಂಬಂಧ ಪಟ್ಟ ಇಲಾಖೆಗಳಿಗೆ ಒಟ್ಟು 247 ಪತ್ರಗಳ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಾರ್ವಜನಿಕರ ಆಸ್ತಿ ಕಬಳಿಕೆ ವಿಷಯ ಗೊತ್ತಿದ್ದರೂ ಕಾನೂನಿನ ಪ್ರಕಾರ ಯಾವುದೇ ಕ್ರಮಕೈಗೊಳ್ಳದೆ ಇಲಾಖೆ ಅಧಿಕಾರಿಗಳು ಒತ್ತುವರಿದಾರರಿಗೆ ಪರೋಕ್ಷವಾಗಿ ನೆರವು ನೀಡುತ್ತಿದ್ದಾರೆ. ಅಧಿಕಾರದ ವೈಫಲ್ಯ, ಉದಾಸೀನ, ವಿಳಂಬ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೂ ಅಗತ್ಯ ಕ್ರಮಕೈಗೊಳ್ಳದೆ ಮೌನವಹಿಸಿದ್ದಾರೆ.
247 ಬಾರಿ ಮನವಿ ಸಲ್ಲಿಸಿ ಸಾರ್ವಜನಿಕರ ಆಸ್ತಿ ಉಳಿಸುವ ಪ್ರಯತ್ನ ನಡೆಸಿ ನನಗೂ ಕೂಡ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ. ನನಗೆ ಸೂಕ್ತ ರಕ್ಷಣೆ ನೀಡದೆ ಅಧಿಕಾರಿಗಳ ಬೇಜವಾಬ್ದಾರಿತನ ನಡೆದುಕೊಳ್ಳುತ್ತಿದ್ದಾರೆ. ಈ ಹಿಂದೆ ನನ್ನ ಮೇಲೆ ಹಲ್ಲೆ ನಡೆದಿದೆ ಆದರೂ ಯಾವುದೇ ಕ್ರಮಕೈಗೊಂಡಿಲ್ಲ. ಸಾರ್ವಜನಿಕ ನಾಲಾ ಹಾಗೂ ಏರಿ ರಸ್ತೆ ಒತ್ತುವರಿ ತೆರವು, ದುರಸ್ತಿ ಅಭಿವೃದ್ಧಿ ಕಾಮಗಾರಿ ಬಗ್ಗೆ ಹಲವು ವರ್ಷಗಳಿಂದ ಲಿಖಿತ ಹಾಗೂ ಮೌಖಿಕವಾಗಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಅ.23, ಬೆಳಿಗ್ಗೆ 11 ಗಂಟೆಯಿಂದ ಪಟ್ಟಣದ ಮಿನಿ ವಿಧಾನಸೌಧದ ಕಚೇರಿ ಎದುರು ನ್ಯಾಯ ಅಥವಾ ದಯಾಮರಣ ಕರುಣಿಸುವಂತೆ ಒತ್ತಾಯಿಸಿ ಅನುಮತಿ ಪತ್ರ ದೊರಕುವ ತನಕ ಶಾಂತಿಯುತ ಸತ್ಯಾಗ್ರಹ ಮಾಡಲು ತೀರ್ಮಾನಿಸಿದ್ದೇನೆ ಎಂದು ಪ್ರಭಾಕರ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.