
ನವದೆಹಲಿ[ಸೆ.07]: ಐಎನ್ಎಕ್ಸ್ ಮೀಡಿಯಾ ಪ್ರಕರಣ ಸಂಬಂಧ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಗುರಿಯಾಗಿ ತಿಹಾರ್ ಜೈಲು ಸೇರಿರುವ ಕಾಂಗ್ರೆಸ್ಸಿನ ಪ್ರಭಾವಿ ನಾಯಕ ಪಿ. ಚಿದಂಬರಂ ಅವರಿಗೆ ಮೊದಲೇ ದಿನವೇ ನಿದ್ರೆ ಬಂದಿಲ್ಲ.
ಗುರುವಾರ ಸಂಜೆ ಏಷ್ಯಾದ ಅತಿದೊಡ್ಡ ಕಾರಾಗೃಹ ಸೇರಿದ ಚಿದಂಬರಂ ಅವರಿಗೆ ಜೈಲಿನ ಅಧಿಕಾರಿಗಳು ರೋಟಿ, ದಾಲ್, ಸಬ್ಜಿ ಹಾಗೂ ಅನ್ನ ನೀಡಿದರು. ಮೆತ್ತನೆಯ ಹಾಸಿಗೆಯ ಮೇಲೆ ಪವಡಿಸುತ್ತಿದ್ದ ಚಿದಂಬರಂ ಅವರಿಗೆ ಆ ಸೌಕರ್ಯ ಜೈಲಿನಲ್ಲಿ ಇಲ್ಲ. ಹೀಗಾಗಿ ಮರದ ಮಲಗೆ ಮೇಲೆ ಚಿದು ನಿದ್ರೆ ಮಾಡಲು ಪ್ರಯತ್ನಿಸಿದರಾದರೂ ಅವರಿಗೆ ಹೆಚ್ಚು ನಿದ್ರೆ ಬರಲಿಲ್ಲ ಎಂದು ಮೂಲಗಳು ತಿಳಿಸಿವೆ. ಚಿದಂಬರಂ ಅವರು ಮಂಚಕ್ಕೆ ಕೋರಿಕೆ ಇಟ್ಟಿದ್ದಾರೆ. ಆದರೆ ವೈದ್ಯರು ಪರೀಕ್ಷೆ ನಡೆಸಿ, ಅಗತ್ಯ ಇದೆ ಎಂದು ಹೇಳಿದರಷ್ಟೇ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಆರ್ಥಿಕತೆ ಚಿಂತೆ: ಜೈಲಿಗೆ ಹೊರಡುವ ಮುನ್ನ ಚಿದಂಬರಂ ಹೀಗಂದ್ರಂತೆ!
ಬೆಳಗ್ಗೆ ಎದ್ದು ಜೈಲಿನ ಆವರಣದಲ್ಲಿ ವಾಯು ವಿಹಾರ ನಡೆಸಿ, ಧಾರ್ಮಿಕ ಗ್ರಂಥಗಳನ್ನು ಚಿದಂಬರಂ ಅವರು ಓದಿದರು. ನಂತರ ಬೆಳಗ್ಗೆ 6ರ ವೇಳೆಗೆ ಚಹಾ ಹಾಗೂ ಗಂಜಿಯನ್ನು ಸೇವಿಸಿದರು. ಪತ್ರಿಕೆಗಳನ್ನು ಅವರಿಗೆ ಒದಗಿಸಲಾಗಿತ್ತು.
ಕೋರ್ಟಿನ ಆದೇಶದ ಅನುಸಾರ ಚಿದಂಬರಂ ಅವರಿಗೆ ಪ್ರತ್ಯೇಕ ಕೊಠಡಿ ಹಾಗೂ ಪಾಶ್ಚಾತ್ಯ ಶೈಲಿಯ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅದು ಬಿಟ್ಟರೆ ವಿಶೇಷ ಸೌಕರ್ಯ ಒದಗಿಸಲಾಗಿಲ್ಲ. ಜೈಲಿನ ಗ್ರಂಥಾಲಯ ಬಳಸಲು ಹಾಗೂ ನಿರ್ದಿಷ್ಟಅವಧಿಗೆ ಟೀವಿ ನೋಡುವ ಅವಕಾಶ ಅವರಿಗಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ತಿಹಾರ್ ಜೈಲಿಗೆ ಹೊರಟ ಚಿದಂಬರಂ: ವಿಶೇಷ ಸೆಲ್’ನಲ್ಲಿ 14 ದಿನ!
ಗುರುವಾರ ಸಂಜೆ ಜೈಲಿಗೆ ಬರುತ್ತಿದ್ದಂತೆ ಚಿದಂಬರಂ ಅವರನ್ನು ಕಡ್ಡಾಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಕೋರ್ಟಿನ ಅನುಮತಿ ಪಡೆದು, ಕನ್ನಡಕ ಹಾಗೂ ಔಷಧಗಳನ್ನು ಅವರು ಜೈಲಿಗೆ ತಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.