
ಬೆಂಗಳೂರು: ಹೊಸ ಕಲ್ಪನೆಯ ರಾಜಕೀಯ ಸಿದ್ಧಾಂತ ಪ್ರತಿಪಾದಿಸಿ ರಾಜ್ಯದಲ್ಲಿ ಸಂಚಲನವನ್ನುಂಟು ಮಾಡಿದ್ದ ನಟ ‘ರಿಯಲ್ ಸ್ಟಾರ್’ ಉಪೇಂದ್ರ ಅವರು ರಾಜಕೀಯ ಪಕ್ಷದ ಹೆಸರು ಹಾಗೂ ಧ್ಯೇಯೋದ್ದೇಶಗಳನ್ನು ಇಂದು ಮಂಗಳವಾರ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಎರಡು ತಿಂಗಳ ಹಿಂದೆ ಹೊಸ ಆಲೋಚನೆಯೊಂದಿಗೆ ರಾಜಕೀಯ ಪ್ರವೇಶಿಸುವ ಬಗ್ಗೆ ಪ್ರಕಟಿಸಿದ್ದ ಉಪೇಂದ್ರ ಅವರು ‘ಪ್ರಜಾಕೀಯ’ ಎಂಬ ಹೆಸರಿನಲ್ಲಿ ರಾಜಕೀಯಕ್ಕೆ ಮತ್ತೊಂದು ಆಯಾಮವನ್ನು ನೀಡಿದ್ದರು. ಆದರೆ ಇದು ಪಕ್ಷದ ಅಧಿಕೃತ ಹೆಸರಾಗಿರಲಿಲ್ಲ. ಪ್ರಜಾಕೀಯ ಹೆಸರಲ್ಲಿ ರಾಜಕಾರಣಕ್ಕೆ ಕಾಲಿಟ್ಟ ಅವರು ಎರಡು ತಿಂಗಳ ಅವಧಿಯಲ್ಲಿ ಹಲವು ರೂಪುರೇಷೆಗಳನ್ನು ರೂಪಿಸಿದ್ದರು. ವಿವಿಧ ಕ್ಷೇತ್ರದ ಗಣ್ಯರನ್ನು ಸಂಪರ್ಕಿಸಿ ಹಲವು ಸಲಹೆಗಳನ್ನು ಪಡೆದುಕೊಂಡಿದ್ದರು. ಎಲ್ಲರ ಸಲಹೆಗಳನ್ನು ಕ್ರೋಡೀಕರಿಸಿ ಹೊಸ ರೂಪುರೇಷೆ ಸಿದ್ಧಪಡಿಸಿದ್ದಾರೆ. ಎರಡು ತಿಂಗಳ ಅವಿರತವಾಗಿ ದುಡಿದ ಫಲವಾಗಿ ಪಕ್ಷವು ಸಾಕಷ್ಟು ಬೆಳವಣಿಗೆಯನ್ನು ಕಂಡಿದೆ. ಹೀಗಾಗಿ ಸ್ಪಷ್ಟವಾದ ರೂಪುರೇಷೆಗಳನ್ನು ತೆಗೆದುಕೊಂಡಿದೆ. ಅವುಗಳನ್ನು ಜನತೆಯೊಂದಿಗೆ ಹಂಚಿಕೊಳ್ಳಲು ಉಪೇಂದ್ರ ಅವರು ಮಂಗಳವಾರ ಶಿವಾನಂದ ಸರ್ಕಲ್ ಬಳಿ ಇರುವ ಗಾಂಧಿ ಭವನದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದಾರೆ. ಪಕ್ಷದ ಹೆಸರು, ಮುಂಬರುವ ಚುನಾವಣೆಯಲ್ಲಿ ಪಕ್ಷದ ಪಾತ್ರ, ಪಕ್ಷದ ಅಧಿಕೃತ ಘೋಷಣೆ, ಕಾರ್ಯಕಾರಿ ಸಮಿತಿ, ಪ್ರಣಾಳಿಕೆ ಕುರಿತು ಮಾಹಿತಿ ಹಂಚಿಕೊಳ್ಳಲಿದ್ದಾರೆ.
epaperkannadaprabha.com
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.