ನನ್ನ ಸ್ನೇಹಿತ ಲೋಕನಾಥ್ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿರುವ ಶಾಂತಿನಗರ ಕ್ಷೇತ್ರದ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಸೈಕೋಪಾತ್ ಇರಬೇಕು. ಆತನಿಗೆ ಸೂಕ್ತವಾದ ಚಿಕಿತ್ಸೆ ಕೊಡಿಸಬೇಕಿದೆ ಎಂದು ಬಳ್ಳಾರಿ ಸಂಸದ ಬಿ. ಶ್ರೀರಾಮುಲು ಕಟುವಾಗಿ ಟೀಕಿಸಿದ್ದಾರೆ.
ಬೆಂಗಳೂರು: ನನ್ನ ಸ್ನೇಹಿತ ಲೋಕನಾಥ್ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿರುವ ಶಾಂತಿನಗರ ಕ್ಷೇತ್ರದ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಸೈಕೋಪಾತ್ ಇರಬೇಕು. ಆತನಿಗೆ ಸೂಕ್ತವಾದ ಚಿಕಿತ್ಸೆ ಕೊಡಿಸಬೇಕಿದೆ ಎಂದು ಬಳ್ಳಾರಿ ಸಂಸದ ಬಿ. ಶ್ರೀರಾಮುಲು ಕಟುವಾಗಿ ಟೀಕಿಸಿದ್ದಾರೆ.
ಮಲ್ಯ ಆಸ್ಪತ್ರೆಗೆ ಗುರುವಾರ ತಮ್ಮ ಆಪ್ತ ಸ್ನೇಹಿತ ಹಾಗೂ ಗಾಲಿ ಜನಾರ್ದನ ರೆಡ್ಡಿ ಜತೆ ಆಗಮಿಸಿ ವಿದ್ವತ್ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ರಾಜ್ಯದಲ್ಲಿ ಕಾಂಗ್ರೆಸ್ ಮಂತ್ರಿಗಳು, ಶಾಸಕರು ಹಾಗೂ ಅವರ ಮಕ್ಕಳ ಗೂಂಡಾಗಿರಿ ನಡೆಯುತ್ತಿದೆ ಎಂದು ದೂರಿದರು.
ಮೊಹಮ್ಮದ್ ನಲಪಾಡ್ ಸೈಕೋಪಾತ್ ಇರಬೇಕು. ಈ ಘಟನೆ ಕುರಿತು ವಿದ್ವತ್ ತಂದೆ ಜೊತೆ ಮಾತನಾಡಿದ್ದೇನೆ. ಈ ಹಿಂದೆಯೂ ಸಹ ಇಂತಹ ಘಟನೆಗಳ ನಡೆದಿರುವ ಬಗ್ಗೆ ಅವರು ಹೇಳಿದ್ದಾರೆ. ಹೀಗಾಗಿ ನಲಪಾಡ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮಾದಕ ವ್ಯಸನಿ-ರೆಡ್ಡಿ ಹೇಳಿಕೆ: ‘ಲೋಕನಾಥ್ ನನ್ನ ಆತ್ಮೀಯ ಸ್ನೇಹಿತ. ಆತನ ಮಗನ ಮೇಲೆ ನಡೆದಿರುವ ಘಟನೆ ಘೋರವಾಗಿದೆ. ನಲಪಾಡ್ ಮಾದಕ ವ್ಯಸನಿ. ಇಂತಹ ಕೃತ್ಯ ಎಸಗಿದ ಮೊಹಮ್ಮದ್ ನಲಪಾಡ್ನನ್ನು ಮೊಣಕಾಲಲ್ಲಿ ನಡೆಸುತ್ತಾ ಸಾರ್ವಜನಿಕವಾಗಿ ಪೊಲೀಸರು ಮೆರವಣಿಗೆ ಮಾಡಬೇಕಿತ್ತು’ ಎಂದು ಇದೇ ವೇಳೆ ಮಾತನಾಡಿದ ಜನಾರ್ದನ ರೆಡ್ಡಿ ಕಿಡಿಕಾರಿದರು.