ಕರ್ನಾಟಕದ 27 ಸಂಸದರು ಸೇರಿ, ಹೊಸದಾಗಿ ಆಯ್ಕೆಯಾಗಿರುವ ಸಂಸದರಿಂದ ಪ್ರಮಾಣ ವಚನ ಸ್ವೀಕಾರ| ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಕರ್ನಾಟಕದ ಯುವ ಸಂಸದರಾದ ಪ್ರತಾಪ್ ಸಿಂಹ್ ಹಾಗೂ ತೇಜಸ್ವಿ ಸೂರ್ಯ
ನವದೆಹಲಿ[ಜೂ.18]: ಮಳೆಗಾಲದ ಅಧಿವೇಶನದ ಮೊದಲ ದಿನ ಕರ್ನಾಟಕದ 27 ಸಂಸದರು ಸೇರಿ, ಹೊಸದಾಗಿ ಆಯ್ಕೆಯಾಗಿರುವ ಸಂಸದರು ಪ್ರಮಾಣ ವಚನ ಸ್ವೀಕರಿಸಿದರು. ಕರ್ನಾಟಕದ ಯುವ ಸಂಸದರಾದ ಪ್ರತಾಪ್ ಸಿಂಹ್ ಹಾಗೂ ತೇಜಸ್ವಿ ಸೂರ್ಯ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದು ವಿಶೇಷವಾಗಿತ್ತು. ಅಷ್ಟಕ್ಕೂ ಸಿಂಹ ಅವರಿಗೆ ಈ ಕೊಡವ ಉಡುಗೆ ತೊಡಲು ಐಡಿಯಾ ಕೊಟ್ಟಿದ್ದು ಯಾರು?
ನಿನ್ನೆ ಸಂಸತ್ಗೆ ಪ್ರಮಾಣ ವಚನಕ್ಕೆ ಬಂದ ಸಂಸದರಲ್ಲಿ ಅತಿ ಹೆಚ್ಚು ಮಿಂಚಿದ್ದು ಮೈಸೂರು ಸಂಸದ ಪ್ರತಾಪ್ ಸಿಂಹ. ಎದ್ದು ಕಾಣುತ್ತಿದ್ದ ಪ್ರತಾಪ್ ಸಿಂಹರ ಕೊಡಗಿನ ಉಡುಗೆಯಿಂದಾಗಿ ಕಾರಿಡಾರ್ನಲ್ಲಿ ಹಾಗೂ ಸೆಂಟ್ರಲ… ಹಾಲ…ನಲ್ಲಿ ಬಹಳಷ್ಟುಜನ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.
ಸಂಸತ್ತಿನಲ್ಲಿ ಸಾಂಸ್ಕೃತಿಕ ಉಡುಗೆಯಲ್ಲಿ ಮಿಂಚಿದ ನಮ್ಮ ಸಂಸದರು!
2 ದಿನದ ಹಿಂದೆ ಪ್ರತಾಪ್ ಮತ್ತು ತೇಜಸ್ವಿ ಸೂರ್ಯ ಪಂಚೆ ಶಲ್ಯ ಹಾಕಿಕೊಂಡು ಪ್ರಮಾಣ ತೆಗೆದುಕೊಳ್ಳಬೇಕು ಅಂದುಕೊಂಡಿದ್ದರಂತೆ. ಆದರೆ ಪ್ರತಾಪ್ ಪತ್ನಿ ಅರ್ಪಿತಾ, ‘ಬೇಡ, ಕೊಡಗಿನ ದಿರಿಸು ಧರಿಸಿ. ದಿಲ್ಲಿಯಲ್ಲೂ ಕೊಡವ ಸಂಸ್ಕೃತಿ ತೋರಿಸಿದ ಹಾಗೆ ಆಗುತ್ತದೆ’ ಅಂದರಂತೆ. ಸಂಸದ ಆದರೇನು, ಹೆಂಡತಿ ಮಾತು ಮೀರೋದುಂಟೆ!
ಸುವರ್ಣ ನ್ಯೂಸ್ ದಿಲ್ಲಿ ಪ್ರತಿನಿಧಿ ಪ್ರಶಾಂತ್ ನಾತು ಅವರ ಕಾಲಂನಿಂದ