
ಬೆಂಗಳೂರು (ಅ.02): ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮೊನ್ನೆ ನಾಗಪುರದಲ್ಲಿ ಹೇಳಿದ ಮಾತು ಈಗ ವಿವಾದದ ಕಿಡಿ ಹೊತ್ತಿಸಿದೆ. ಆ ಒಂದು ಮಾತು ಈಗ ಆರ್ಎಸ್ಎಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದೆ.
ನಾಗಪುರದ ಆರ್ಎಸ್ಎಸ್ ಕಚೇರಿಯಲ್ಲಿ ವಿಜಯದಶಮಿಯಂದು ಭಾಷಣ ಮಾಡಿದ ಮೋಹನ್ ಭಾಗವತ್ ಕೇರಳದ ಕಮ್ಯುನಿಸ್ಟ್ ಸರ್ಕಾರಮತ್ತು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಹರಿಹಾಯ್ದರು. ಈ ಎರಡೂ ಸರ್ಕಾರಗಳೂ ಜಿಹಾದಿ ಶಕ್ತಿಗಳ ಪರವಾಗಿ ಕೆಲಸ ಮಾಡುತ್ತಿವೆ. ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಅಂತಹ ಶಕ್ತಿಗಳನ್ನು ಪೋಷಿಸುವ ಕೆಲಸ ಮಾಡುತ್ತಿವೆ ಎಂದು ಟೀಕಿಸಿದ್ದರು..ದೇಶದ ಸುರಕ್ಷತೆ ಮತ್ತು ಸಾರ್ವಭೌಮತೆ ವಿಚಾರವಾಗಿ ಯಾರೂ ರಾಜಿ ಮಾಡಿಕೊಳ್ಳಬಾರದು ಎಂದು ಭಾಗವತ್ ಸಲಹೆ ನೀಡಿದ್ದರು.
ಕೇರಳ ಸರ್ಕಾರ ಜಿಹಾದಿ ಶಕ್ತಿಗಳಿಗೆ, ದೇಶ ದ್ರೋಹಿಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂಬ ಮೋಹನ್ ಭಾಗವತ್ ಆರೋಪಕ್ಕೆ ತಿರುಗೇಟು ನೀಡಿರುವ ಕೇರಳ ಸಿಎಂ ಪಿನರಾಯಿ ವಿಜಯನ್ ದೇಶದಲ್ಲಿ ಆರ್ಎಸ್ಎಸ್ ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಸೃಷ್ಟಿಸುತ್ತಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಬೆನ್ನು ತೋರಿಸಿ ಓಡಿ ಹೋದ ಆರ್ಎಸ್ಎಸ್ನಿಂದ ನಾವು ದೇಶಪ್ರೇಮದ ಪಾಠವನ್ನು ಕಲಿಯಬೇಕಿಲ್ಲ ಎಂದು ಪ್ರತ್ಯುತ್ತರ ನೀಡಿದ್ದಾರೆ. ಅಷ್ಟೇ ಅಲ್ಲದೇ ಕೇರಳದಲ್ಲಿ ರಾಜಕೀಯವಾಗಿ ಗೆಲುವು ಸಾಧಿಸುವಲ್ಲಿ ವಿಫಲವಾಗಿರುವ ಬಿಜೆಪಿ ಕೋಮು ವೈಷಮ್ಯ ಸೃಷ್ಟಿಸಿ ಅಧಿಕಾರ ಹಿಡಿಯುವ ಯತ್ನ ನಡೆಸುತ್ತಿದೆ. ಆದರೆ ಅದು ಫಲಿಸುವುದಿಲ್ಲ ಎಂದಿದ್ದಾರೆ. ಅಲ್ಪ ಸಂಖ್ಯಾತರನ್ನು ದೇಶದ ಭದ್ರತೆಗೆ ಅಪಾಯ ಎಂದು ಬಿಂಬಿಸುವುದೇ ಆರ್ಎಸ್ಎಸ್ನ ಅಜೆಂಡಾ ಎಂದು ಕಿಡಿಕಾರಿದ್ದಾರೆ.
ಮೋಹನ್ ಭಾಗವತ್ ಅವರು ನೀಡಿದ ಹೇಳಿಕೆಯನ್ನು ಕೇರಳ ಸಿಎಂ ಪಿನರಾಯಿ ವಿಜಯನ್ ತಿರುಚುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಕೇರಳ ಸರ್ಕಾರ ಜಿಹಾದಿಗಳಿಗೆ ನೆಲೆಯನ್ನು ನೀಡುವ ಮೂಲಕ ಉಗ್ರವಾದಕ್ಕೆ ಬೆಂಬಲ ನೀಡುತ್ತಿದೆ ಎಂಬ ಸತ್ಯವನ್ನು ಒಪ್ಪಿಕೊಳ್ಳಿ. ಇದನ್ನು ಬಿಟ್ಟು ಬೆಂಕಿಯ ಜೊತೆ ಆಟವಾಡಬೇಡಿ ಎಂದು ಆರ್ಎಸ್ಎಸ್ ಎಚ್ಚರಿಕೆ ನೀಡಿದೆ.
ಕೇರಳದ ಕೆಲ ಸಂಘಟನೆಗಳು ಐಸಿಸ್ ಮತ್ತು ಬಭಯೋತ್ಪಾದಕ ಸಂಘಟನೆಗಳ ಪರವಾಗಿ ಕೆಲಸ ಮಾಡುತ್ತಿರುವುದನ್ನು ಎನ್ಐಎ ಪತ್ತೆ ಹಚ್ಚಿದೆ. ಆ ಹಿನ್ನೆಲೆಯಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವರ್ ಕೇರಳ ಸರ್ಕಾರವನ್ನು ಟೀಕಿಸಿದ್ದರು. ಕೇರಳದಲ್ಲಿ ಹೆಚ್ಚುತ್ತಿರುವ ಮುಸ್ಲಿಂ ಪ್ರಾಬಲ್ಯವನ್ನು ಮಟ್ಟ ಹಾಕಲು ಆರ್ಎಸ್ಎಸ್ ಒಳಗೊಳಗೇ ಯತ್ನಿಸುತ್ತಿರುವುದು ರಹಸ್ಯವೇನಲ್ಲ. ಅದರ ಭಾಗವಾಗಿಯೇ ಇತ್ತೀಚೆಗೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಕೇರಳ ಪ್ರವಾಸ ಮಾಡಿದ್ದರು. ಈ ಕಾರಣಕ್ಕಾಗಿಯೇ ಆರ್ಎಸ್ಎಸ್ ಅನ್ನು ಟಾರ್ಗೆಟ್ ಮಾಡಿಕೊಂಡು ಪಿನರಾಯಿ ವಿಜಯನ್ ಮೋಹನ್ ಭಾಗವತ್ ವಿರುದ್ಧ ಮುಗಿಬಿದ್ದಿದ್ದಾರೆ. ಆ ಮೂಲಕ ರಾಜಕೀಯವಾಗಿ ಕೇರಳವನ್ನು ಕಮ್ಯುನಿಸ್ಟರ ಭದ್ರ ನೆಲೆಯಾಗಿ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಇದು ಕೇರಳದಲ್ಲಿ ಕಮ್ಯುನಿಸ್ಟ್ ವರ್ಸಸ್ ಆರ್ಎಸ್ಎಸ್ ಎಂಬ ವಾತಾವರಣ ಸೃಷ್ಟಿಗೆ ಕಾರಣವಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.