
ನವದೆಹಲಿ (ಮಾ. 27): 2019 ರ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅತಿ ಹೆಚ್ಚು ಸಕ್ರಿಯವಾಗಿರುವುದು ಪ್ರಾದೇಶಿಕ ಪಕ್ಷಗಳು. ಮೋದಿ ಅವರ ಏಕಚಕ್ರಾಧಿಪತ್ಯ ವಿರೋಧಿಸುತ್ತಾ ಹೊಸ ಹೊಸ ಮಿತ್ರರನ್ನು ಹುಡುಕುತ್ತಿರುವ ಪ್ರಾದೇಶಿಕ ಸತ್ರಪರು, ಇತ್ತ ರಾಹುಲ್ ಗಾಂಧಿಯನ್ನು ಕೂಡ ಒಪ್ಪಲು ಸಿದ್ಧರಿಲ್ಲ. ಅತ್ತ ರಾಹುಲ್ ಎಷ್ಟೇ ಕೇಳಿಕೊಂಡರೂ ಕಾಂಗ್ರೆಸ್ ಜೊತೆ ಮೈತ್ರಿಗೆ ಎಡ ಪಕ್ಷಗಳು ತಯಾರಿಲ್ಲ. ಇನ್ನು ಮಮತಾ ಬ್ಯಾನರ್ಜಿ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಜೊತೆಗೆ ತೃತೀಯ ರಂಗ ಹುಟ್ಟುಹಾಕಲು ತಿರುಗುತ್ತಿದ್ದು, ಶರದ್ ಪವಾರ್ ಕೂಡ ಎಂದಿನಂತೆ ಎಲ್ಲರ ಹೆಗಲ ಮೇಲೂ ಕೈಹಾಕಿ ಕುಳಿತಿದ್ದಾರೆ.
ಉತ್ತರ ಪ್ರದೇಶದಲ್ಲಿ ಅಖಿಲೇಶ್, ಮಾಯಾವತಿ ಒಟ್ಟಾಗಿದ್ದರೂ, ಫೂಲ್ಪುರವನ್ನು ಕಾಂಗ್ರೆಸ್’ಗೆ ಬಿಟ್ಟು ಕೊಡಿ ಎಂದು ರಾಹುಲ್ ಕೇಳಿದ್ದಾರೆ. ಆಗ ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ನನಗೆ ಸೀಟು ಬಿಟ್ಟುಕೊಡಿ ಎಂದಿದ್ದಾರೆ ಮಾಯಾವತಿ. ಸದ್ಯದ ಮಟ್ಟಿಗೆ ರಾಹುಲ್ ಜೊತೆಗೆ ಸ್ವಲ್ಪ ಗಟ್ಟಿಯಾಗಿ ನಿಂತವರೆಂದರೆ ಲಾಲು ಪುತ್ರ ತೇಜಸ್ವಿ ಯಾದವ್ ಮಾತ್ರ. ಹೀಗಾಗಿಯೇ ಚಿಂತೆಗೊಳಗಾಗಿರುವ ರಾಹುಲ್, ಕಳೆದ ವಾರ ದಿಲ್ಲಿಯ ಶರದ್ ಪವಾರ್ ಮನೆಗೆ ತಾನೇ ತೆರಳಿ ಕಾಂಗ್ರೆಸ್ ನೇತೃತ್ವ
ಒಪ್ಪಿಕೊಂಡರೆ ಮಾತ್ರ ಮೋದಿ ಸೋಲಿಸಲು ಸಾಧ್ಯ ಎನ್ನುವುದನ್ನು ಮಮತಾ ಮತ್ತು ಇತರರಿಗೆ ತಿಳಿಸಿ ಹೇಳಿ ಎಂದು ಕೋರಿದ್ದಾರಂತೆ. ಆದರೆ ಮರಾಠಿ ಪತ್ರಕರ್ತರ ಎದುರು ಶರದ್ ಪವಾರ್ ಹೇಳಿದ್ದೇನು ಗೊತ್ತಾ? ರಾಹುಲ್ ಒಂಟಿಯಾಗಿ ಚುನಾವಣೆ ಗೆಲ್ಲುವ ಸಾಮರ್ಥ್ಯ ತೋರಿದರೆ ಮಾತ್ರ ಅವರನ್ನು ನಾಯಕ ಎಂದು ಒಪ್ಪಿಕೊಳ್ಳಬಹುದು. ಇಲ್ಲವಾದಲ್ಲಿ 1996 ರಂತೆ ತೃತೀಯ ರಂಗಕ್ಕೆ ಕಾಂಗ್ರೆಸ್ ಅಥವಾ ಬಿಜೆಪಿ ಬೆಂಬಲ ಕೊಡುವ ಸ್ಥಿತಿ ಬರಬಹುದು.
ರಾಜಕಾರಣದ ಬಗ್ಗೆ ಹೆಚ್ಚಿನ ಮಾಹಿತಿಗೆ ಇಂಡಿಯಾ ಗೇಟ್ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.