
ಬೆಂಗಳೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಉಪಾದ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ತಪ್ಪು ಧೋರಣೆಗಳು ಕಾಶ್ಮೀರದಲ್ಲಿ ಪಾಕಿಸ್ತಾನಕ್ಕೆ ಮೂಗುತೂರಿಸಲು ಅಸ್ಪದ ಮಾಡಿಕೊಟ್ಟಿವೆ ಎಂದು ಹೇಳಿದ್ದಾರೆ.
ನಿನ್ನೆ ಕಾಶ್ಮೀರ ಸಮಸ್ಯೆ ಬಗ್ಗೆ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ, ಬಂದೂಕುಗಳಿಂದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ, ಕಾಶ್ಮಿರಿಗಳನ್ನು ಅಪ್ಪಿಕೊಳ್ಳುವುದರಿಂದ ಸಾಧ್ಯವಿದೆ ಎಂದು ಹೇಳಿದ್ದರು.
ಜಮ್ಮು ಮತ್ತು ಕಾಶ್ಮೀರದ ಜನರಲ್ಲಿ ದ್ವೇಷ ಮತ್ತು ಆಕ್ರೋಶದ ವಾತಾವರಣ ನಿರ್ಮಾಣವಾಗಲು ಮೋದಿಯವರೇ ಕಾರಣ. ದ್ವೇಷ ಹಾಗೂ ಹಿಂಸೆಯಿಂದ ಪ್ರಯೋಜನ ಪಡೆಯುತ್ತಿರುವುದು ಪಾಕಿಸ್ತಾನ ಮಾತ್ರ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕಳೆದ ಸರ್ಕಾರದ ಆಡಳಿತಾವಧಿಯಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್, ಹಾಗೂ ಇತರ ನಾಯಕರುಗಳಾದ ಚಿದಂಬರಂ, ಜೈರಾಮ್ ರಮೇಶ್’ನವರು ಯಾವುದೇ ‘ಡ್ರಾಮಾ’ ಮಾಡದೇ ಕಾಶ್ಮೀರ ಸಮಸ್ಯೆಯನ್ನು ನಿಭಾಯಿಸಿದ್ದರು. ಆದರೆ ಆ 10 ವರ್ಷಗಳ ಪ್ರಯತ್ನವನ್ನು ಮೋದಿಯವರು ಕೇವಲ ಒಂದು ತಿಂಗಳಲ್ಲಿ ಕೆಡಿಸಿದ್ದಾರೆ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ಶಾಂತಿ ಸ್ಥಾಪಿಸಲು 10 ವರ್ಷಗಳ ಕಾಲ ಶ್ರಮಪಟ್ಟಿದ್ದೇವೆ. ನಾವಲ್ಲಿ ಪಂಚಾಯತ್ ಚುನಾವಣೆಗಳನ್ನು ನಡೆಸಿದ್ದೇವೆ, ಉದ್ಯೋಗ ಸೃಷ್ಟಿಸಿದ್ದೇವೆ. ಸಾವಿರಾರು ಮಹಿಳೆಯರಿಗೆ ಬ್ಯಾಂಕಿನತ್ತ ಬರುವಂತೆ ಮಾಡಿದ್ದೇವೆ. ನಾವು ಕಾಶ್ಮೀರಿಗಳನ್ನು ಅಪ್ಪಿಕೊಂಡಿದ್ದೆವು, ಅವರು ನಮ್ಮನ್ನು ಅಪ್ಪಿಕೊಂಡಿದ್ದರು. ಎಲ್ಲಿ ಶಾಂತಿ ಇರುತ್ತದೋ, ಅಲ್ಲಿ ಪಾಕಿಸ್ತಾನಕ್ಕೆ ಏನೂ ಮಾಡಲು ಸಾಧ್ಯವಿಲ್ಲ,ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.