
ಬೆಂಗಳೂರು (ಜು.30): ಗುಜರಾತ್ ರಾಜ್ಯಸಭಾ ಚುನಾವಣೆ ಎಫೆಕ್ಟ್ ಕರ್ನಾಟಕಕ್ಕೆ ತಟ್ಟಿದೆ. ಯಾಕಂದ್ರೆ ಗುಜರಾತ್ ನಲ್ಲಿನ ಕಾಂಗ್ರೆಸ್ ರಾಜಕಾರಣ ಈಗ ಕರ್ನಾಟಕಕ್ಕೆ ಶಿಫ್ಟ್ ಆಗಿದೆ. ಕಾಂಗ್ರೆಸ್ ಶಾಸಕರೂ ಕೈತಪ್ಪಿ ಹೋಗದಂತೆ ಬೆಂಗಳೂರಿಗೆ ಕರೆತಂದು ರೆಸಾರ್ಟ್ ನಲ್ಲಿ ಹಿಡಿದಿಟ್ಟುಕೊಳ್ಳಲಾಗಿದೆ. ಕಾಂಗ್ರೆಸ್ನ 44 ಶಾಸಕರನ್ನು ಬೆಂಗಳೂರಿಗೆ ಕಳುಹಿಸಿದ್ದು, ಖಾಸಗಿ ರೆಸಾರ್ಟ್ ನಲ್ಲಿ ಹೈಫೈ ಸೌಲಭ್ಯ ಪಡೆಯುತ್ತಿದ್ದಾರೆ.
ರಾಮನಗರದ ಬಿಡದಿ ರೆಸಾರ್ಟ್ ನಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಉಸ್ತುವಾರಿಯಲ್ಲಿ ಆತಿಥ್ಯ ಒದಗಿಸಲಾಗುತ್ತಿದೆ. ಈ ಮಧ್ಯೆ ರಾಷ್ಟ್ರ ರಾಜಕಾರಣದಲ್ಲೂ ಸಂಚಲನ ಸೃಷ್ಟಿಸಿದೆ. ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಹಣ, ಅಧಿಕಾರ ಮತ್ತು ತೋಳ್ಬಲ ಬಳಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಲ್ಲದೇ ಈ ಬಗ್ಗೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮುಖಂಡರು ದೂರು ನೀಡಿದ್ದಾರೆ. ಕಾಂಗ್ರೆಸ್ ಮುಖಂಡರಾದ ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಅಭಿಷೇಕ್ ಮನು ಸಿಂಘ್ವಿ, ವಿವೇಕ್ ಟಂಖಾ ಮತ್ತು ಮನೀಶ್ ತಿವಾರಿ ಆಯೋಗಕ್ಕೆ ಮನವಿ ಪತ್ರ ಸಲ್ಲಿಸಿದರು. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವುದಕ್ಕಾಗಿ ಪಕ್ಷದ ಶಾಸಕರಿಗೆ ಹಣದ, ವಿವಿಧ ಹುದ್ದೆಗಳ ಆಮಿಷವನ್ನು ತೋರಿಸಲಾಗುತ್ತಿದೆ. ಇದರ ತನಿಖೆಗಾಗಿ ಉನ್ನತ ಮಟ್ಟದ ಸಮಿತಿ ರಚಿಸಬೇಕು ಎಂದು ಕಾಂಗ್ರೆಸ್ ಮನವಿ ಸಲ್ಲಿಸಿದೆ. ಈ ಸಂಬಂಧ ವರದಿ ನೀಡುವಂತೆ ಚುನಾವಣಾ ಆಯೋಗ ಗುಜರಾತ್ ಸರ್ಕಾರಕ್ಕೆ ಸೂಚಿಸಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರು ಗುಜರಾತ್ನಿಂದ ರಾಜ್ಯಸಭೆಗೆ ಪುನರಾಯ್ಕೆ ಬಯಸಿದ್ದಾರೆ. ಒಂದು ವೇಳೆ ಮತ್ತಷ್ಟು ಶಾಸಕರು ರಾಜೀನಾಮೆ ನೀಡಿದರೆ ಅವರ ಗೆಲುವು ಕಷ್ಟವಾಗಲಿದೆ.
ಈ ಮಧ್ಯೆ ಗುಜರಾತ್ನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಮೂರು ಕ್ಷೇತ್ರಗಳ ಶಾಸಕರು ದೂರವಾಣಿ ಮೂಲಕ ತಮ್ಮ ಕ್ಷೇತ್ರದಿಂದ ಜನಾಕ್ರೋಶ ಎದುರಿಸುತ್ತಿದ್ದಾರೆ. ಹೀಗಾಗಿ ರೆಸಾರ್ಟ್ ನಲ್ಲಿ ಮೂವರು ಶಾಸಕರಿಗೆ ಮೊಬೈಲ್ ಬಳಕೆಯನ್ನು ನಿರಾಕರಿಸಲಾಗಿದೆ. ಇನ್ನು ರೆಸಾರ್ಟ್ ಗೆ ಕಾಂಗ್ರೆಸ್ ಮುಖಂಡರನ್ನು ಹೊರತುಪಡಿಸಿ ಉಳಿದವರಿಗೆ ಪ್ರವೇಶ ನಿರ್ಬಂದಿಸಲಾಗಿದ್ದು, ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇನ್ನೊಂದೆಡೆ ಇನ್ನೂ ನಾಲ್ಕು ಶಾಸಕರು ಇಂದು ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ. ಆಗಸ್ಟ್ 8 ರಂದು ರಾಜ್ಯಸಭಾ ಚುನಾವಣೆಯ ಮತದಾನವಿದ್ದು, ಆಗಸ್ಟ್ 7ರವರೆಗೂ ಎಲ್ಲಾ ಶಾಸಕರು ಇಲ್ಲೇ ಉಳಿಯಲಿದ್ದಾರೆ ಎನ್ನಲಾಗ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.