
ಬೆಂಗಳೂರು : ‘ನಮ್ಮನ್ನು ಕೇಳದಿದ್ದರೆ ನಮ್ಮ ದಾರಿ ನಮಗೆ, ಅವರ ದಾರಿ ಅವರಿಗೆ’ ಎಂದು ಹೇಳುವ ಮೂಲಕ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಮಿತ್ರಪಕ್ಷ ಕಾಂಗ್ರೆಸ್ಸಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗಮ-ಮಂಡಳಿ ನೇಮಕದ ಬಗ್ಗೆ ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ವರಿಷ್ಠರಾದ ದೇವೇಗೌಡರ ಬಳಿ ಮಾತನಾಡಿಕೊಳ್ಳಲಿ. ನಾನು ನನ್ನ ಜಿಲ್ಲೆ ಬಿಟ್ಟು ಯಾವ ಜಿಲ್ಲೆಗೂ ಕೈಹಾಕುವುದಿಲ್ಲ ಎಂದರು.
ನಮ್ಮ ಹಾಸನ ಜಿಲ್ಲೆಯಲ್ಲಿ ಆರು ಮಂದಿ ಜೆಡಿಎಸ್ ಶಾಸಕರು ಇದ್ದಾರೆ. ಕಾಂಗ್ರೆಸ್ನವರು ನಿಗಮ-ಮಂಡಳಿ ನೇಮಕದಲ್ಲಿ ನಮ್ಮ ಜಿಲ್ಲೆಯ ವಿಚಾರ ಬಂದರೆ ಕಡ್ಡಾಯವಾಗಿ ನಮ್ಮನ್ನು ಕೇಳಬೇಕು. ನಮ್ಮನ್ನು ಕೇಳದಿದ್ದರೆ ಅವರ ದಾರಿ ಅವರು ನೋಡಿಕೊಳ್ಳಲಿ ಎಂದು ನೇರವಾಗಿಯೇ ಹೇಳಿದರು.
ಸುಧಾಕರ್ ವಿರುದ್ಧ ಗರಂ: ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಡಾ. ಸುಧಾಕರ್ ವಿರುದ್ಧ ಗರಂ ಆದ ರೇವಣ್ಣ, ಸುಧಾಕರ್ ಅವರು ನಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ನಮ್ಮ ಕುಟುಂಬದ ಬಗ್ಗೆ ಮಾತನಾಡಲು ಅವರು ಯಾರು ಎಂದು ಖಾರವಾಗಿ ಕೇಳಿದರು.
ಇತ್ತೀಚೆಗೆ ಕಾಂಗ್ರೆಸ್ ಶಾಸಕರನ್ನು ಮೊದಲು ಹಿಡಿತದಲ್ಲಿ ಇಟ್ಟುಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಹೇಳಿದ್ದೇನೆ. ಈಗ ಶಾಸಕ ಸುಧಾಕರ್ ಅವರ ವಿಚಾರದಲ್ಲೂ ಇದನ್ನೇ ಹೇಳುತ್ತೇನೆ ಎಂದು ತುಸು ಕೋಪದಿಂದಲೇ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.