
ಬೆಂಗಳೂರು : ಮಾಡುವ ಅಗತ್ಯ ಸೇವೆಗಳ ನಿರ್ವಹಣೆ ಕಾಯಿದೆ(ಎಸ್ಮಾ) ಅನ್ವಯಿಸದಿರುವುದರಿಂದ ಮಾ.22ರಂದು ಬಂದ್ ನಡೆಯುವುದು ಖಚಿತ ಎಂದು ಬಿಎಂಆರ್ಸಿಎಲ್ ನೌಕರರ ಸಂಘ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ, ರಾಜ್ಯ ಸರ್ಕಾರ ಜಾರಿ ಮಾಡಿದ್ದ ಎಸ್ಮಾಗೆ ಈ ಹಿಂದೆ ಹೈಕೋರ್ಟ್ ತಡೆ ನೀಡಿದೆ.
ಆದರೂ ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್ಸಿಎಲ್) ನೌಕರರ ಹಕ್ಕುಗಳನ್ನು ಹತ್ತಿಕ್ಕಲು ಮತ್ತೆ ಎಸ್ಮಾ ಜಾರಿ ಮಾಡುವುದಾಗಿ ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿದರು. ರೈಲ್ವೆ ಇಲಾಖೆ ಕೇಂದ್ರ ಸರ್ಕಾರದ ಆಧೀನದಲ್ಲಿರುವುದರಿಂದ ರಾಜ್ಯ ಸರ್ಕಾರ ಜಾರಿ ಮಾಡುವ ಎಸ್ಮಾ ಅನ್ವಯಿ ಸುವುದಿಲ್ಲ.
ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಮಾ.22 ರಂದು ನಡೆಸಲು ಮುಂದಾಗಿರುವ ಮುಷ್ಕರಕ್ಕೆ ಯಾವುದೇ ಅಡ್ಡಿ ಬರುವುದಿಲ್ಲ ಎಂದರು. ಸಂಸ್ಥೆಯ ನಿಯಮದಂತೆ ಮುಷ್ಕರ ನಡೆಸುವ ಕುರಿತು ಹಾಗೂ ನಮ್ಮ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಮಾ.7 ರಂದು ಮನವಿ ಪತ್ರ ಸಲ್ಲಿಸಿದ್ದು, 14 ದಿನಗಳ ಗಡುವು ನೀಡಲಾಗಿದೆ.
ಅಷ್ಟರೊಳಗೆ ನಮ್ಮ ಸಂಘದೊಂದಿಗೆ ಮಾತುಕತೆ ನಡೆಸಿದರೆ ಮುಷ್ಕರವನ್ನು ಕೈ ಬಿಡಲಾಗುತ್ತದೆ. ಇಲ್ಲವಾದಲ್ಲಿ ಶಾಂತಿನಗರ, ಮೆಜೆಸ್ಟಿಕ್, ಬೈಯಪ್ಪನಹಳ್ಳಿ ಸೇರಿದಂತೆ ಹಲವು ಮೆಟ್ರೋ ನಿಲ್ದಾಣಗಳ ಬಳಿ ಪ್ರತಿಭಟನಾ ಬ್ಯಾಡ್ಜ್ ಧರಿಸಿ, ಘೋಷಣೆಗಳನ್ನು ಕೂಗಿ ಪ್ರತಿಭಟನಾ ಪ್ರದರ್ಶ ನದ ಮೂಲಕ ಆಕ್ರೋಶ ವ್ಯಕ್ತಪಡಿಸಲಾಗುವುದು ಎಂದರು.
ಬಿಎಂಆರ್ಸಿಎಲ್ ನೌಕರರ ಸಂಘವನ್ನು ಮಾನ್ಯ ಮಾಡಬೇಕು. ಸೇವಾ ನಿಯಮಗಳ ಬದಲಿಗೆ ಸ್ಥಾಯಿ ಆದೇಶಗಳ ಪಾಲನೆ ಮಾಡಬೇಕು. ಸಂಘದ ಸದಸ್ಯರಿಗೆ ನೀಡುತ್ತಿರುವ ಕಿರುಕುಳವನ್ನು ನಿಲ್ಲಿಸಬೇಕು. ನೌಕರರ ಕುಂದುಕೊರತೆಗಳನ್ನು ನಿವಾರಿಸಬೇಕು. ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ರದ್ದು ಮಾಡಬೇಕು. ಈ ಎಲ್ಲಾ ಬೇಡಿಕೆಗಳನ್ನು ತಕ್ಷಣ ಈಡೇರಿಸಲು ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.