ರಾಜ್ಯಸಭಾ ಚುನಾವಣಾ ಅಂಗಳಕ್ಕೆ ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಹೋಗಲಿದ್ದಾರೆ. ಮೀರಾ ಕುಮಾರ್’ರನ್ನು ರಾಜ್ಯದಿಂದ ರಾಜ್ಯಸಭೆಗೆ ಕಳುಹಿಸಲು ವೇದಿಕೆ ಸಿದ್ಧಗೊಂಡಿದೆ.
ಬೆಂಗಳೂರು (ಮಾ. 01): ರಾಜ್ಯಸಭಾ ಚುನಾವಣಾ ಅಂಗಳಕ್ಕೆ ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಹೋಗಲಿದ್ದಾರೆ. ಮೀರಾ ಕುಮಾರ್’ರನ್ನು ರಾಜ್ಯದಿಂದ ರಾಜ್ಯಸಭೆಗೆ ಕಳುಹಿಸಲು ವೇದಿಕೆ ಸಿದ್ಧಗೊಂಡಿದೆ.
ದಲಿತ ಕಾರ್ಡ್ ಬಳಕೆ ಮಾಡುವ ಲೆಕ್ಕಾಚಾರದೊಂದಿಗೆ ಮೀರಾಕುಮಾರ್ ರಾಜ್ಯಸಭಾ ಕಣಕ್ಕಿಳಿಯಲಿದ್ದಾರೆ. ಸಂಸದ ಕೆ.ಎಚ್ ಮುನಿಯಪ್ಪ, ಸಚಿವ ಹೆಚ್ ಆಂಜನೇಯ ನೇತೃತ್ವದಲ್ಲಿ ರಾಜಕೀಯ ಲಾಭಿ ನಡೆದಿದೆ. ದಲಿತ ವರ್ಗದ ಎಡಗೈ ಬಣದ ನಾಯಕಿಗೆ ಮಣೆ ಹಾಕುವ ಲೆಕ್ಕಾಚಾರ ಆರಂಭವಾಗಿದೆ. ಹೈಕಮಾಂಡ್ ಮುಂದೆ ಎಡಗೈ ಬಣದ ಪ್ರಭಾವಿ ನಾಯಕರು ಪ್ರಸ್ತಾಪ ಮಾಡಿದ್ದಾರೆ. ಮೀರಾ ಕುಮಾರ್ ಆಯ್ಕೆಯಿಂದ ಎಡಗೈ ಬಣದವರ ಓಲೈಕೆ ಮಾಡುವ ಲೆಕ್ಕಾಚಾರ ಇವರದ್ದು.
ಮೀರಾ ಕುಮಾರ್ ಸ್ಪರ್ಧೆಗೆ ಬಲಗೈ ಬಣದ ನಾಯಕರು ಸೇರಿದಂತೆ ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕುತೂಹಲ ಮೂಡಿಸಿದೆ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರ. ಸದಾಶಿವ ಆಯೋಗದ ವರದಿ ಜಾರಿ ಸಂಬಂಧ ದಲಿತ ವರ್ಗದ ಎಡಗೈ ಬಣ ಮುನಿಸಿಕೊಂಡಿದೆ. ಇವರನ್ನು ಸುಮ್ಮನಾಗಿಸಲು ಮೀರಾ ಕುಮಾರ್ ಸ್ಪರ್ಧೆಗೆ ಪ್ಲಾನ್ ರೆಡಿ ಮಾಡಲಾಗಿದೆ.
ಈ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಕಾಂಗ್ರೆಸ್ ಪಡೆಯಲಿದೆ. ದಲಿತ, ಲಿಂಗಾಯತ ಮತ್ತು ಮುಸ್ಲಿಂ ವರ್ಗಕ್ಕೆ ಒಂದೊಂದು ಸ್ಥಾನ ನೀಡುವ ಲೆಕ್ಕಾಚಾರ ಇದೆ.
ದಲಿತ ವರ್ಗದ ಕೋಟಾದಲ್ಲಿ ಮೀರಾ ಕುಮಾರ್ ಗೆ ರಾಜ್ಯಸಭಾ ಸ್ಥಾನ ಕೊಡಿಸಲು ಸರ್ಕಸ್ ನಡೆಯುತ್ತಿದೆ.