
ಪಣಜಿ(ಡಿ.28): ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಯಡಿಯೂರಪ್ಪ ಪರ ನಿಲುವು ತಳೆದಿದ್ದಾರೆ.
ಮಹದಾಯಿ ವಿಚಾರದಲ್ಲಿ ನನಗೆ ಯಡಿಯೂರಪ್ಪ ಪತ್ರ ಸಿಕ್ಕಿತ್ತು. ಹಾಗಾಗಿ ಪತ್ರಕ್ಕೆ ರಿಪ್ಲೈ ಮಾಡಿದ್ದೇನೆ.ನನಗೆ ಇನ್ನು ಸಿದ್ದರಾಮಯ್ಯ ಅವರಿಂದ ಯಾವುದೇ ಪತ್ರ ಸಿಕ್ಕಿಲ್ಲ. ನಾನು ಯಡಿಯೂರಪ್ಪ ಅವರನ್ನು ನಂಬುತ್ತೇನೆ. ಆದರೆ ಕರ್ನಾಟಕದಲ್ಲಿ ಸರ್ಕಾರ ನಡೆಸುತ್ತಿರುವವರನ್ನು ನಂಬುವುದಿಲ್ಲ. ಯಾಕೆಂದರೆ ಈ ಹಿಂದೆ ಬೈನಾ ಬೀಚ್ ವಿಚಾರದಲ್ಲಿ ಕನ್ನಡಿಗರಿಗೆ ಬಿಜೆಪಿ ಸರ್ಕಾರ ತೊಂದರೆ ಮಾಡ್ತಿದೆ ಅಂತಾ ನಮ್ಮ ಮೇಲೆ ಆರೋಪ ಮಾಡಿದ್ದರು. ಹಾಗಾಗಿ ಅವರನ್ನು ನಂಬುವುದಿಲ್ಲ.
ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರಕ್ಕೆ ನನ್ನ ಸರ್ಕಾರದ ಎಲ್ಲಾ ಸಚಿವರ ಸಹಮತ ಇದೆ. ಜಲಸಂಪನ್ಮೂಲ ಸಚಿವ ವಿನೋದ್ ಪಾಳ್ಯೇಕರ್ ಜೊತೆ ಈಗಾಗಲೇ ಮಾತಾಡಿದ್ದೇನೆ' ಎಂದು ತಿಳಿಸಿದ್ದಾರೆ.
ಪೊಲಿಟಿಕಲ್ ಸ್ಟಂಟ್ : ಸಿದ್ದು
ಮಹದಾಯಿ ವಿಚಾರದಲ್ಲಿ ಮನೋಹರ್ ಪರಿಕ್ಕರ್ ಹಾಗೂ ಯಡಿಯೂರಪ್ಪ ಇಬ್ಬರು ಸೇರಿಕೊಂಡು ಪೊಲಿಟಿಕಲ್ ಸ್ಟಂಟ್ ಮಾಡಿದ್ದಾರೆ. ಹಾಗಂತ ಗೋವಾ ನೀರಾವರಿ ಸಚಿವರೇ ಹೇಳಿರುವುದಾಗಿ ಸಿಎಂ ಸಿದ್ದರಾಮಯ್ಯ ಶಿರಾದಲ್ಲಿ ಹೇಳಿದ್ದಾರೆ.
ನಾನೇ ಬಂದು ಮಾತಾಡ್ತೀನಿ ಅಂತ ಪತ್ರ ಬರೆದಿದ್ದೆ. ಆದರೆ ಚುನಾವಣೆ ನಂತರ ಬನ್ನಿ ಅಂತಾ ಪರಿಕ್ಕರ್ ಹೇಳಿದ್ದಾರೆ. ಇಬ್ಬರ ನಾಟಕದಿಂದ ರೈತರು ಮೋಸಹೋಗಿ ಈಗ ಚಳುವಳಿ ಮಾಡುತ್ತಿದ್ದಾರೆ. ನನಗೆ ರಾಜಕೀಯದಲ್ಲಿ 40 ವರ್ಷಕ್ಕೂ ಹೆಚ್ಚು ಅನುಭವ ಇದೆ. ಒಂದು ಪಕ್ಷ ಇನ್ನೊಂದು ಪಕ್ಷದ ಕಚೇರಿ ಎದುರು ಪ್ರತಿಭಟನೆ ನಡೆಸಿರೋದು ಇದೇ ಮೊದಲು. ತಪ್ಪು ಮಾಡಿ ಸಿಕ್ಕಿಹಾಕಿಕೊಂಡ ಯಡಿಯೂರಪ್ಪ ಡೈವರ್ಟ್ ಮಾಡುತ್ತಿದ್ದಾರೆ. ವಿವಾದ ಇತ್ಯರ್ಥಕ್ಕೆ ನಮ್ಮ ಸರ್ಕಾರ ಸಿದ್ದವಿದ್ದು, ಮೋದಿ ಮಾತುಕತೆ ನಡೆಸಬೇಕಿದೆ. ಸದಾಶಿವ ಆಯೋಗ ಜಾರಿಗೆ ಪರ ವಿರೋಧ ಎರಡೂ ಇದೆ. ಸಭೆ ಕರೆದಿದ್ದೇವೆ ಎಂದು ಸಿಎಂ ಹೇಳಿದ್ದಾರೆ.
ಮಹದಾಯಿ ವಿವಾದ ಮಾತುಕತೆ ಮೂಲಕವೇ ಬಗೆಹರಿಯಬೇಕು. ಮಾತುಕತೆಗೆ ಕರ್ನಾಟಕ ಸರ್ಕಾರ ತಯಾರಿದೆ. ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಿ ವಿವಾದ ಬಗೆಹರಿಸಲಿ ಎಂದು ಶಿರಾದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಚುನಾವಣಾ ಸ್ಪರ್ಧೆ ಬಗ್ಗೆ ಮಾತನಾಡುತ್ತಾ, ನಾನು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಬೇರೆ ಯಾವ ಕ್ಷೇತ್ರಕ್ಕೂ ಹೊಗಲ್ಲ. ನನಗೆ ಟಿಕೆಟ್ ನೀಡೋದು ರಾಹುಲ್ ಗಾಂಧಿ. ವದಂತಿ ಹಬ್ಬಿಸೋರು ಅಲ್ಲ ಎಂದು ಸಿಎಂ ತಿರುಗೇಟು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.