
ಕೊಚ್ಚಿ(ಅ.22): ಕೇರಳದಲ್ಲಿ ಮುಷ್ಕರ ಹೊಸದೇನಲ್ಲ. ಕಳೆದ ಸೋಮವಾರ ಕೂಡಾ ಯಾವುದೋ ಕಾರಣಕ್ಕೆ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಅದು ಈ ವರ್ಷ ಕರೆಕೊಟ್ಟ 100ನೇ ಸಾರ್ವತ್ರಿಕ ಮುಷ್ಕರ ವಾಗಿತ್ತು. ಆದರೆ ಮುಷ್ಕರ, ಲಾಟರಿ ವ್ಯಾಪಾರಿಯೊಬ್ಬರಿಗೆ ಬಂಪರ್ ಲಾಟರಿ ತಂದುಕೊಟ್ಟಿದೆ.
ಹೌದು. ಸಂತೋಷ್ ಗೋಪಿ ಎಂಬುವವರು ಲಾಟರಿ ಮಾರಾಟದ ಸಣ್ಣ ವಹಿವಾಟು ನಡೆಸುತ್ತಾರೆ. ಕಳೆದ ಸೋಮವಾರ ಮುಷ್ಕರ ಇದ್ದ ಪರಿಣಾಮ ಅವರು ಖರೀದಿಸಿದ್ದ ತಲಾ 30 ರು. ಬೆಲೆಯ 40 ಟಿಕೆಟ್ಗಳು ಮಾರಾಟವಾಗದೇ ಉಳಿದಿತ್ತು. ಆದರೆ ಅಂದೇ ಲಾಟರಿ ಡ್ರಾ ಕೂಡಾ ಇತ್ತು. ಅವರು ತಾವು ಖರೀದಿಸಿದ್ದ, ಆದರೆ ಮಾರಾಟವಾಗದೇ ಉಳಿದ 40 ಟಿಕೆಟ್ಗಳ ಹಣವನ್ನೂ ಏಜೆಂಟರಿಗೆ ನೀಡಲಾಗದೇ ತೊಂದರೆಗೆ ತುತ್ತಾಗಿದ್ದರು. ಇದೇ ಗೋಳಿನ ವಿಷಯವನ್ನು ಅವರು ಸಂಜೆ ವೇಳೆ ಏಜೆಂಟರ ಮುಂದಿಟ್ಟಿದ್ದರು. ಆದರೆ ಸಂತೋಷ್ ಅದೃಷ್ಟಕ್ಕೆ, ಅವರ ಬಳಿ ಮಾರಾಟವಾಗದೇ ಉಳಿದುಕೊಂಡಿದ್ದ ಟಿಕೆಟ್ಗಳ ಪೈಕಿ ಒಂದಕ್ಕೆ 60 ಲಕ್ಷ ರು. ಬಂಪರ್ ಬಹುಮಾನ ಹೊಡೆದಿತ್ತು. 60 ಲಕ್ಷ ರು. ಲಾಟರಿ ಬಹುಮಾನದಲ್ಲಿ ತೆರಿಗೆ ಹೊರತುಪಡಿಸಿ 37.8 ಲಕ್ಷ ರು. ಮತ್ತು 5.4 ಲಕ್ಷ ಏಜೆಂಟ್ ಕಮಿಷನ್ ಲಭಿಸಲಿದೆ.
ಈ ಹಣದಿಂದ ಒಂದು ಸಣ್ಣ ನಿವೇಶನ ಮತ್ತು ಮನೆ ಖರೀದಿಸುವುದಾಗಿ ಸಂತೋಷ್ ಹೇಳಿದ್ದಾರೆ. ಆದರೆ, ಅದೃಷ್ಟ ತಂದು ಕೊಟ್ಟ ಲಾಟರಿ ಟಿಕೆಟ್ ಮಾರಾಟವನ್ನು ಮುಂದುವರಿಸುವ ಇರಾದೆಯನ್ನು ಕೂಡ ಸಂತೋಷ್ ಹೊಂದಿದ್ದಾರೆ. ಎರಡು ಮಕ್ಕಳ ತಂದೆಯಾಗಿರುವ ಸಂತೋಷ್ ಮೊದಲು ಸೈಕಲ್ ರಿಪೇರಿ ಕೆಲಸ ಮಾಡುತ್ತಿದ್ದರು. ಕಿಡ್ನಿ ಸಮಸ್ಯೆ ಕಾಣಿಸಿಕೊಂಡ ಬಳಿಕ ಬೇರೆ ದಾರಿ ಕಾಣದೇ ಲಾಟರಿ ಮಾರಾಟಕ್ಕೆ ಇಳಿದಿದ್ದರು. ಅವರ ಪತ್ನಿ ಕೂಡಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇದೀಗ ಲಾಟರಿ ಹೊಡೆದಿದ್ದರಿಂದ ಎಲ್ಲರ ಸಮಸ್ಯೆಗೂ ಪರಿಹಾರ ಸಿಕ್ಕಿದೆ ಎಂದು ಸಂತೋಷ್ ಗೋಪಿ ಸಂ‘್ರಮ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.