
ಹುಬ್ಬಳ್ಳಿ, ಅ.11: ಜೀವವಿಮೆ ಹಣ ಪಡೆಯುವ ಸಲುವಾಗಿ ಅಮಾಯಕನೊಬ್ಬನನ್ನು ಗೆಳೆಯರೊಂದಿಗೆ ಸೇರಿ ಕೊಂದಿದ್ದ ವ್ಯಕ್ತಿಯೊಬ್ಬ ಆ ಶವ ತನ್ನದೇ ಎಂದು ಬಿಂಬಿಸಲು ಹೊರಟು ಸಿಕ್ಕಿಬಿದ್ದ ಸಿನಿಮೀಯ ಘಟನೆ ನಗರದ ಹೊರವಲಯದ ಗೋಕುಲ ಗ್ರಾಮದಲ್ಲಿ ನಡೆದಿದೆ.
ಆರೋಪಿಯ ಕೈಯಲ್ಲಿದ್ದ ಶ್ರೀರಾಮನ ಹಚ್ಚೆಯೇ ಕೊಲೆ ರಹಸ್ಯವನ್ನು ಭೇದಿಸಲು ಸುಳಿವನ್ನು ನೀಡಿದೆ. ಕೊಲೆಯಾದ ವ್ಯಕ್ತಿಯನ್ನು ಇರ್ಫಾನ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿ ಅಮೀರ್ ಶೇಖ್ ಮತ್ತು ಮಹಾಂತೇಶ ದುಗ್ಗಾಣಿ ಎಂಬಿಬ್ಬರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಸಂಜೀವ ಬೆಂಗೇರಿ ತಲೆಮರೆಸಿಕೊಂಡಿದ್ದಾನೆ.
ಸಂಜೀವ ಬೆಂಗೇರಿ ಎಚ್ಡಿಎಫ್ಸಿ ಕಂಪನಿಯಲ್ಲಿ . 50 ಲಕ್ಷ ಮೌಲ್ಯದ ವಿಮೆ ಮಾಡಿಸಿದ್ದ. ಅದನ್ನು ಪಡೆಯುವ ಸಲುವಾಗಿ ಮಹಾಂತೇಶ ದುಗ್ಗಾಣಿ ಮತ್ತು ಅಮೀರ್ ಶೇಖ್ ಎಂಬಿಬ್ಬರ ನೆರವು ಪಡೆದ ಸಂಜೀವ ಇತ್ತೀಚೆಗಷ್ಟೇ ಗ್ರಾಮಕ್ಕೆ ಆಗಮಿಸಿದ್ದ ಕೂಲಿ ಕಾರ್ಮಿಕ ಇರ್ಫಾನ್ ಎಂಬಾತನನ್ನು ಗುರಿಯಾಗಿರಿಸಿದ್ದ.
ಮಂಗಳವಾರ ರಾತ್ರಿ ಈ ಮೂವರು ಸೇರಿ ಇರ್ಫಾನ್ನನ್ನು ಪುಸಲಾಯಿಸಿ ಊರ ಹೊರಗಿನ ಹೊಲಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆತನಿಗೆ ಸಂಜೀವ ಬೆಂಗೇರಿ ಧರಿಸಿದ್ದ ಬಟ್ಟೆಯನ್ನು ಹಾಕಿ ಮುಖ ಸಹ ಗುರುತು ಸಿಗದಂತೆ ಕೊಲೆ ಮಾಡಿ ಮೃತದೇಹವನ್ನು ರೇವಡಿಹಾಳದ ಸೇತುವೆ ಬಳಿ ಬಿಸಾಕಿದ್ದಾರೆ.
ಅಲ್ಲಿಂದ ಸಂಜೀವ ಬೆಂಗೇರಿ ಪರಾರಿಯಾಗಿದ್ದು ಉಳಿದಿಬ್ಬರು ಗ್ರಾಮಕ್ಕೆ ಮರಳಿದ್ದಾರೆ. ರೇವಡಿಹಾಳ ಸೇತುವೆ ಬಳಿ ಸಿಕ್ಕ ಮೃತದೇಹವನ್ನು ಪರಿಶೀಲಿಸುವ ಸಂದರ್ಭದಲ್ಲಿ ಸಂಜೀವ ಬೆಂಗೇರಿಯ ಸಹೋದರ ಈ ಶವ ತನ್ನ ತಮ್ಮನನ್ನೇ ಹೋಲುತ್ತಿದೆ.
ಆದರೆ ಆತನ ಕೈಯಲ್ಲಿ ‘ಜೈ ಶ್ರೀರಾಮ’ ಎಂಬ ಹಚ್ಚೆ ಇತ್ತು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಮೃತದೇಹದ ಮೇಲೆ ಹಚ್ಚೆ ಇರಲಿಲ್ಲ. ಕೂಲಂಕಷವಾಗಿ ಪರಿಶೀಲಿಸಿದಾಗ ಮೃತಪಟ್ಟಿದ್ದು ಒಬ್ಬ ಮುಸ್ಲಿಂ ಯುವಕ ಎಂಬುದು ಪತ್ತೆಯಾಗಿದ್ದು ಪ್ರಕರಣ ಬೆಳಕಿಗೆ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.