
ನವದೆಹಲಿ (ಅ.27): ‘ಮನ್ ಕಿ ಬಾತ್’ ಕಾರ್ಯಕ್ರಮದ ಮೂಲಕ ಜನರ ಹೃದಯಕ್ಕೆ ಹತ್ತಿರವಾಗಿರುವ ಪ್ರಧಾನಿ ನರೇಂದ್ರ ಮೋದಿ ಈಗ ‘ಕಾಮನ್ ಮ್ಯಾನ್ ಕೆ ಸಾಥ್ ಬಾತ್‘ ಮೂಲಕ ಸುದ್ದಿಯಲ್ಲಿದ್ದಾರೆ. ಶಿಷ್ಟಾಚಾರ, ಭದ್ರತೆಯನ್ನೂ ಮರೆತು ಜನಸಾಮಾನ್ಯರ ಹತ್ತಿರ ಹೋಗಿ ಮಾತನಾಡಿಸುವ ಮೋದಿ ಗುಜರಾತ್ನ ಅಂಗಡಿ ಮಾಲೀಕ ಹಾಗೂ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಿಗೆ ದೂರವಾಣಿ ಕರೆ ಮಾಡಿ ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ಈ ಆಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರು ಮಾತನಾಡಿರುವ ಆಡಿಯೋ ಸಾರಾಂಶ ಇಲ್ಲಿದೆ.
ಪ್ರಧಾನಿ - ಹಲೋ, ನಮಸ್ತೆ ಗೋಪಾಲ್ ಭಾಯ್ ಹೇಗಿದ್ದೀರಿ?
ಗೋಹಿಲ್ - ನಮಸ್ತೇ ಸರ್. ಚೆನ್ನಾಗಿದ್ದೇನೆ. ದೀಪಾವಳಿ ಶುಭಾಶಯಗಳು
ಪ್ರಧಾನಿ - ನಿಮ್ಮ ಕುಟುಂಬದವರಿಗೂ ದೀಪಾವಳಿ ಶುಭಾಶಯಗಳು. ನಾನು ವಡೋದರಾಕ್ಕೆ ಋಣಿಯಾಗಿದ್ದೇನೆ. ಈ ಕ್ಷೇತ್ರ ನನಗೆ ಅಪಾರ ಗೌರವ ಹಾಗೂ ಪ್ರೀತಿಯನ್ನು ಕೊಟ್ಟಿದೆ. ನೀವು ಅದೇ ಸ್ಟೇಷನರಿ ಅಂಗಡಿ ನಡೆಸುತ್ತಿದ್ದೀರಾ ಅಥವಾ ಹೊಸ ವ್ಯವಹಾರ ಶುರು ಮಾಡಿದ್ದೀರಾ?
ಗೋಹಿಲ್ - ನಾನು, ನನ್ನ ಪತ್ನಿ ಖಂಡೆರಾವ್ ಮಾರ್ಕೆಟ್ ಬಳಿಯಿರುವ ವ್ರಜ್ ಸಿದ್ಧಿ ಟವರ್ ಬಳಿ ಸ್ಟೇಷನರಿ ಅಂಗಡಿ ನಡೆಸುತ್ತಿದ್ದೇವೆ. ವಡೋದರಾದ ರಾಜ್ವುಹಲ್ ರಸ್ತೆಯಲ್ಲಿ ನಡೆದಿದ್ದ ರೋಡ್ ಶೋನಲ್ಲಿ ನಿಮ್ಮನ್ನು ನೋಡಿದ್ದು ಇನ್ನೂ ನೆನಪಿದೆ.
ಪ್ರಧಾನಿ - ಆ ದಿನ ನನಗೂ ನೆನಪಿದೆ ಮಿತ್ರ
ಗೋಹಿಲ್ - ನಿಮ್ಮಲ್ಲಿ ನನ್ನದೊಂದು ಪ್ರಶ್ನೆಯಿದೆ. ಇತ್ತೀಚೆಗೆ ಗುಜರಾತ್ನಲ್ಲಿ ನಡೆದಿರುವ ಕೆಲ ಘಟನೆಗಳು ಹಾಗೂ ಕಾಂಗ್ರೆಸ್ನ ಟೀಕೆ, ಅಪಪ್ರಚಾರ ನಮ್ಮ ಕಾರ್ಯಕರ್ತರ ಮೇಲೆ ಪ್ರಭಾವ ಬೀರದಂತೆ ಹೇಗೆ ತಡೆಯಬಹುದು?
ಪ್ರಧಾನಿ - ಜನಸಂಘ ಹುಟ್ಟಿದಾಗಿನಿಂದಲೂ ನಾವು ನಿರಂತರವಾಗಿ ಆರೋಪಕ್ಕೆ ತುತ್ತಾಗುತ್ತಿರುವುದು ದುರದೃಷ್ಟಕರ. ನಾವು ರಾಜಕೀಯ ಪ್ರವೇಶಿಸಿದಾಗಿನಿಂದ ಅಪಮಾನ, ಬೈಗುಳ ನಮ್ಮ ಹಣೆಯಲ್ಲಿ ಬರೆಯಲ್ಪಟ್ಟಿದೆ. ನಾವು ಇದನ್ನು ಯಶಸ್ವಿಯಾಗಿ ಎದುರಿಸಿದ್ದೇವೆ. ನನ್ನ ಸಲಹೆ ಏನೆಂದರೆ ಋಣಾತ್ಮಕತೆ ಬಗ್ಗೆ ಹೆಚ್ಚು ಚಿಂತೆ ಮಾಡುವುದು ಬೇಡ. ಟೀಕೆ, ಸುಳ್ಳುಗಳು ಪ್ರಭಾವ ಬೀರದ ಯಾವುದಾದರೂ ಒಂದು ಚುನಾವಣೆ ನಡೆದಿದ್ದರೆ ಹೇಳಿ.
ಗೋಹಿಲ್ - ಅದೂ ಸರಿ. ಕಾಂಗ್ರೆಸ್ ಹಿಂದೆಯೂ ಇದೇ ರೀತಿ ನಡೆದುಕೊಂಡಿತ್ತು.
ಪ್ರಧಾನಿ - ನನ್ನನ್ನು ಸಾವಿನ ವ್ಯಾಪಾರಿ (ಮೌತ್ ಕಾ ಸೌದಾಗರ್), ಕೊಲೆಗಾರ ಎಂದೆಲ್ಲ ಕಾಂಗ್ರೆಸ್ನವರು ಕರೆದಿದ್ದರು. ಆದರೆ ಜನರಿಗೆ ನಿಜ ಸಂಗತಿ ಗೊತ್ತಿತ್ತು. ಈ ಹಿಂದೆ ಬಾಯಿಂದ ಬಾಯಿಗೆ ಇಂಥ ಮಾತುಗಳು ಹರಡುತ್ತಿದ್ದವು. ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅವರು ಸುಳ್ಳನ್ನು ಹರಡಲಿ. ಜನರಿಗೆ ವದಂತಿ, ಅಪಪ್ರಚಾರ ಗೊತ್ತಾಗುತ್ತದೆ. ಹೀಗಾಗಿ ಇಂಥ ವಿಚಾರಗಳಿಂದ ಪ್ರಭಾವಿತರಾಗಬೇಡಿ. ನಮ್ಮ ಧ್ಯೇಯ ಹಾಗೂ ಸತ್ಯ ಪ್ರಚಾರ ಮಾಡಲು ನಿಮ್ಮನ್ನು ಕೇಂದ್ರೀಕರಿಸಿಕೊಳ್ಳಿ. ವದಂತಿ, ಸುಳ್ಳುಗಳಿಗಾಗಿ ಸಮಯ ವ್ಯರ್ಥ ಮಾಡಬೇಡಿ. ವಿಪಕ್ಷಗಳ ಕ್ಷುಲ್ಲಕ ಆರೋಪ, ಟೀಕೆಗಳನ್ನು ನಿರ್ಲಕ್ಷಿಸುವುದನ್ನು ಮೊದಲು ರೂಢಿಸಿಕೊಳ್ಳಬೇಕು. ಕೆಲವರು ಇಂಥ ಸಂದೇಶಗಳನ್ನು ಯೋಚಿಸದೇ ಇನ್ನೊಬ್ಬರಿಗೆ ಕಳಿಸುತ್ತಾರೆ. ಇದಕ್ಕೆ ನಾವು ಚಿಂತಿಸಬೇಕಿಲ್ಲ. ನಾವು ಉತ್ತಮ ಉದ್ದೇಶಕ್ಕಾಗಿ ಸತ್ಯದ ದಾರಿಯಲ್ಲಿ ನಡೆಯುತ್ತಿದ್ದೇವೆ.
ಗೋಹಿಲ್ - ಹೌದು ಸರ್.
ಪ್ರಧಾನಿ - ಋಣಾತ್ಮಕತೆ ಇಲ್ಲದ ಸತ್ಯವನ್ನು ಪ್ರಚುರ ಪಡಿಸುವತ್ತ ಗಮನ ಕೇಂದ್ರೀಕರಿಸಬೇಕು. ಜನರ ಒಳಿತಿಗಾಗಿ ನಾವು ಬೆವರು ಹಾಗೂ ರಕ್ತ ಹರಿಸಿದ್ದೇವೆ. ಹೀಗಾಗಿ ಯಾವುದೇ ಅಪಪ್ರಚಾರಕ್ಕೆ ಕಿವಿಗೊಡುವ ಅಗತ್ಯವಿಲ್ಲ. ಬಿಜೆಪಿ ಹಲವು ವರ್ಷಗಳಿಂದ ಅಧಿಕಾರದಲ್ಲಿದೆ. ಆದರೆ ಸರ್ಕಾರದ ವಿರುದ್ಧ ಯಾವುದೇ ಆರೋಪ ಕೇಳಿ ಬಂದಿಲ್ಲ. ನಾವು ಪಾರದರ್ಶಕತೆಯಿಂದ ಆಡಳಿತ ನಡೆಸಿದರೆ ಹೇಗೆ ಅವರು ಅಪಪ್ರಚಾರ ನಡೆಸಲು ಸಾಧ್ಯ? ನಾವು ಸರಿಯಾಗಿದ್ದೇವೆ. ಆತ್ಮವಿಶ್ವಾಸದಿಂದಿರಿ.
ಗೋಹಿಲ್ - ಹೌದು. ನಮ್ಮ ವಿರುದ್ಧ ಯಾವುದೇ ಆರೋಪವಿಲ್ಲ.
ಗೋಹಿಲ್ ಪತ್ನಿ - ನಾವು ನಿಮ್ಮನ್ನೇ ಎದುರು ನೋಡುತ್ತಿರುತ್ತೇವೆ.
ಗೋಹಿಲ್ - ನೀವು ಇಲ್ಲಿಗೆ ಭೇಟಿ ನೀಡಿದರೆ ಸಂತೋಷವಾಗುತ್ತದೆ.
ಪ್ರಧಾನಿ - ಅಕ್ಟೋಬರ್ 22ರಂದು ವಡೋದರಾಕ್ಕೆ ಬರಲಿದ್ದೇನೆ.
ಗೋಹಿಲ್ - ನಾವು ಸಿದ್ಧವಾಗಿದ್ದೇವೆ. 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವುದೇ ನಮ್ಮ ದೀಪಾವಳಿ ಉಡುಗೊರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.