ರಾಜಕಾರಣಕ್ಕೆ ‘ಮಹಾ’ ಟ್ವಿಸ್ಟ್ : ಪ್ರತ್ಯೇಕವಾಗಿ ಗವರ್ನರ್ ಭೇಟಿ ಮಾಡಿದ ಸೇನೆ, BJP

By Web DeskFirst Published Oct 28, 2019, 1:44 PM IST
Highlights

ಮಹಾರಾಷ್ಟ್ರದಲ್ಲಿ ಬಹುಮತವಿದ್ದರೂ ಬಿಜೆಪಿಗೆ ಸರ್ಕಾರ ರಚನೆ ಸಾಧ್ಯವಾಗುತ್ತಿಲ್ಲ. ಮೈತ್ರಿ ಮಾಡಿಕೊಂಡ ಶಿವಸೇನೆ ಷರತ್ತುಗಳು ಮುಂದುವರಿದಿದ್ದು, ಸಿಎಂ ಪಟ್ಟಕ್ಕಾಗಿ ಹಗ್ಗ ಜಗ್ಗಾಟ ಮುಂದುವರಿದಿದೆ. 

ಮುಂಬೈ [ಅ. 28] : ಮಹಾರಾಷ್ಟ್ರದಲ್ಲಿ ಬಿಜೆಪಿ ಬಹುಮತ ಪಡೆದಿದ್ದರು ಕೂಡ ಸರ್ಕಾರ ರಚನೆಗೆ ಕಸರತ್ತು ಪಡುವಂತಾಗಿದೆ. ಶಿವಸೇನೆ ಬಿಜೆಪಿ ನಡುವೆ ಹಗ್ಗ ಜಗ್ಗಾಟ ಮುಂದುವರಿದಿದೆ. 

ಮುಖ್ಯಮಂತ್ರಿ ಪಟ್ಟಕ್ಕೆ ಪಟ್ಟು ಹಿಡಿದಿರುವ ಶಿವಸೇನೆ 50 :50ರ ಅನುಪಾತ ಅನುಸರಿಸಲು ಒತ್ತಾಯಿಸುತ್ತಿದೆ.  ಇನ್ನು ಇಂದು ಬಿಜೆಪಿ ಹಾಗೂ ಶಿವಸೇನೆ ಬೇರೆ ಬೇರೆಯಾಗಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಹೊಸ ಟ್ವಿಸ್ಟ್ ಸಿಕ್ಕಿದೆ. ಭೇಟಿ ಹಿಂದಿನ ಉದ್ದೇಶ ನಿಗೂಢವಾಗಿದೆ. 

ಬಿಜೆಪಿಯಿಂದ ಸಿಎಂ ದೇವೇಂದ್ರ ಫಡ್ನಾವೀಸ್  ಹಾಗೂ ಶಿವಸೇನೆಯ ದಿವಾಕರ್ ರೌತೆ ರಾಜ್ಯಪಾಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಆದರೆ ಉಭಯ ನಾಯಕರು ಭೇಟಿ ಸೀಕ್ರೇಟ್ ಮಾತ್ರ ಬಿಚ್ಚಿಟ್ಟಿಲ್ಲ.  

ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಶಿವಸೇನೆ ಮುಖಂಡ ದಿವಾಕರ್ ರೌತೆ  ದೀಪಾವಳಿ ಪ್ರಯುಕ್ತವಷ್ಟೇ ಭೇಟಿ ಮಾಡಲಾಗಿದೆ. ರಾಜ್ಯಪಾಲರ ಕುಟುಂಬವನ್ನು ಭೇಟಿ ಮಾಡಿ ದೀಪಾವಳಿ ಶುಭ ಕೋರಿದ್ದೇನೆ. ಈ ವೇಳೆ ಯಾವುದೇ ರಾಜಕೀಯ ಚರ್ಚೆಗಳಾಗಿಲ್ಲ. ಇದು ಹಿಂದಿನಿಂದಲೂ ನಡೆದುಕೊಂಡು ಬಂದ  ಪದ್ಧತಿಯಷ್ಟೇ ಎಂದು ಹೇಳಿದ್ದಾರೆ.  

ಮಹಾ' ಮೈತ್ರಿಗೆ ಶಿವ ಸೇನೆ ಹಿಂದೇಟು; BJPಗೆ ಠಾಕ್ರೆ ತಿರುಗೇಟು!...

ಅಲ್ಲದೇ ಇದೇ ವೇಳೆ ಮಾತನಾಡಿದ ಶಿವ ಸೇನಾ ಮುಖಂಡ ಪ್ರತಾಪ್ ಸರ್ ನಾಯ್ಕ್, ಬಿಜೆಪಿ ಬಳಿ ಅರ್ಧ ಅವಧಿಯ ಅಧಿಕಾರ ಹಂಚಿಕೆಯ ಬೇಡಿಕೆ ಇಡಲಾಗಿದೆ. ಲೋಕಸಭಾ ಚುನಾವಣೆಗೂ ಮುನ್ನವೇ ಅಮಿತ್ ಶಾ ಅವರು ನೀಡಿದ ಭರವಸೆಯಂತೆ 2.5 ವರ್ಷ ಅವಧಿಗೆ ಮುಖ್ಯಮಂತ್ರಿ ಹುದ್ದೆಯ ಹಂಚಿಕೆಯಾಗಲಿ ಎನ್ನುವುದು ಶಿವಸೇನೆ ಬೇಡಿಕೆಯಾಗಿದೆ ಎಂದರು. 

ಆದರೆ ಫಡ್ನಾವಿಸ್ ಅವರು ರಾಜ್ಯಪಾಲರ ಭೇಟಿ ಬಳಿಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಮಹಾರಾಷ್ಟ್ರದಲ್ಲಿ ಬಹುಮತವಿದ್ದರೂ ಸರ್ಕಾರ ರಚಿಸಿಲು ಒದ್ದಾಡುತ್ತಿದೆ ಬಿಜೆಪಿ...

ಇನ್ನು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಒಟ್ಟು 105 ಸ್ಥಾನ ಪಡೆದುಕೊಂಡಿದ್ದು, ಶಿವಸೇನೆ 56 ಸ್ಥಾನಗಳನ್ನು ಪಡೆದುಕೊಂಡಿದೆ. ಚುನಾವಣಾ ಪೂರ್ವ ಮೈತ್ರಿಯಾಗಿದ್ದರೂ ಇದೀಗ ಅಧಿಕಾರ ಹಂಚಿಕೆ ವಿಚಾರ ಇನ್ನೂ ಕಗ್ಗಂಟಾಗಿದೆ.

click me!