ರಾಜ್ಯದ ಹಲವು ದೇವಾಲಯಗಳಲ್ಲಿ ಪೂಜಾ, ದರ್ಶನ ಸಮಯ ಬದಲು

By Web DeskFirst Published Jul 27, 2018, 9:34 AM IST
Highlights

ರಾಜ್ಯದ ಹಲವು ದೇವಾಲಯಗಳಲ್ಲಿ ದರ್ಶನ ಹಾಗೂ ಪೂಜಾ ಸಮಯದಲ್ಲಿ ಹಲವು ರೀತಿಯ ಬದಲಾವಣೆಗಳನ್ನು ಮಾಡಲಾಗಿದೆ. ಈ ಬಗ್ಗೆ ಇಲ್ಲಿದೆ ಪೂರ್ಣ ಡೀಟೇಲ್ಸ್.

ಬೆಂಗಳೂರು: ಖಗ್ರಾಸ ಚಂದ್ರಗ್ರಹಣ ಪ್ರಯುಕ್ತ ಶುಕ್ರವಾರದಂದು ರಾಜ್ಯದ ಹಲವು ದೇವಸ್ಥಾನಗಳಲ್ಲಿ ಪೂಜೆ, ದರ್ಶನ ಸಮಯದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಮಂತ್ರಾಲಯ, ಶೃಂಗೇರಿ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಗ್ರಹಣ ಸ್ಪರ್ಶ ಕಾಲವಾದ ರಾತ್ರಿ 11.54 ರಿಂದಲೇ ವಿಶೇಷ ಪೂಜೆ- ಪುನಸ್ಕಾರಗಳು ನಡೆಯಲಿದ್ದು, ಭಕ್ತಾದಿಗಳಿಗೂ ದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ. ಶೃಂಗೇರಿ ಶಾರದಾಂಬೆ ದೇವಾಲಯದಲ್ಲಿ ಶುಕ್ರವಾರ ರಾತ್ರಿ 9 ಕ್ಕೆ ದೇವಾಲಯದ ಬಾಗಿಲು ಮುಚ್ಚಲಾಗುವುದು. 

ಮತ್ತೆ ರಾತ್ರಿ 11.30ಕ್ಕೆ ಬಾಗಿಲು ತೆರೆದು ಜಪ, ಮಂತ್ರ ಪಠಣ ಇತ್ಯಾದಿ ವಿಶೇಷ ಪೂಜಾದಿಗಳನ್ನು ನಡೆಸಲಾಗುವುದು. ರಾತ್ರಿ ಪ್ರಸಾದ ಭೋಜನದ ವ್ಯವಸ್ಥೆ ಇರುವುದಿಲ್ಲ ಎಂದು ದೇವಾಲಯ ಮೂಲಗಳು ತಿಳಿಸಿವೆ. ಮೈಸೂರು ಚಾಮುಂಡಿಬೆಟ್ಟದಲ್ಲಿ ಬೆಳಗ್ಗೆ 5.30ಕ್ಕೆ ಬಾಗಿಲು ತೆರೆಯಲಿದ್ದು, ರಾತ್ರಿ ೯.೩೦ಕ್ಕೆ ಮೊದಲೇ ಬಾಗಿಲು ಮುಚ್ಚಲಾಗುವುದು. 

ದಕ್ಷಿಣ ಕನ್ನಡದ ಕುಕ್ಕೆಸುಬ್ರಹ್ಮಣ್ಯದಲ್ಲಿ ದೇವರಿಗೆ ರಾತ್ರಿಯ ಮಹಾಪೂಜೆ ಸಂಜೆ 6.30ಕ್ಕೆ  ನಡೆಯಲಿದೆ. ರಾತ್ರಿ 7ರ ಬಳಿಕ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಸಂಜೆ ಆಶ್ಲೇಷ ಬಲಿ ಸೇವೆ ನೆರವೇರುವುದಿಲ್ಲ. ರಾತ್ರಿ ಭಕ್ತರಿಗೆ ಭೋಜನ ಪ್ರಸಾದದ ವ್ಯವಸ್ಥೆ ಇರುವುದಿಲ್ಲ. ಕಟೀಲು ದೇವಸ್ಧಾನದಲ್ಲಿ ರಾತ್ರಿ ಪೂಜೆ ಸಂಜೆ 6.30ಕ್ಕೆ ನಡೆಯಲಿದೆ. ರಾತ್ರಿ ಅನ್ನ ಪ್ರಸಾದ ವಿರುವುದಿಲ್ಲ. 

ಗ್ರಹಣ ಸ್ಪರ್ಶ ಕಾಲದಿಂದ ಗ್ರಹಣದ ಮಧ್ಯ ಕಾಲದವರೆಗೆ (ರಾತ್ರಿ 11.54ರಿಂದ ಮಧ್ಯರಾತ್ರಿ 1.52ರ ವರೆಗೆ) ದೇವಿಗೆ ನಿರಂತರ ವಿಶೇಷ ಅಭಿಷೇಕ, ಪೂಜೆ ನಡೆಯಲಿದೆ. ಉಡುಪಿ ಜಿಲ್ಲೆಯ ಕೊಲ್ಲೂರು ದೇವಸ್ಥಾನ ಗ್ರಹಣದ ಮಧ್ಯಾವಧಿಯಲ್ಲಿ ದೇವಿಗೆ ವಿಶೇಷ ಅಭಿಷೇಕ ನೆರವೇರಲಿದೆ. ರಾತ್ರಿ ಭಕ್ತರಿಗೆ ಭೋಜನದ ವ್ಯವಸ್ಥೆ ಇರುವುದಿಲ್ಲ.

click me!