
ಬೆಂಗಳೂರು(ಸೆ.04): ಮೈಸೂರಿನಲ್ಲಿರುವ ಕರ್ನಾಟಕ ಮುಕ್ತ ವಿವಿ (ಕೆಎಸ್ಒಯು) ಮಾನ್ಯತೆಯನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ) ರದ್ದುಪಡಿಸಿದ ಬಳಿಕವೂ ಪದವಿ ತರಗತಿಗಳಿಗೆ ನೋಂದಣಿ ಮಾಡಿ ವಿದ್ಯಾರ್ಥಿಯೊಬ್ಬರ ಭವಿಷ್ಯಕ್ಕೆ ಅಡ್ಡಿಪಡಿಸಿದ ಪರಿಣಾಮ ಗ್ರಾಹಕರ ಹಕ್ಕುಗಳ ಕೋರ್ಟ್ 2 ಲಕ್ಷ ರು. ದಂಡ ವಿಧಿಸಿ ಆದೇಶಿಸಿದೆ.
ಮಾನ್ಯತೆ ಇಲ್ಲದಿದ್ದರೂ ಪದವಿ ನೀಡಲಾಗಿದೆ. ಅಲ್ಲದೇ ಪದವಿ ಪಡೆದಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಸಾಧ್ಯವಿಲ್ಲದಂತಾಗಿದೆ. ಇದರಿಂದ ಮುಂದಿನ ಅಧ್ಯಯನಕ್ಕೆ ಅವಕಾಶವಿಲ್ಲದೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ ದಂಡ ವಿಧಿಸಿದೆ.
2011-12ರ ಶೈಕ್ಷಣಿಕ ಸಾಲಿನಲ್ಲಿ ಬಿಎ ವ್ಯಾಸಂಗ ಮಾಡಲು ರೂಪಶ್ರೀ ಎಂಬುವರಿಗೆ ಅವಕಾಶ ಮಾಡಿಕೊಟ್ಟಿದ್ದ ಕೆಎಸ್'ಒಯು 2012-14ನೇ ಸಾಲಿನಲ್ಲಿ ಪದವಿ ಪ್ರಮಾಣಪತ್ರ ನೀಡಿತ್ತು. ನಂತರ ಕಾನೂನು ಪದವಿ ಅಭ್ಯಾಸ ಮಾಡಲು ಮೈಸೂರಿನ ಶಾರದಾ ವಿಲಾಸ ಕಾನೂನು ಕಾಲೇಜಿನಲ್ಲಿ ಪ್ರವೇಶ ಪಡೆದು ಶುಲ್ಕ ಪಾವತಿಸಿದ್ದರು. ಆದರೆ, ಕೆಎಸ್'ಒಯುಗೆ ಯುಜಿಸಿ ಮಾನ್ಯತೆ ಇಲ್ಲದ ಪರಿಣಾಮ ಅವರ ನೋಂದಣಿ ರದ್ದಾಗಿತ್ತು. ಇದನ್ನು ರೂಪಶ್ರೀ ಮೈಸೂರಿನ ಗ್ರಾಹಕರ ಹಕ್ಕುಗಳ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ಕೆಎಸ್'ಒಯುಗೆ ಎರಡು ಲಕ್ಷ ದಂಡ ವಿಧಿಸಿದೆ. ಅಲ್ಲದೆ, ದಂಡದ ಮೊತ್ತವನ್ನು ಪರಿಹಾರವಾಗಿ ವಿದ್ಯಾರ್ಥಿನಿಗೆ ನೀಡುವಂತೆ ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.