
ಬಳ್ಳಾರಿ(ಜು.05): ಈ ರಾಜಕಾರಣಿಗಳೇ ಹೀಗೆ ಮಾಡೋದೆಲ್ಲಾ ಮಾಡಿ ನಮ್ಮದೇನು ತಪ್ಪಿಲ್ಲ ಎನ್ನುವ ಚಾಳಿ. ಆರೋಪದಲ್ಲಿ ಸಿಕ್ಕಿ ಬಿದ್ದಾಗ ಅಧಿಕಾರ ಪ್ರಭಾವ ಬಳಸಿ ಕೇಸ್ ಬಂದ್ ಮಾಡಿಸಿ ಬಿಡುತ್ತಾರೆ. ಈಗ ಇಂಥದ್ದೇ ಒಂದು ಆರೋಪ ಸಂಸದರೊಬ್ಬರ ಮೇಲೆ ಬಂದಿದೆ. ಇನ್ನೂ ವಿಚಾರಣೆಗೆ ಯಾವುದೇ ಅಡ್ಡಿ ಆಂತಕವಿಲ್ಲದಿದ್ದರೂ ತನಿಖೆ ಚುರುಕುಗೊಳಿಸಬೇಕಾದ ಲೋಕಾಯುಕ್ತ ಕೂಡ ವಿಚಾರಣೆಗೆ ಹಿಂದೇಟು ಹಾಕುತ್ತಿದೆ.
ಸಂಸದ ಶ್ರೀರಾಮುಲು ವಿರುದ್ಧ ಭೂಕಬಳಿಕೆ ಆರೋಪ: ತ್ವರಿತ ವಿಚಾರಣೆಗೆ ಲೋಕಾಯುಕ್ತ ಪೊಲೀಸರ ಹಿಂದೇಟು
ಸರ್ಕಾರಿ ಹಾಗೂ ಸಾರ್ವಜನಿಕ ಭೂಮಿಗೆ ಸುಳ್ಳು ದಾಖಲೆ ಸೃಷ್ಟಿಸಿ ಅಕ್ರಮವಾಗಿ ಭೂಮಿ ಸ್ವಾಧೀನಪಡಿಸ್ಕೊಂಡಿದ್ದ ಪ್ರಕರಣದಲ್ಲಿ ಆರನೇ ಆರೋಪಿಯಾಗಿರುವ ಸಂಸದ ಶ್ರೀರಾಮುಲು ವಿರುದ್ಧ ವಿಚಾರಣೆ ನಡೆಸಲು ಲೋಕಾಯುಕ್ತ ಪೊಲೀಸ್ ವಿಳಂಬ ಮಾಡುತ್ತಿರುವುದು ಬಯಲಾಗಿದೆ.
57 ಎಕರೆ 30 ಗುಂಟೆ ಜಮೀನಿಗೆ ಸುಳ್ಳು ದಾಖಲೆ ಸೃಷ್ಟಿ: ತಹಶೀಲ್ದಾರ್ ಕಚೇರಿಯಲ್ಲೇ ಸೃಷ್ಟಿಯಾಗಿತ್ತು ದಾಖಲೆ..!
ಬಳ್ಳಾರಿ ಕೌಲ್ ಬಜಾರ್ ಏರಿಯಾದ ಹೊಸಪೇಟೆ ಬಳ್ಳಾರಿ ರಸ್ತೆಯ ಟಿ.ಬಿ.ಸ್ಯಾನಿಟೋರಿಯಂ ಆಸ್ಪತ್ರೆ ಪಕ್ಕದಲ್ಲಿ ಸರ್ವೆ ನಂಬರ್ 597/ಬಿ ಪೈಕಿ 259 ಎಕರೆ 95 ಗುಂಟೆ, ಸರ್ವೆ ನಂಬರ್ 601 ಎ ನಲ್ಲಿದ್ದ 57 ಎಕರೆ 30 ಗುಂಟೆ ಜಮೀನಿಗೆ ಪಹಣಿ, ಮ್ಯುಟೇಷನ್ಗೆ ಸಂಬಂಧಿಸಿದಂತೆ ತಹಶೀಲ್ದಾರ್ ಕಚೇರಿಯಲ್ಲೇ ಸುಳ್ಳು ದಾಖಲೆ ಸೃಷ್ಟಿಯಾಗಿತ್ತು. ಸರ್ವೆ ನಂಬರ್ 597 ಬಿ 2 ಮತ್ತು ಎ 3ರಲ್ಲಿದ್ದ ಜಮೀನುಗಳು ಆರ್ಟಿಸಿಗೆ ತಕ್ಕಂತೆ ವಿಸ್ತೀರ್ಣ ಸರಿ ಇಲ್ಲ. ಸರಿಪಡಿಸಿಕೊಡಿ ಎಂದು ಖುದ್ದು ಶ್ರೀರಾಮುಲು ಆಗಿನ ತಹಶೀಲ್ದಾರ್ ಶಶಿಧರ್ ಬಗಲಿ ಅವರಿಗೆ ಮನವಿ ಸಲ್ಲಿಸಿದ್ದರು. ಶಶಿಧರ್ ಬಗಲಿ ಕೂಡ ಶ್ರೀರಾಮುಲು ತಾಳಕ್ಕೆ ತಕ್ಕಂತೆ ಕುಣಿದು 57 ಎಕರೆ 30 ಗುಂಟೆ ಜಮೀನನ್ನು ಅಕ್ರಮವಾಗಿ ಶ್ರೀರಾಮುಲು ಹೆಸರಿಗೆ ನೋಂದಾಯಿಸಿದ್ದರು. ಇದನ್ನು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿ ಇದೊಂದು ಪೂರ್ವ ನಿಯೋಜನೆ ಎಂದು ತನಿಖೆಯಲ್ಲಿ ಉಲ್ಲೇಖಿಸಿದ್ದರು.
ಈ ಪ್ರಕರಣದಲ್ಲಿ ಹಾಲಿ ಸಂಸದ ಶ್ರೀರಾಮುಲು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದು ತನಿಖೆಯ ವೇಳೆಯಲ್ಲಿ ಸಾಬೀತಾಗಿತ್ತು. ಇನ್ನೂ ಇತ್ತೀಚೆಗೆ ತಪ್ಪಿತಸ್ಥ ತಹಶೀಲ್ದಾರ್ ಶಶಿದರ್ ಬಗಲಿ ವಿರುದ್ಧ ವಿಚಾರಣೆ ನಡೆಸಲು ಲೋಕಾಯುಕ್ತಕ್ಕೆ ಸರ್ಕಾರ ಅನುಮತಿ ನೀಡಿದೆ. ಆದರೆ ಶ್ರೀರಾಮುಲು ವಿರುದ್ಧದ ವಿಚಾರಣೆಗೆ ಮಾತ್ರ ಹಿಂದೆೇಟು ಹಾಕಲಾಗುತ್ತಿದೆ.
ಭ್ರಷ್ಟಾಚಾರ, ಲಂಚ ಸ್ವೀಕಾರ, ಅಧಿಕಾರ ದುರುಪಯೋಗದಂತ ಪ್ರಕರಣಗಳಲ್ಲಿ ಸಿಲುಕುವ ಶಾಸಕರು, ಸಂಸದರ ವಿರುದ್ಧ ವಿಚಾರಣೆ ನಡೆಸುವುದಕ್ಕೆ ಸ್ಪೀಕರ್ ಅನುಮತಿಯ ಅವಶ್ಯಕತೆಯೇ ಇಲ್ಲ ಎಂದು ಸ್ಪೀಕರ್ ಕೋಳಿವಾಡ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ವಿಚಾರ ಲೋಕಾಯುಕ್ತ ಎಡಿಜಿಪಿಗೆ ಗೊತ್ತಿಲ್ಲವೆಂದೇನಿಲ್ಲ. ಅದರೂ ವಿಚಾರಣೆಯನ್ನು ವಿಳಂಬ ಮಾಡೋ ಉದ್ದೇಶದಿಂದಲೇ ಲೋಕಸಭಾ ಸ್ಪೀಕರ್ಗೆ ವಿಚಾರಣೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾತುಗಳು ಕೇಳಿ ಬರುತ್ತಿವೆ.
ವರದಿ: ಜಿ.ಮಹಾಂತೇಶ್, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.