ಕೋಮು ಸಂಘರ್ಷದಿಂದ ಕೆಂಡವಾಗಿರುವ ಕರಾವಳಿಯಲ್ಲಿ ಮತ್ತೊಂದು ಆತಂಕಕಾರಿ ಘಟನೆ ನಡೆದಿದೆ. ಆರ್ ಎಸ್ ಎಸ್ ಕಾರ್ಯಕರ್ತನ ಮೇಲೆ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದೆ. ಬಂಟ್ವಾಳದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಈ ಘಟನೆ ನಡೆದಿರುವುದು ಕರಾವಳಿಯಲ್ಲಿ ಮತ್ತಷ್ಟು ಬಿಗುವಿನ ವಾತಾವರಣ ಸೃಷ್ಟಿಸಿದೆ.
ಬಂಟ್ವಾಳ(ಜು.05): ಕೋಮು ಸಂಘರ್ಷದಿಂದ ಕೆಂಡವಾಗಿರುವ ಕರಾವಳಿಯಲ್ಲಿ ಮತ್ತೊಂದು ಆತಂಕಕಾರಿ ಘಟನೆ ನಡೆದಿದೆ. ಆರ್ ಎಸ್ ಎಸ್ ಕಾರ್ಯಕರ್ತನ ಮೇಲೆ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದೆ. ಬಂಟ್ವಾಳದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಈ ಘಟನೆ ನಡೆದಿರುವುದು ಕರಾವಳಿಯಲ್ಲಿ ಮತ್ತಷ್ಟು ಬಿಗುವಿನ ವಾತಾವರಣ ಸೃಷ್ಟಿಸಿದೆ.
ಬಂಟ್ವಾಳದಲ್ಲಿ ಆರ್ಎಸ್ಎಸ್ ಕಾರ್ಯಕರ್ತನ ಮೇಲೆ ಅಟ್ಯಾಕ್
ನಿಷೇಧಾಜ್ಞೆ ಜಾರಿಯಲ್ಲಿದ್ದು, ಬಿಗಿ ಪೊಲೀಸ್ ಬಂದೋ ಬಸ್ತ್ ನಡುವೆಯೂ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಮತ್ತೆ ನೆತ್ತರು ಹರಿದಿದೆ. ಬಂಟ್ವಾಳದ ಬಿ.ಸಿ. ರೋಡ್'ನಲ್ಲಿ ಆರ್'ಎಸ್'ಎಸ್ ಕಾರ್ಯಕರ್ತ ಶರತ್ ಎಂಬುವವರ ಮೇಲೆ ಮೂವರು ಕಿಡಿಗೇಡಿಗಳು ಅಟ್ಯಾಕ್ ಮಾಡಿ ತಲವಾರಿನಿಂದ ಕೊಚ್ಚಿ ಪರಾರಿಯಾಗಿದ್ದಾರೆ.
ನಿನ್ನೆ ರಾತ್ರಿ 9.39ರ ಸುಮಾರಿನಲ್ಲಿ ಅಂಗಡಿ ಬಂದ್ ಮಾಡಿ ಮನೆಗೆ ಹೋಗೋ ಸಂದರ್ಭದಲ್ಲಿ ಶರತ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಶರತ್ ತಲೆಗೆ ಗಂಭೀರ ಏಟು ಬಿದ್ದು ರಕ್ತದ ಮಡುವಿನಲ್ಲಿದ್ದ ಶರತ್'ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಶರತ್ ಸ್ನೇಹಿತ ಭುವಿತ್ ಶರತ್'ಗೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ಆರ್ ಎಸ್ ಎಸ್ ಕಾರ್ಯಕರ್ತ ಅಂತಾನೆ ಹಲ್ಲೆ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಇನ್ನೂ ಈ ಘಟನೆಯನ್ನು ಸಂಸದೆ ಶೋಭಾ ಕರಂದ್ಲಾಜೆ ತೀವ್ರವಾಗಿ ಖಂಡಿಸಿದ್ದಾರೆ. ತಾಲೂಕಿನಲ್ಲಿ ನಿಷೇಧಾಜ್ಞೆ ಜಾರಿ ಇದ್ದೂ ಕೂಡ ಇಂತಹ ಕೃತ್ಯ ನಡೆದಿರುವುದು ಸರಿಯಲ್ಲ, ಇದರ ಹಿಂದೆ ಸಚಿವರಾದ ಟಿ ಖಾದರ್, ರಮಾಮಾಥ್ ರೈ ಕುಮ್ಮಕ್ಕು ಇದೆ ಅಂತ ಬಹಿರಂಗವಾಗಿಯೇ ಆರೋಪಿಸಿದ್ದಾರೆ.
ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ರೆಡ್ಡಿ ಸ್ಥಳಕ್ಕೆ ದೌಡಾಯಿಸಿದ್ದು, ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.