
ಇಸ್ಲಾಮಾಬಾದ್(ಡಿ.02): ಲಷ್ಕರ್-ಎ-ತೊಯ್ಬಾ ಪಾಕಿಸ್ತಾನದ ಉತ್ತಮ ಸರ್ಕಾರೇತರ ಸಂಸ್ಥೆ(ಎನ್ಜಿಒ)ಆಗಿದ್ದು, ಭಾರತೀಯ ಸೇನಾಪಡೆಯಿಂದ ಹತ್ಯೆಗೀಡಾದ ಬುರ್ಹಾನ್ ವಾನಿಯನ್ನು ವೀರಯೋಧ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಬಣ್ಣಿಸಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಯುದ್ಧ ಪ್ರಚೋದಕ’ ಎಂದು ಅವರು ಟೀಕಿಸಿದ್ದಾರೆ.
ಕಾಶ್ಮೀರದಲ್ಲಿ ಹತ್ಯೆಗೀಡಾದ ಬುರ್ಹಾನ್ ವಾನಿ ಮತ್ತು ಹಿಜ್ಬುಲ್ ಮುಜಾಹಿದೀನ್, ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ನಡುವಿನ ಆಡಿಯೊ ಸಂಭಾಷಣೆ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿದ ಮುಷರಫ್, ‘‘ಅವರಿಬ್ಬರು ಸಂಪರ್ಕದಲ್ಲಿದ್ದರು ಎಂಬ ವಿಚಾರದಲ್ಲಿ ಆಶ್ಚರ್ಯಪಡುವಂಥದ್ದೇನಿಲ್ಲ. ಹಫೀಜ್ ಸಯೀದ್ ಶಿಕ್ಷಣ ಪೂರೈಸಿದ ವ್ಯಕ್ತಿಯಾಗಿದ್ದು, ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದಾರೆ. ರಾಷ್ಟ್ರದಲ್ಲಿ ಪ್ರವಾಹ ಉಂಟಾದಾಗ ಎಲ್ಇಟಿ ಉತ್ತಮ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, ಅದು ಪಾಕ್ನ ಎನ್'ಜಿಒ ಆಗಿದೆ,’’ ಎಂದು ‘ಸಿಎನ್ಎನ್-ನ್ಯೂಸ್-18’ ವಾಹಿನಿಗೆ ತಿಳಿಸಿದ್ದಾರೆ.
ವಾನಿಯ ಕುಟುಂಬವನ್ನು ಭಾರತದ ಮಿಲಿಟರಿ ಪಡೆಗಳು ಹಿಂಸಿಸುವ ಮೂಲಕ ಆತ ಆಯುಧ ಹಿಡಿಯಲು ಪ್ರೇರೇಪಿಸಿದವು. ಇನ್ನು ‘‘ಹಫೀಜ್ನನ್ನು ಓರ್ವ ಭಯೋತ್ಪಾದಕ ಎಂಬುದನ್ನು ನಾನು ಒಪ್ಪುವುದಿಲ್ಲ. ಒಂದು ವೇಳೆ ನಾನು ವಕೀಲನಾಗಿದ್ದರೆ, ಹಫೀಜ್ ಸಯೀದ್ ಪರ ವಕಾಲತ್ತು ಮಾಡುತ್ತಿದ್ದೆ. ದೇಶದ ಅಧ್ಯಕ್ಷನಾಗಿದ್ದರೆ, ಆತನ ಪರ ವಿಶ್ವಸಂಸ್ಥೆಯಲ್ಲೂ ಧ್ವನಿಯೆತ್ತುತ್ತಿದ್ದೆ,’’ ಎಂದು ಅವರು ಹೇಳಿದ್ದಾರೆ.
ಆಡಿಯೋ ಬಿಡುಗಡೆ: ಭಾರತೀಯ ಸೇನಾಪಡೆಯ ಗುಂಡಿಗೆ ಬಲಿಯಾಗುವ ಕೆಲ ದಿನಗಳ ಹಿಂದೆಯಷ್ಟೇ ಬುರ್ಹಾನ್ ವಾನಿ ಲಷ್ಕರ್ ಮುಖ್ಯಸ್ಥ ಸಯೀದ್ ಜತೆ ಫೋನ್ ಸಂಭಾಷಣೆ ನಡೆಸಿದ್ದ ಎಂದು ಇದೀಗ ಬಿಡುಗಡೆಯಾದ ಆಡಿಯೋವೊಂದು ತಿಳಿಸಿದೆ. ನಾವು (ಎಲ್ಇಟಿ ಹಾಗೂ ಹಿಜ್ಬುಲ್ ಮುಜಾಹಿದೀನ್) ಕೈಜೋಡಿಸಿ, ಭಾರತದ ಭದ್ರತಾ ಪಡೆ ವಿರುದ್ಧ ಜಿಹಾದ್ ನಡೆಸೋಣ ಎಂದು ಮಾತನಾಡಿಕೊಂಡಿರುವುದು ಇದರಲ್ಲಿ ಗೊತ್ತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.