
ಬೆಳಗಾವಿ(ಆ. 31): ಮಹಾರಾಷ್ಟ್ರಕ್ಕೆ ಬೆಳಗಾವಿ ಸೇರಿದರೆ ಎಲ್ಲರಗಿಂತ ಮೊದಲು ನಾನು ಜೈಮಹಾರಾಷ್ಟ್ರ ಅಂತ ಹೇಳುವೆ ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಡಿಕೆಶಿ ಆಪ್ತೆ ಲಕ್ಷ್ಮೀ ಹೆಬ್ಬಾಳ್ಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದೆ ತಿಂಗಳು 27ರಂದು ಬಸರೀಕಟ್ಟಿ ಗ್ರಾಮದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮಾಡಿದ ಭಾಷಣದ ಆಡಿಯೋ ಸೋಶಿಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
"ನಾನೀಗ ಕರ್ನಾಟಕದಲ್ಲಿದ್ದೀನಿ. ಆದರೆ ಗಡಿ ವಿಚಾರ ಸುಪ್ರೀಂ ಕೋರ್ಟ್'ನಲ್ಲಿದೆ. ಪ್ರಕರಣ ಮುಗಿದು ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಗುವುದಾದರೆ ಎಲ್ಲರಿಗಿಂತ ಮೊದಲು ನಾನೇ ಮಹಾರಾಷ್ಟ್ರದ ಧ್ವಜ ಹಿಡಿದು ಜೈಮಹಾರಾಷ್ಟ್ರ ಅಂತಾ ಹೇಳುವೆ" ಎಂದು ಕಾಂಗ್ರೆಸ್ ನಾಯಕಿಯು ಈ ಭಾಷಣದಲ್ಲಿ ಹೇಳಿದ್ದಾರೆ. ಈ ಮೂಲಕ ಮರಾಠಿ ಭಾಷಿಕರನ್ನು ಸೆಳೆಯಲು ಲಕ್ಷ್ಮೀ ಹೇಬ್ಬಾಳ್ಕರ್ ಕೀಳು ಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ. ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಮಾತುಗಳನ್ನ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
"ಯಾರಿಗೂ ಈ ರೀತಿ ಹೇಳುವ ಧೈರ್ಯವಿಲ್ಲ. ಆದರೆ ನನಗೆ ಯಾರ ಭಯವಿಲ್ಲ. ನಾನು ಯಾರಿಗೂ ಹೆದರುವುದಿಲ್ಲ. ನಾನು ಹೆದರುವುದು ಆ ಭಗವಂತನಿಗೆ ಹಾಗೂ ನನ್ನ ತಂದೆ-ತಾಯಿಗೆ ಮಾತ್ರ. ನನಗೆ ಜಾತಿ, ಧರ್ಮ, ವ್ಯಕ್ತಿಯ ಬಗ್ಗೆ ಯಾವುದೇ ನಂಬಿಕೆಯಿಲ್ಲ. ಯಾರಿಂದ ಏನೂ ಆಗಬೇಕಿಲ್ಲ," ಎಂದೂ ಲಕ್ಷ್ಮೀ ಹೆಬ್ಬಾಳ್ಕರ್ ಕಡ್ಡಿ ತುಂಡುಮಾಡಿದಂತೆ ಮಾತನಾಡಿದ್ದಾರೆ.
ಕನ್ನಡಾಂಬೆಗೆ ದ್ರೋಹ ಬಗೆಯುವಂತಹ ಇವರ ಈ ಹೇಳಿಕೆಗೆ ಈಗ ಕನ್ನಡ ಸಂಘಟನೆಗಳು ಕೆಂಡಾಮಂಡಲವಾಗಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ಮಂಜುನಾಥ್ ಎಚ್.ಪಾಟೀಲ್, ಸುವರ್ಣನ್ಯೂಸ್, ಬೆಳಗಾವಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.