
ಮಂಡ್ಯ(ಫೆ.06): ಮಂಡ್ಯದ ವಿಶ್ವ ಪ್ರಸಿದ್ದ ಕೆ.ಆರ್. ಎಸ್ ಜಲಾಶಯಕ್ಕೆ ಕಂಟಕವೊಂದು ಎದುರಾಗಿದೆ. ಹಾಗಂತ ಭಯೋತ್ಪಾದಕರು ಅಡಗಿ ಕೂತಿಲ್ಲ. ರಾಜ್ಯ ಸರ್ಕಾರದ ನಡೆಯಿಂದಾಗಿಯೇ ಸಂಕಷ್ಟ ಶುರುವಾಗಿರುವುದು. ಜಲಾಶಯ ಸಮೀಪದಲ್ಲೇ ಶುರುವಾಗಿರುವ ಪ್ರಾಜೆಕ್ಟ್ ಇಷ್ಟಕ್ಕೆಲ್ಲಾ ಕಾರಣ. ಹಾಗಾದರೆ, ಆ ಪ್ರಾಜೆಕ್ಟ್ ಯಾವುದು? ಯಾಕಾಗಿ ಎನ್ನುವುದರ ವರದಿ ಇಲ್ಲಿದೆ.
ಸರ್ಕಾರದ ನಡೆಯಿಂದಲೇ ಶುರುವಾಗಿದೆ ಆತಂಕ
ಮಂಡ್ಯ ಜಿಲ್ಲೆಯ ಕೆ.ಆರ್.ಎಸ್ ಜಲಾಶಯಕ್ಕೆ ಭಾರೀ ಗಂಡಾಂತರವೊಂದು ಎದುರಾಗಿದೆ. ಜಲಾಶಯದ 500 ಮೀಟರ್ ಸಮೀಪದ ಎಡಮುರಿಯಲ್ಲಿ ರಾಜ್ಯ ಸರ್ಕಾರ .05 ಮೆಗಾ ವ್ಯಾಟ್ ಕಿರು ಜಲವಿದ್ಯುತ್ ಯೋಜನೆಗೆ ಅನುಮತಿ ನೀಡಿದೆ. ಇದಕ್ಕಾಗಿ ಬೆಂಗಳೂರಿನ ಎಂ. ಪ್ಲೋರ್ ಪವರ್ ಪ್ಲಾಂಟ್ ಕಂಪನಿ ಕಾಮಗಾರಿ ಕೂಡ ಶುರು ಮಾಡಿದೆ. ಹೀಗಾಗಿ ಕಾವೇರಿ ನದಿ ಮಧ್ಯಕ್ಕೆ ಮಣ್ಣು ಸುರಿದು ನದಿ ಹರಿಯುವ ದಿಕ್ಕನ್ನೇ ಬದಲಿಸಿದ್ದಾರೆ. ಅಲ್ಲದೇ, ಬಂಡೆ ಸಿಡಿಸಲು ಸ್ಫೋಟಕ ಬಳಸಲಾಗುತ್ತಿದೆ. ಇದರಿಂದಾಗಿ ಪಕ್ಕದಲ್ಲಿರುವ ಎಡಮುರಿ ಚೆಕ್ ಡ್ಯಾಂ ಸೇರಿ ಕೂಗಳತೆ ದೂರದಲ್ಲಿರುವ ಕೆ.ಆರ್.ಎಸ್ ಜಲಾಶಯಕ್ಕೆ ಹಾನಿಯಾಗಲಿದೆ. ಅಲ್ಲದೆ ರೈತರ ಜಮೀನಿಗೆ ನೀರು ಪೂರೈಸುವ ಸಿಡಿಎಸ್, ವಿರಿಜಾ ಮತ್ತು ದೇವರಾಯ ನಾಲೆಗಳಿಗೆ ಹರಿಸಲು ತೊಂದರೆ ಉಂಟಾಗಿದೆ ಅಂತ ರೈತರು ಆರೋಪಿಸಿದ್ದಾರೆ.
ಪರಿಸರ ಸಂಪತ್ತು-ಜೀವರಾಶಿಗೆ ಮಾರಕ.
ಪವರ್ ಪ್ರಾಜೆಕ್ಟ್ ಕಾಮಗಾರಿಯಿಂದಾಗಿ ಸುತ್ತಲಿನ ಪರಿಸರ ಸಂಪತ್ತು ಮತ್ತು ಜೈವಿಕ ಜೀವರಾಶಿಗಳು ನಾಶವಾಗಿದ್ದು, ಪ್ರವಾಸೋದ್ಯಮಕ್ಕೂ ಪೆಟ್ಟು ಬೀಳಲಿದೆ ಅಂತ ಪರಿಸರವಾದಿಗಳು ಆತಂಕ ವ್ಯಕ್ತಪಡಿಸ್ತಿದ್ದಾರೆ. ಅಲ್ಲದೇ, ಸರ್ಕಾರದ ವಿರುದ್ಧ ಬೃಹತ್ ಹೋರಾಟದ ಎಚ್ಚರಿಕೆಯನ್ನೂ ಪರಿಸರವಾದಿಗಳು ನೀಡಿದ್ದಾರೆ.
ಒಟ್ಟಿನಲ್ಲಿ ಕರುನಾಡಿನ ಹಿರಿಮೆ ಕೃಷ್ಣರಾಜ ಜಲಸಾಗರದ ಭದ್ರತೆಗಾಗಿ ರಾಜ್ಯ ಸರ್ಕಾರ ಕೋಟ್ಯಂತರ ಖರ್ಚು ಮಾಡುತ್ತೆ. ಆದ್ರೆ, ಅದೇ ಸರ್ಕಾರ ಡೇಂಜರ್ ಪವರ್ ಪ್ಲಾಂಟ್ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದೆ. ರಾಜ್ಯ ಸರ್ಕಾರದ ಈ ದ್ವಂದ್ವ ನೀತಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.