ಇನ್ನುಮುಂದೆ ಮೆಜೆಸ್ಟಿಕ್’ನಿಂದ ಮೆಟ್ರೋಗೆ ಹೋಗೋದು ಸುಲಭ

Published : Feb 21, 2018, 07:27 AM ISTUpdated : Apr 11, 2018, 12:44 PM IST
ಇನ್ನುಮುಂದೆ ಮೆಜೆಸ್ಟಿಕ್’ನಿಂದ ಮೆಟ್ರೋಗೆ ಹೋಗೋದು ಸುಲಭ

ಸಾರಾಂಶ

ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳು ಮತ್ತು ಸಿಟಿ ರೈಲು ನಿಲ್ದಾಣಕ್ಕೆ ಹಾಲಿ ಇರುವ ಸುರಂಗ ಮಾರ್ಗ (ಸಬ್ ವೇ)ಕ್ಕೆ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ನೇರ ಸಂಪರ್ಕ ಕಲ್ಪಿಸುವ ಮಾರ್ಗ (ಪಾಥ್‌ವೇ)ವನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮಂಗಳವಾರ ಲೋಕಾರ್ಪಣೆ ಗೊಳಿಸಿದರು.

ಬೆಂಗಳೂರು : ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳು ಮತ್ತು ಸಿಟಿ ರೈಲು ನಿಲ್ದಾಣಕ್ಕೆ ಹಾಲಿ ಇರುವ ಸುರಂಗ ಮಾರ್ಗ (ಸಬ್ ವೇ)ಕ್ಕೆ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ನೇರ ಸಂಪರ್ಕ ಕಲ್ಪಿಸುವ ಮಾರ್ಗ (ಪಾಥ್‌ವೇ)ವನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮಂಗಳವಾರ ಲೋಕಾರ್ಪಣೆ ಗೊಳಿಸಿದರು.

ಈ ಮೂಲಕ ಮೆಟ್ರೋ ರೈಲು ಪ್ರಯಾಣಿಕರ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ. ಮೆಟ್ರೋ ನಿಲ್ದಾಣದಿಂದ ನಿರ್ಮಿಸಲಾಗಿರುವ ಉಪ ಮಾರ್ಗವು ನೇರವಾಗಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಹಾಗೂ ಸಿಟಿ ರೈಲು ನಿಲ್ದಾಣಕ್ಕೆ ಹೋಗುವ ಹಳೆಯ ಸುರಂಗ ಮಾರ್ಗಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದಾಗಿ ಮೆಜೆಸ್ಟಿಕ್ ಮೆಟ್ರೋ ರೈಲು ನಿಲ್ದಾಣದಿಂದ ಸಿಟಿ ರೈಲು ನಿಲ್ದಾಣಕ್ಕೆ ಹೋಗಲು ಅನುಕೂಲವಾಗಿದೆ.

ಈ ಮಾರ್ಗದ ಸಂಪರ್ಕದಿಂದ ಪ್ರಯಾಣಿಕರು ಫುಟ್‌ಪಾತ್ ಮೇಲೆ ಹೋಗುವುದು, ರಸ್ತೆ ದಾಟುವುದನ್ನು ತಪ್ಪಿ ಪ್ರಯಾಣಿಕರ ಸುರಕ್ಷತೆಗೆ ನೆರವಾಗಲಿದೆ. ಈ ಮಾರ್ಗ ಸುಮಾರು 175 ಮೀಟರ್ ಉದ್ದವಿದ್ದು, 3 ಮೀಟರ್ ಅಗಲವಿದೆ. ಈ ಮಾರ್ಗ ನಿರ್ಮಾಣಕ್ಕಾಗಿ ಸುಮಾರು 1 ಕೋಟಿ ಖರ್ಚು ಮಾಗಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದರು.

ಜತೆಗೆ ಮೆಟ್ರೋ ನಿಲ್ದಾಣದಿಂದ ಇದೇ ಮಾರ್ಗದ ಮೂಲಕ ಹೊರ ಬಂದು ಎಡಕ್ಕೆ ತಿರುಗಿದರೆ, ಬಿಎಂಟಿಸಿ ಬಸ್ ನಿಲ್ದಾಣದಿಂದ ಕಾಟನ್‌ಪೇಟೆ ಕಡೆಗೆ ಹೋಗುವ ಮುಖ್ಯ ರಸ್ತೆಗೆ ತಲುಪಬಹುದು. ಇದರ ಸಮೀಪವೇ ಮತ್ತೊಂದು ಉಪಮಾರ್ಗವಿದ್ದು, ಆ ಮೂಲಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪದ ಆಟೋ ನಿಲ್ದಾಣಕ್ಕೆ ಸುಲಭವಾಗಿ ತೆರಳಬಹುದಾಗಿದೆ.

ಸುರಂಗ ಮಾರ್ಗ: ಬಿಎಂಆರ್‌ಸಿಎಲ್  ಸಂಸ್ಥೆಯು ಟ್ಯಾಂಕ್‌ಬಂಡ್ ರಸ್ತೆ ಮತ್ತು ಚಿಕ್ಕಲಾಲ್‌ಬಾಗ್ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ಸುರಂಗ ಮಾರ್ಗ ನಿರ್ಮಿಸಿದ್ದು, ಅದಕ್ಕಾಗಿ 8 ಕೋಟಿ ವೆಚ್ಚ ಮಾಡಲಾಗಿದೆ. ಅಂತೆಯೇ ಮಿನರ್ವ ಮಿಲ್ಸ್ ಬಳಿ ರಸ್ತೆ ದಾಟಲು ಒಂದು ಸುರಂಗ ಮಾರ್ಗವನ್ನು ಬಿಎಂಆರ್‌ಸಿಎಲ್ ನಿರ್ಮಿಸಿದ್ದು, ಇದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೋ ರೈಲು ನಿಲ್ದಾಣದಿಂದ ಗೋಪಾಲಪುರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ.

ಇದರಿಂದ ಪ್ರಯಾಣಿಕರು ರಸ್ತೆಯನ್ನು ದಾಟದೆ ನೇರವಾಗಿ ಮೆಟ್ರೋ ನಿಲ್ದಾಣದ ಕಾನ್ಕೋರ್ಸ್‌ ಹೋಗಲು ಅನುಕೂಲವಾಗಲಿದೆ. ಈ ಮಾರ್ಗದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಧಕ್ಕೆಯಾಗದಂತೆ ಹಂತ ಹಂತವಾಗಿ ನಿರ್ಮಿಸಲಾಗಿದ್ದರಿಂದ ಸಾಕಷ್ಟು ವಿಳಂಬಕ್ಕೆ ಕಾರಣವಾಯಿತು. ಈ ಸುರಂಗಮಾರ್ಗ ಸುಮಾರು 60 ಮೀಟರ್ ಉದ್ದ ಹಾಗೂ 4.5 ಮೀಟರ್ ಅಗಲವಿದೆ. ಈ ಸಂಪರ್ಕ ದಾರಿ ನಿರ್ಮಿಸಲು ಸುಮಾರು 4.5 ಕೋಟಿ ವೆಚ್ಚ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಅತಿಹೆಚ್ಚು ಮದ್ಯಪಾನ ಮಾಡುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ