ಕಿಚ್ಚ ಸುದೀಪ್ ದೂರದ ಸರ್ಬಿಯಾ ದೇಶಕ್ಕೆ ಹೊರಟಿದ್ದಾರೆ. ಬರೋಬ್ಬರಿ 40 ದಿನ ಆ ದೇಶದಲ್ಲಿ ಬಿಡಾರ ಹೂಡಲಿದ್ದಾರೆ. ಹಾಗಂತ ಸುದೀಪ್ ಹಾಲಿಡೇ ಮೂಡ್ನಲ್ಲಿ ಫ್ಯಾಮಿಲಿ ಜತೆ ಫಾರಿನ್ ಟ್ರಿಪ್ ಹೋಗುತ್ತಿದ್ದಾರೆಯೇ ಎಂದುಕೊಳ್ಳಬೇಡಿ. ಸಿನಿಮಾ ಶೂಟಿಂಗ್'ಗಾಗಿ ಕಿಚ್ಚ ಸುದೀಪ್ 40 ದಿನ ದೇಶ ಬಿಟ್ಟು ಹೊರಡುತ್ತಿದ್ದಾರೆ.
ಬೆಂಗಳೂರು (ಜೂ. 04): ಕಿಚ್ಚ ಸುದೀಪ್ ದೂರದ ಸರ್ಬಿಯಾ ದೇಶಕ್ಕೆ ಹೊರಟಿದ್ದಾರೆ. ಬರೋಬ್ಬರಿ 40 ದಿನ ಆ ದೇಶದಲ್ಲಿ ಬಿಡಾರ ಹೂಡಲಿದ್ದಾರೆ. ಹಾಗಂತ ಸುದೀಪ್ ಹಾಲಿಡೇ ಮೂಡ್ನಲ್ಲಿ ಫ್ಯಾಮಿಲಿ ಜತೆ ಫಾರಿನ್ ಟ್ರಿಪ್ ಹೋಗುತ್ತಿದ್ದಾರೆಯೇ ಎಂದುಕೊಳ್ಳಬೇಡಿ. ಸಿನಿಮಾ ಶೂಟಿಂಗ್'ಗಾಗಿ ಕಿಚ್ಚ ಸುದೀಪ್ 40 ದಿನ ದೇಶ ಬಿಟ್ಟು ಹೊರಡುತ್ತಿದ್ದಾರೆ.
ಕಾರ್ತಿಕ್ ನಿರ್ದೇಶನದ, ಸೂರಪ್ಪ ಬಾಬು ನಿರ್ಮಾಣದ ‘ಕೋಟಿಗೊಬ್ಬ 3 ಚಿತ್ರದ ಶೂಟಿಂಗ್ಗಾಗಿ ಕಿಚ್ಚ ಸುದೀಪ್ ಅವರನ್ನು ಒಳಗೊಂಡಂತೆ 25 ಜನರ ತಂಡ ಸರ್ಬಿಯಾ ದೇಶಕ್ಕೆ ಹೊರಡುತ್ತಿದೆ. ಮೊದಲ ಹಂತದಲ್ಲೇ ವಿದೇಶದಲ್ಲಿ ಚಿತ್ರೀಕರಣ ಮಾಡುವುದಕ್ಕೆ ಚಿತ್ರತಂಡ ನಿರ್ಧರಿಸಿದೆ. ಹೀಗಾಗಿ ಸೂರಪ್ಪ ಬಾಬು ತಂಡ ವಿದೇಶ ಯಾತ್ರೆಗೆ ಎಲ್ಲಾ ರೀತಿಯ ತಯಾರಿಯೂ ಮಾಡಿಕೊಂಡಿದ್ದು, ಸುದೀಪ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಪೈಲ್ವಾನ್ಗೆ ಒಂದು ಹಂತ ಮುಕ್ತಾಯ ಕೃಷ್ಣ ನಿರ್ದೇಶನದ ‘ಪೈಲ್ವಾನ್’ ಚಿತ್ರಕ್ಕೆ 10 ದಿನ ಚಿತ್ರೀಕರಣ ಮಾಡಿದ್ದಾರೆ. ಸುದೀಪ್ ಜತೆ ಸುನೀಲ್ ಶೆಟ್ಟಿ ಸೇರಿದಂತೆ ಬೇರೆ ಬೇರೆ ಕಲಾವಿದರು ಈ ಮೊದಲ ಹಂತದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.
‘ಹೆಬ್ಬುಲಿ’ ನಂತರ ಸುದೀಪ್ ಹಾಗೂ ಕೃಷ್ಣ ಕಾಂಬಿನೇಷನ್ನ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಇವೆ. ಒಂದು ಹಂತದ ಚಿತ್ರೀಕರಣ ಮಾಡಿರುವ ‘ಪೈಲ್ವಾನ್’ ತಂಡ, ಸದ್ಯದಲ್ಲೇ ಮತ್ತೊಂದು ಹಂತದ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಲ್ಲದೆ ಈ ನಡುವೆ ‘ಪೈಲ್ವಾನ್’ ಚಿತ್ರೀಕರಣದ ಸಂತಸವನ್ನು ಹಂಚಿಕೊಂಡು ಸುದೀಪ್ ಮಾಡಿದ ಟ್ವೀಟ್ ಅವರ ಅಭಿಮಾನಿಗಳಿಗೆ ಉತ್ಸಾಹ ಹೆಚ್ಚಿಸುವ ಜತೆಗೆ ಚಿತ್ರದ ಬಗ್ಗೆ ಕುತೂಹಲ ಹಟ್ಟಿಸಿದೆ.
ಅಂಬಿ ಜತೆ 3 ದಿನ
ಅಂಬಿ ಜತೆ ಸುದೀಪ್ ಇನ್ನೂ ಮೂರು ದಿನದ ನಂಟು ಇದೆ. ಅಂದರೆ ಮೂರು ದಿನ ಅವರ ಚಿತ್ರೀಕರಣದ ಬಾಕಿ ಉಳಿದುಕೊಂಡಿದೆ. ರೆಬೆಲ್ ಸ್ಟಾರ್ ಅಂಬರೀಷ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ, ಗುರುದತ್ ಗಾಣಿಗ ನಿರ್ದೇಶನದ, ಜಾಕ್ ಮಂಜು ನಿರ್ಮಾಣದ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರಕ್ಕೆ ಎರಡು ಹಾಡುಗಳ ಚಿತ್ರೀಕರಣ ಬಾಕಿ ಉಳಿದುಕೊಂಡಿದೆ. ಹೀಗಾಗಿ ಅದರ ಚಿತ್ರೀಕರಣಕ್ಕೆ ಮೂರು ದಿನ ಬಾಕಿ ಇದೆ. ಜತೆಗೆ ಡಬ್ಬಿಂಗ್ ಮುಗಿಸಬೇಕಿದೆ. ಈ ಎಲ್ಲ ಮುಗಿಸಿಕೊಳ್ಳುವ ಹೊತ್ತಿಗೆ ‘ಕೋಟಿಗೊಬ್ಬ 3’ ಶೂಟಿಂಗ್ ಪ್ಲಾನ್, ಕಿಚ್ಚನ ಮುಂದೆ ಬಂದು ನಿಲ್ಲಲಿದೆ.
40 ದಿನ ದೇಶ ಬಿಡಲಿರುವ ಕಿಚ್ಚ
ಬರೋಬ್ಬರಿಂದ 40 ದಿನಗಳ ಕಾಲ ಇಲ್ಲೇ ಚಿತ್ರೀಕರಣಕ್ಕೆ ಪ್ಲಾನ್ ಮಾಡಿಕೊಂಡಿದ್ದಾರೆ. ೨೫ ಮಂದಿಯ ತಂಡ ಸೂರಪ್ಪ ಬಾಬು ಸಾರಥ್ಯದಲ್ಲಿ ಸರ್ಬಿಯಾ ದೇಶಕ್ಕೆ ಹೊರಡಲಿದೆ. ‘ನೋ ಮ್ಯಾನ್ಸ್ ಲ್ಯಾಂಡ್’ ಸಿನಿಮಾ ನೋಡಿದವರಿಗೆ ಸರ್ಬಿಯಾ ದೇಶದ ಬಗ್ಗೆ ಗೊತ್ತಿರುತ್ತದೆ. ಯುದ್ಧ, ವಲಸೆ, ಪ್ರವಾಸೋದ್ಯಮ ಈ ಮೂರರ ಒಟ್ಟು ಮಿಶ್ರಣದಂತೆ ಕಾಣುವ ಸರ್ಬಿಯಾ ದೇಶದಲ್ಲಿ ಕಿಚ್ಚ ಸುದೀಪ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ ನಿರ್ದೇಶಕ ಕಾರ್ತಿಕ್.
ಜೂನ್ 10 ರಂದು ಸರ್ಬಿಯಾ ದೇಶಕ್ಕೆ ಸುದೀಪ್ ಹೊರಡಲಿದ್ದಾರೆ. ಒಂದೇ ಶೆಡ್ಯೂಲ್ನಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡು ಬರಲಿದ್ದು, ಇದಕ್ಕಾಗಿ 40 ದಿನ ಕಾಲ ಚಿತ್ರೀಕರಣ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ತಿಳಿಸಿದ್ದಾರೆ.