
ಕೇರಳದ 70 ವರ್ಷ ವಯಸ್ಸಿನ ಪಾಸ್ಟ್ ಫುಡ್ ಮಾರಾಟಗಾರ ಯಾಹ್ಯ ಒಂದು ದಿನ ತನ್ನ ಅರ್ಧ ತಲೆಯನ್ನು ಬೋಳಿಸಿಕೊಂಡು ಈತನ ಪಾಸ್ಟ್ ಫುಡ್ ಹೋಟೆಲ್'ಗೆ ಹೋಗುವ ಗ್ರಾಹಕರಿಗೆ ಶಾಕ್ ನೀಡಿದ್ದಾನೆ. ಏಕೆ ಈ ರೀತಿ ಮಾಡಿಕೊಂಡೆ ಅಂತ ಕೇಳಿದರೆ ಇದಕ್ಕೆಲ್ಲ ಮೋದಿ ಕಾರಣ ಎಂದು ಹೇಳುತ್ತಾನೆ. ಮೋದಿಗೂ ಅರ್ಧ ತಲೆ ಬೋಳಿಸುವುದಕ್ಕೆ ಏನಪ್ಪ ಸಂಬಂಧ ಅಂಥ ಯೋಚಿಸಿದರೆ ಕಥೆನೆ ಬೇರೆಯಿದೆ.
ಕೊಲ್ಲಂ ಜಿಲ್ಲೆಯ ಕಡಕ್ಕಲ್ ಮುಕ್ಕುನಮ್ ಗ್ರಾಮದ ಯಾಹ್ಯ ಮಾಂಸಾಹಾರಿ ಫಾಸ್ಟ್ ಫುಡ್ ಮಾರಾಟಗಾರ. ತನ್ನ ಗ್ರಾಹಕರಿಗೆ ರುಚಿರುಚಿಯಾದ ಮಾಂಸ ಮಾಡಿ ಸ್ಥಳೀಯವಾಗಿ ಹೆಸರುವಾಸಿಯಾಗಿದ್ದಾನೆ. ಈತ ಹೆಂಗಸರು ಧರಿಸುವ ನೈಟಿಯನ್ನು ಧರಿಸಿ ಅಡುಗೆ ಮಾಡಿ ಬಡಿಸುತ್ತಾನೆ. ಈತನ ವಸ್ತ್ರ ಶೈಲಿಯು ಗ್ರಾಹಕರಿಗೆ ಇಷ್ಟವಾಗಿದೆ. ಸಂಜೆ 5 ಗಂಟೆಯಿಂದ ಮಧ್ಯರಾತ್ರಿಯವರೆಗೂ ತನ್ನ ಗ್ರಾಹಕರಿಗೆ ಆಹಾರ ತಯಾರಿಸಿ ಬಡಿಸುತ್ತಾನೆ.
ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿಯವರು ಕಪ್ಪು ಹಣ ತಡೆಗೆ ಹಳೆಯ 1000 ಹಾಗೂ 500 ರೂ. ನೋಟುಗಳನ್ನು ರದ್ದುಗೊಳಿಸಿದರು. ಇದರಿಂದ ಎಲ್ಲರಿಗೂ ಆದಂತೆ ಈತನಿಗೂ ತೊಂದರೆಯಾಯಿತು. ಅಲ್ಲದೆ ಆ ಸಂದರ್ಭದಲ್ಲಿ ಈತನ ಬಳಿ 23 ಸಾವಿರ ನಗದಿತ್ತು. ಎಲ್ಲ ನೋಟುಗಳು 500 ಹಾಗೂ 1000 ರೂ. ನೋಟುಗಳು. ಈ 23 ಸಾವಿರ ನಗದನ್ನು ವಿನಿಮಯ ಮಾಡಿಕೊಳ್ಳಲು ಬ್ಯಾಂಕುಗಳಿಗೆ ಅಲೆದರೂ ತನ್ನ ಬಳಿಯಿದ್ದ ನಗದನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.
ತನ್ನ ಅಂಗಡಿಗೆ ಬರುತ್ತಿದ್ದ ದಿನಸಿ ನಿಂತು ಹೋಯಿತು. ವ್ಯಾಪಾರದ ಜೊತೆ ಜೀವನ ಸಾಗಿಸುವುದು ಸಹ ಕಷ್ಟವಾಯಿತು. ತನ್ನ ಕಷ್ಟ ಕೋಟಲೆಗಳಿಗೆ ಮೋದಿಯೇ ಕಾರಣ ಎಂದು ಭಾವಿಸಿದ ಯಾಹ್ಯ ಕೋಪಗೊಂಡು ಮೊದಲು ತನ್ನ ಬಳಿಯಿದ್ದ 23 ಸಾವಿರ ನಗದನ್ನು ಸುಟ್ಟು ಹಾಕಿದ್ದಾನೆ. ನಂತರ ಕ್ಷೌರಿಕ ಅಂಗಡಿಗೆ ಹೋಗಿ ತನ್ನ ಅರ್ಧ ತಲೆಯನ್ನು ಬೋಳಿಸಿದ. ಮೋದಿ ಅಧಿಕಾರದಿಂದ ಕೆಳಗಿಳಿಯುವವರಿಗೂ ಅರ್ಧ ಕೂದಲನ್ನು ಬೆಳಸುವುದಿಲ್ಲವೆಂದು ಶಪಥ ಮಾಡಿದ್ದಾನೆ.
ಈ ಸುದ್ದಿಯನ್ನು ಕೇರಳ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಅಶ್ರಫ್ ಕಡಕ್ಕಲ್ ಯಾಹ್ಯನ ಅಂಗಡಿಗೆ ಭೇಟಿ ನೀಡಿದ್ದಾಗ ತನ್ನ ಅರ್ಧ ಕೂದಲಿನ ರಹಸ್ಯ ಬಾಯ್ಬಿಟ್ಟಿದ್ದಾನೆ. ಅದನ್ನವರು ತಮ್ಮ ಫೇಸ್'ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ. ಈ ಸುದ್ದಿ ವೈರಲ್ ಆಗಿ ಎಲ್ಲದೆ ಪ್ರಚಲಿತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.