
ಬೆಂಗಳೂರು(ಜು.17): ಅನೇಕ ವರ್ಷಗಳಿಂದ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ಹುದ್ದೆಗಳಲ್ಲಿ ಠಿಕಾಣಿ ಹೂಡಿದ್ದ ನೂರಾರು ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಸರ್ಕಾರ ಡಯಟ್ ಕಾಲೇಜುಗಳಿಗೆ ಪಾಠ ಮಾಡಲು ವಾಪಸ್ ಕಳಿಸಿದೆ.
ಹೌದು, ನೂರಾರು ಡಿಡಿಪಿಐ ಮತ್ತು ಬಿಇಓಗಳನ್ನು ವರ್ಗಾವಣೆ ಮಾಡಿರುವ ಸರ್ಕಾರ, ಕೆಲವರನ್ನು ತತ್ಸಮಾನ ವೃಂದಗಳಾದ ಡಯಟ್ ಕಾಲೇಜುಗಳ ಪ್ರಾಂಶುಪಾಲ ಹುದ್ದೆಗಳಿಗೆ ಮತ್ತು ಉಪನ್ಯಾಸಕ ಹುದ್ದೆಗಳಿಗೆ ವಾಪಸ್ ಕಳಿಸಿದೆ. ಅಲ್ಲದೆ, ಪ್ರಾಂಶುಪಾಲ ಮತ್ತು ಉಪನ್ಯಾಸಕ ಹುದ್ದೆ ಯಲ್ಲಿದ್ದ ಹಲವರನ್ನು ಡಿಡಿಪಿಐ, ಬಿಇಓಗಳ ಹುದ್ದೆಗಳಿಗೆ ನಿಯೋಜಿಸಿದೆ.
ಶನಿವಾರ ವರ್ಗಾವಣೆ ಆದೇಶ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು 15 ಡಿಡಿಪಿಐಗಳು ಮತ್ತು 141 ಬಿಇಓಗಳು ಸೇರಿದಂತೆ ತತ್ಸಮಾನ ವೃಂದದ ಒಟ್ಟು 183 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಆದೇಶದಲ್ಲಿ ಡಿಡಿಪಿಐ ಹುದ್ದೆಯಲ್ಲಿದ್ದ ಹತ್ತಾರು ಜನರನ್ನು ಡಯಟ್ ಕಾಲೇಜುಗಳ ಪ್ರಾಂಶುಪಾಲ ಹುದ್ದೆಗಳಿಗೆ, ಸುಮಾರು 75 ಕ್ಷೇತ್ರ ಶಿಕ್ಷಣಾ ಧಿಕಾರಿಗಳನ್ನು (ಬಿಇಓ) ಉಪನ್ಯಾಸಕ ಹುದ್ದೆಗಳಿಗೆ ಮರಳಿಸಿದೆ. ಇದವರ ಸ್ಥಾನಗಳಿಗೆ ಪ್ರಾಂಶುಪಾಲ, ಹಿರಿಯ ಉಪನ್ಯಾಸಕ ಹುದ್ದೆಗಳಲ್ಲಿದ್ದವರನು ವರ್ಗವಣೆ ಮೂಲಕ ನಿಯೋಜಿಸಿದೆ.
ಇದರೊಂದಿಗೆ ಹಲವು ವರ್ಷಗಳಿಂದ ಕೇವಲ ಆಡಳಿತಾತ್ಮಕ ಹುದ್ದೆಗಳಲ್ಲೇ ಠಿಕಾಣಿ ಹೂಡಿದ್ದ ಡಿಡಿಪಿಐ, ಬಿಇಓಗಳಿಗೆ ಚುರುಕು ಮುಟ್ಟಿಸಿದಂತಾಗಿದೆ. ತೀರ್ಥಹಳ್ಳಿ ಶಾಸಕ ಕಿಮ್ಮನೆ ರತ್ನಾಕರ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದಾಗಲೇ ಇಂತಹದ್ದೊಂದು ಪ್ರಸ್ತಾಪ ಸಿದ್ಧವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.