ಸಿದ್ದರಾಮಯ್ಯ ಆಪ್ತರು ಸೇರಿ ಮತ್ತೆ 10 ಐಎಎಸ್‌ ಅಧಿಕಾರಿಗಳ ಎತ್ತಂಗಡಿ

First Published Jun 27, 2018, 8:06 AM IST
Highlights

ಸಮಿಶ್ರ ಸರ್ಕಾರದ ಮಿತ್ರ ಪಕ್ಷಗಳ ಮಧ್ಯೆ ಮಾತಿನ ಕದನ ನಡೆದಿರುವ ಹೊತ್ತಿನಲ್ಲೇ 10 ಹಿರಿಯ ಐಎಎಸ್‌ ಅಧಿಕಾರಿಗಳ ಸ್ಥಾನ ಪಲ್ಲಟವಾಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕೆಲ ಅಧಿಕಾರಿಗಳನ್ನು ಮಂಗಳವಾರ ಸರ್ಕಾರವು ದಿಢೀರ್‌ ವರ್ಗಾವಣೆ ಮಾಡಿದೆ.

ಬೆಂಗಳೂರು :  ಸಮಿಶ್ರ ಸರ್ಕಾರದ ಮಿತ್ರ ಪಕ್ಷಗಳ ಮಧ್ಯೆ ಮಾತಿನ ಕದನ ನಡೆದಿರುವ ಹೊತ್ತಿನಲ್ಲೇ 10 ಹಿರಿಯ ಐಎಎಸ್‌ ಅಧಿಕಾರಿಗಳ ಸ್ಥಾನ ಪಲ್ಲಟವಾಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕೆಲ ಅಧಿಕಾರಿಗಳನ್ನು ಮಂಗಳವಾರ ಸರ್ಕಾರವು ದಿಢೀರ್‌ ವರ್ಗಾವಣೆ ಮಾಡಿದೆ.

ಜೊತೆಗೆ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಲಕ್ಷ್ಮೇನಾರಾಯಣ್‌ ಅವರನ್ನೂ ಎತ್ತಂಗಡಿ ಮಾಡಲಾಗಿದ್ದು, ಅವರಿಗೆ ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಸ್ಥಾನ ಕಲ್ಪಿಸಿದೆ. ಮುಖ್ಯಮಂತ್ರಿಗಳ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಡಾ.ಇ.ವಿ.ರಮಣ ರೆಡ್ಡಿ ನಿಯೋಜಿತರಾಗಿದ್ದಾರೆ.

ಬೆಂಗಳೂರು ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಅಧಿಕಾರಿ ಎನ್ನಲಾದ ದಯಾನಂದ್‌ ಅವರನ್ನು ವರ್ಗಾಯಿಸಿ ಅವರ ಸ್ಥಾನಕ್ಕೆ ಜೆಡಿಎಸ್‌ ನಾಯಕರ ಸ್ನೇಹ ಹೊಂದಿರುವ ವಿಜಯ್‌ ಶಂಕರ್‌ ನೇಮಕಗೊಂಡಿದ್ದಾರೆ. ಆದರೆ ದಯಾನಂದ್‌ ಅವರಿಗೆ ಸರ್ಕಾರವು ಯಾವುದೇ ಹುದ್ದೆ ತೋರಿಸದೆ ಅತಂತ್ರವಾಗಿಸಿದೆ.

ಅದೇ ರೀತಿ ಇತ್ತೀಚಿಗೆ ಸಿಬ್ಬಂದಿ ವರ್ಗಾವಣೆ ವಿಚಾರದಲ್ಲಿ ಮುಖ್ಯಮಂತ್ರಿಗಳ ಕೋಪಕ್ಕೆ ತುತ್ತಾಗಿದ್ದ ಅಬಕಾರಿ ಆಯುಕ್ತ ಮನೀಷ್‌ ಮೌದ್ಗಿಲ್‌ ಅವರು ಕೂಡಾ ಸ್ಥಾನಪಲ್ಲಟಗೊಂಡಿದ್ದು, ಅವರಿಗೆ ಸರ್ವೆ ಹಾಗೂ ಭೂ ದಾಖಲೆಗಳ ಆಯುಕ್ತ ಹುದ್ದೆ ನೀಡಲಾಗಿದೆ. ಬಿ.ಎಸ್‌.ಶೇಖರಪ್ಪ ಅವರಿಗೆ ಕಾಡಾ ನಿರ್ದೇಶಕ ಹುದ್ದೆ ಕಲ್ಪಿಸಲಾಗಿದೆ. ಕಳೆದ ಸರ್ಕಾರದ ಅವಧಿಯಲ್ಲಿ ತೀವ್ರ ವಿವಾದಕ್ಕೀಡಾಗಿದ್ದ ಅಧಿಕಾರಿ ಕಪಿಲ್‌ ಮೋಹನ್‌ ಅವರಿಗೆ ಮೈಸೂರು ಆಡಳಿತ ತರಬೇತಿ ಕೇಂದ್ರದ ಪ್ರಧಾನ ನಿರ್ದೇಶಕ ಸ್ಥಾನ ಕಲ್ಪಿಸಲಾಗಿದೆ. ವಸತಿ ಇಲಾಖೆ ಕಾರ್ಯದರ್ಶಿ ಹುದ್ದೆಗೆ ಟಿ.ಕೆ.ಅನಿಲ್‌ ಕುಮಾರ್‌, ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ ನಿತೇಶ್‌ ಪಾಟೀಲ್‌ ಹಾಗೂ ನಗರ ಮೂಲಭೂತ ಸೌಲಭ್ಯ ಮತ್ತು ಹಣಕಾಸು ನಿಗಮ (ಕೆಯುಐಡಿಎಫ್‌ಸಿ) ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ ನಳಿನಿ ಅತುಲ್‌ ನೇಮಕವಾಗಿದ್ದಾರೆ.

click me!