
ಬೆಂಗಳೂರು, [ಜ.04]: ರಾಜ್ಯದಲ್ಲಿ ಧೂಮಪಾನ ಸಂಪೂರ್ಣವಾಗಿ ನಿಷೇಧಿಸುವುದು ಕಷ್ಟದ ಕೆಲಸ. ಆದರೂ, ಆ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ತಿಳಿಸಿದರು.
ಮಲ್ಲೇಶ್ವರದ ಬಿಬಿಎಂಪಿ ಐಪಿಪಿ ಕೇಂದ್ರದಲ್ಲಿ ಶುಕ್ರವಾರ ಧೂಮಪಾನ ಮುಕ್ತ ಬೆಂಗಳೂರು ಅಭಿಯಾನದ ವರದಿ ಹಾಗೂ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ ಬಳಿಕ ಅವರು ಮಾತನಾಡಿದರು.
ಧೂಮಪಾನ ಹಾಗೂ ತಂಬಾಕು ಸೇವಿಸುವುದು ಅಪಾಯ ಎಂಬುದರ ಬಗ್ಗೆ ಎಲ್ಲರಿಗೂ ಅರಿವಿದ್ದರೂ ಕೂಡಾ ಅದನ್ನು ಸೇವಿಸುವುದು ಜಗತ್ತಿನ ವಿಸ್ಮಯವೇ ಸರಿ ಎಂದು ಕಳವಳ ವ್ಯಕ್ತಪಡಿಸಿದರು.
ಬೆಂಗಳೂರನ್ನು ಧೂಮಪಾನ ಮುಕ್ತ ನಗರವನ್ನಾಗಿ ಮಾಡಲು ಬಿಬಿಎಂಪಿ, ಪೊಲೀಸ್ ಹಾಗೂ ಕೆಲ ಎನ್ಜಿಓಗಳ ಸಹಯೋಗದಲ್ಲಿ ಕಳೆದ ವರ್ಷ ಅಭಿಯಾನ ಪ್ರಾರಂಭಿಸಿದ್ದು, ಆ ಬಗ್ಗೆ ಸಮೀಕ್ಷೆ ಕೂಡಾ ನಡೆಸಲಾಗುತ್ತಿದೆ.
ಅದರಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹಲವು ಅಭಿಯಾನ ನಡೆಸಲಾಗುತ್ತಿದೆ. ಕಳೆದ ಬಾರಿ ‘ಧೂಮಪಾನ ನಿಷೇಧಿಸಲಾಗಿದೆ’ ಎಂಬ ಫಲಕಗಳನ್ನು ಶೇ.10 ರಷ್ಟು ಕಡೆ ಅಳವಡಿಸಿದ್ದು, ಈ ಬಾರಿ ಶೇ.21ಕ್ಕೆ ಹೆಚ್ಚಳವಾಗಿದೆ ಎಂದು ತಿಳಿಸಿದರು.
ಇದೇ ಸುದ್ದಿಯನ್ನು ಇಂಗ್ಲೀಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಾಜ್ಯದಲ್ಲಿ ಶೇ.72 ರಷ್ಟು ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೇ ಹೆಚ್ಚು ಜನ ಬಲಿಯಾಗುತ್ತಿದ್ದಾರೆ. ಈ ಪೈಕಿ ಶಾಲಾ-ಕಾಲೇಜುಗಳ ಬಳಿ, ಚಿತ್ರಮಂದಿರ, ಆಸ್ಪತ್ರೆ, ಹೋಟೆಲ್, ಸಾರ್ವಜನಿಕ ಸ್ಥಳ, ಬಾರ್ಗಳ ಬಳಿ ಹೆಚ್ಚು ತಂಬಾಕು ಮಾರಾಟ ಮಾಡುವ ಅಂಗಡಿಗಳಿಗೆ ಕಡಿವಾಣ ಹಾಕಬೇಕಿದೆ.
ಬಿಬಿಎಂಪಿ ಹಾಗೂ ಪೊಲೀಸ್ ಅಧಿಕಾರಿಗಳು ಈಗಾಗಲೇ ಧೂಮಪಾನ ಮುಕ್ತ ನಗರವನ್ನಾಗಿ ಮಾಡಲು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.