
ಬೆಂಗಳೂರು(ಜು.15): ಡಿಸೆಂಬರ್'ನಲ್ಲಿ ಜಾತಿ ಜನಗಣತಿ ಬಿಡುಗಡೆ ಮಾಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಜಾತಿ ವರದಿ ಈಗಾಗಲೇ ತಯಾರಾಗಿದ್ದು , ಡಿಸೆಂಬರ್'ನಲ್ಲಿ ಬಿಡುಗಡೆಗೆ ನಿರ್ಧರಿಸಿತ್ತು ಆದರೆ ಅಹಿಂದ ಮತಗಳು ಒಡೆಯುವ ಭಯ ಹಾಗೂ ಹೈಕಮಾಂಡ್ ಆದೇಶದ ಹಿನ್ನಲೆಯಲ್ಲಿ ವರದಿಯನ್ನು ಬಿಡುಗಡೆ ಮಾಡದಿರಲು ಸರ್ಕಾರ ತೀರ್ಮಾನಿಸಿದೆ.
ಜಾತಿಗಣತಿ ಅಂಕಿಅಂಶಗಳು ಬಿಡುಗಡೆಯಾದರೆ ಕಾಂಗ್ರೆಸ್'ಗೆ ಲಾಭ ಆಗಲ್ಲ ಎಂಬ ಲೆಕ್ಕಾಚಾರ ಹಾಗೂ ಚುನಾವಣೆವರೆಗೂ ವರದಿ ಬಿಡುಗಡೆ ಮಾಡಕೂಡದು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೂಚನೆ ಮೇರೆಗೆ ಜಾತಿಗಣತಿ ವರದಿ ಬಿಡುಗಡೆಯ ಭಾಗ್ಯಕ್ಕೆ ಬ್ರೇಕ್ ಬಿದ್ದಿದೆ. ಈ ಬಗ್ಗೆ ತುಟಿ ಬಿಚ್ಚದಂತೆ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಬಿಜೆಪಿಗೆ ಲಾಭವಾಗುವ ಭಯ
ಒಂದು ವೇಳೆ ಡಿಸೆಂಬರ್'ನಲ್ಲಿ ಬಿಡುಗಡೆಯಾದರೆ ಅಹಿಂದ ಮತಗಳು ಒಡೆದು ಬಿಜೆಪಿಗೆ ಲಾಭವಾಗುವ ಸಾಧ್ಯತೆಯಿದೆ. ಇತ್ತೀಚಿಗೆ ಕೆಲವು ವಾರಗಳ ಹಿಂದೆ ವರದಿ ಸೋರಿಕೆಯಾಗಿ ಪರಿಶಿಷ್ಟ ಜಾತಿ ಹಾಗೂ ಮುಸ್ಲಿಂ ಸಮುದಾಯಗಳ ಜನಸಂಖ್ಯೆ ಹೆಚ್ಚಿರುವುದಾಗಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಆದರೆ ಹಿಂದಿನಿಂದ ನಡೆದುಕೊಂಡು ಬಂದ ರಾಜಕೀಯ ಲೆಕ್ಕಾಚಾರಗಳ ಪ್ರಕಾರ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳ ಜನಸಂಖ್ಯೆ ಹೆಚ್ಚಿನದಾಗಿದೆ. ಅಲ್ಲದೆ ಈ ಹಿನ್ನಲೆಯಲ್ಲಿ ಹಿಂದುಳಿದ ಆಯೋಗದ ಅಧ್ಯಕ್ಷರಾದ ಕಾಂತ್'ರಾಜ್ ಅವರ ಅವಧಿಯನ್ನು ವಿಸ್ತರಿಸಲಾಗಿದೆ.
ಖರ್ಗೆ ಮಾತಿಗೆ ಮನ್ನಣೆ
ಮುಸ್ಲಿಂ ಸಮುದಾಯ 2ನೇ ಹೆಚ್ಚಿನ ಸಮುದಾಯ ಎಂದು ಸೋರಿಕೆಯಾದ ಹಿನ್ನಲೆಯಲ್ಲಿ ಒಂದು ವೇಳೆ ನಿಗದಿದ ಅವಧಿಗೆ ಬಿಡುಗಡೆ ಮಾಡಿದರೆ ಬಿಜೆಪಿ ಹಾಗೂ ಆರ್'ಎಸ್'ಎಸ್, ಬಿಜೆಪಿ ಇದನ್ನೇ ರಾಜಕೀಯ ಲಾಭವಾಗಿ ಬಳಸಿಕೊಂಡು ಅಹಿಂದ ಮತಗಳನ್ನು ಸೆಳೆಯುವ ಸಾಧ್ಯತೆಯಿದೆ. ಇದನ್ನು ಖುದ್ದು ಲೋಕಸಭೆಯ ವಿರೋಧ ಪಕ್ಷದ ನಾಯಕ ಖರ್ಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಮನವರಿಕೆ ಮಾಡಿದ ಕಾರಣ ಜಾತಿಗಣತಿ ವರದಿ ಚುನಾವಣೆವರೆಗೂ ಮುಂದೂಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.