ರಾಜ್ಯದ 45 ತಾಲೂಕು ನೆರೆ ಪೀಡಿತ : ಯಾವ ಜಿಲ್ಲೆಗಳಲ್ಲಿ ಅತಿವೃಷ್ಠಿ

By Web DeskFirst Published Oct 1, 2018, 7:47 AM IST
Highlights

ಕಳೆದ ಎರಡು ತಿಂಗಳಿಂದ ಈಚೆಗೆ ಎಂಟು ಜಿಲ್ಲೆಗಳಲ್ಲಿ ಭಾರಿ ಮಳೆ ಉಂಟಾಗಿದ್ದು, ಪ್ರವಾಹ, ಭೂಕುಸಿತದಿಂದಾಗಿ ಅಪಾರ ಬೆಳೆ, ಆಸ್ತಿ ಹಾಗೂ ಜೀವ ಹಾನಿ ಉಂಟಾಗಿದೆ. ಈ ನಿಟ್ಟಿನಲ್ಲಿ 45 ತಾಲೂಕುಗಳನ್ನು ನೆರೆ ಪೀಡಿತ ಎಂದು ಘೋಷಿಸಲಾಗಿದೆ. 

ಬೆಂಗಳೂರು: ರಾಜ್ಯದಲ್ಲಿ ಭಾರಿ ಮಳೆಯಿಂದ ಅಪಾರ ಪ್ರಮಾಣದ ಹಾನಿಗೀಡಾಗಿರುವ ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳ 45 ತಾಲೂಕುಗಳನ್ನು ರಾಜ್ಯ ಸರಕಾರವು ‘ಪ್ರವಾಹ ಪೀಡಿತ ತಾಲೂಕು’ ಎಂದು ಘೋಷಿಸಿದೆ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.

ಕಳೆದ ಎರಡು ತಿಂಗಳಿಂದ ಈಚೆಗೆ ಎಂಟು ಜಿಲ್ಲೆಗಳಲ್ಲಿ ಭಾರಿ ಮಳೆ ಉಂಟಾಗಿದ್ದು, ಪ್ರವಾಹ, ಭೂಕುಸಿತದಿಂದಾಗಿ ಅಪಾರ ಬೆಳೆ, ಆಸ್ತಿ ಹಾಗೂ ಜೀವ ಹಾನಿ ಉಂಟಾಗಿದೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಎನ್‌ಡಿಆರ್‌ಎಫ್ ಅಡಿ ಪರಿಹಾರ ಕೋರಿ ಮನವಿ ಸಲ್ಲಿಸಲಾಗಿತ್ತು. ಮಳೆ ಹಾನಿಯಿಂದ ಉಂಟಾದ ನಷ್ಟ ಆಧರಿಸಿ, ಪ್ರವಾಹಪೀಡಿತ ತಾಲೂಕುಗಳು ಎಂದು ಘೋಷಿಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ಭಾನುವಾರ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.  

ಸಾರ್ವಜನಿಕರಿಗೆ ಹಲವು ಅನುಕೂಲ: ರಾಜ್ಯ ಸರಕಾರವು ಪ್ರವಾಹ ಪೀಡಿತ ಪ್ರದೇಶ ಎಂದು ಘೋಷಿಸಿರುವ 45ತಾಲೂಕಿನ ಸಂತ್ರಸ್ತರು  ರಾಷ್ಟ್ರೀಕೃತ ಹಾಗೂ ಶೆಡ್ಯೂಲ್ಡ್ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲಗಳ ಮರುಪಾವತಿಗೆ ಹೆಚ್ಚಿನ ಕಾಲಾವಕಾ ಶ ಸಿಗಲಿದೆ. ಪ್ರವಾಹ, ಅನಾವೃಷ್ಟಿ, ಅಗ್ನಿ ಅವಘಡ ಸೇರಿದಂತೆ ಇತ್ಯಾದಿ ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ಸಾಲ ಮರುಪಾವತಿಗೆ ಹೆಚ್ಚಿನ ಕಾಲಾವಕಾಶ ನೀಡಲು ಆರ್‌ಬಿಐ ನಿಯಮದಲ್ಲಿ ಅವಕಾಶ ಸಿಗಲಿದೆ. 

ಜತೆಗೆ ಇಂತಹ ಸಂಧರ್ಭದಲ್ಲಿ ಸಂತ್ರಸ್ತರ ಅಲ್ಪಾವಧಿ ಬೆಳೆ ಸಾಲವು ದೀರ್ಘಾವಧಿ ಬೆಳೆ ಸಾಲವಾಗಿ ಮಾರ್ಪಡುತ್ತದೆ. ಅಲ್ಲದೆ, ಹೊಸ ಸಾಲವನ್ನು ತೆಗೆದುಕೊಳ್ಳಲು ಕೂಡ ಅವಕಾಶ ದೊರೆಯುತ್ತದೆ ಎಂದು ಸಚಿವರು ತಿಳಿಸಿದರು. ಬೆಂಗಳೂರಿನಲ್ಲಿ ಇತ್ತೀಚೆಗೆ ಈ ಬಗ್ಗೆ ರಾಜ್ಯಮಟ್ಟದ  ಬ್ಯಾಂಕರ್‌ಗಳ ಸಭೆ ನಡೆಸಲಾಗಿತ್ತು. ಜತೆಗೆ ಕೊಡಗಿನಲ್ಲಿ ಜಿಲ್ಲಾ ಮಟ್ಟದ ಬ್ಯಾಂಕರ್‌ಗಳ ಸಭೆ ಕೂಡ ನಡೆಸಲಾಗಿದೆ. ಎರಡೂ ಸಭೆಗಳಲ್ಲಿ ಪ್ರವಾಹಪೀಡಿತ ತಾಲೂಕುಗಳ ಸಂತ್ರಸ್ತರಿಗೆ ಬ್ಯಾಂಕ್ ನಿಯಮಾವಳಿಗಳ ಪ್ರಕಾರ ನೆರವು ನೀಡಲು ತೀರ್ಮಾನಿಸಲಾಗಿದೆ.

  • ಪ್ರವಾಹ ಪೀಡಿತ ತಾಲೂಕುಗಳು: ಕೊಡಗು ಜಿಲ್ಲೆ: ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, 
  • ದಕ್ಷಿಣ ಕನ್ನಡ ಜಿಲ್ಲೆ: ಮಂಗಳೂರು ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ, 
  • ಶಿವಮೊಗ್ಗ ಜಿಲ್ಲೆ: ಭದ್ರಾವತಿ, ಶಿಕಾರಿಪುರ, ಸಾಗರ, ಸೊರಬ, ತೀರ್ಥಹಳ್ಳಿ, ಹೊಸನಗರ, ಶಿವಮೊಗ್ಗ, 
  • ಉಡುಪಿ ಜಿಲ್ಲೆ: ಉಡುಪಿ, ಕುಂದಾಪುರ, ಕಾರ್ಕಳ, ಉತ್ತರ ಕನ್ನಡ ಜಿಲ್ಲೆ: ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಸಿದ್ದಾಪುರ, ಶಿರಸಿ, ಮುಂಡಗೋಡು, ಯಲ್ಲಾಪುರ, ಜೋಯಿಡಾ, ಹಳಿಯಾಳ, 
  • ಹಾಸನ ಜಿಲ್ಲೆ: ಸಕಲೇಶಪುರ, ಅರಕಲಗೂಡು, ಹೊಳೆನರಸೀಪುರ, ಆಲೂರು, 
  • ಚಿಕ್ಕಮಗಳೂರು ಜಿಲ್ಲೆ: ಚಿಕ್ಕಮಗಳೂರು, ನರಸಿಂಹರಾಜಪುರ, ಮೂಡಿಗೆರೆ, ಶೃಂಗೇರಿ, ಕೊಪ್ಪ,
  • ಮೈಸೂರು ಜಿಲ್ಲೆ: ಹೆಗ್ಗಡದೇವನ ಕೋಟೆ, ಹುಣಸೂರು, ಕೃಷ್ಣರಾಜ ನಗರ, ಮೈಸೂರು, ನಂಜನಗೂಡು, ಪಿರಿಯಾಪಟ್ಟಣ, ಟಿ.ನರಸೀಪುರ
click me!