ಬೆಂಗಳೂರು(ಅ.04): ಅವರು ಜಲ ತಜ್ಞರೆಂದೇ ಖ್ಯಾತಿ ಪಡೆದವರು. ಕಾವೇರಿಗಾಗಿ ಕರುನಾಡ ಪರವಾಗಿ 3 ದಶಕ ವಾದಿಸಿದ್ದರು. ರಾಷ್ಟ್ರ ಕಂಡ ಅತ್ಯುತ್ತಮ ವಕೀಲರಲ್ಲಿ ನಾರಿಮನ್ ಸಹ ಒಬ್ಬರಾಗಿದ್ದಾರೆ. ಆದರೆ ಕಾವೇರಿ ವಿಚಾರದಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದ ನೋಡಿರುವ ಅವರು, ಇನ್ಮುಂದೆ ಕಾವೇರಿ ಪರ ವಾದ ಮಾಡುವುದಿಲ್ಲ ಎಂದಿದ್ದಾರೆ.
ಬದಲಿ ವಕೀಲರನ್ನು ನೋಡಿಕೊಳ್ಳುವಂತೆ ಸೂಚನೆ
ಫಾಲಿ ಎಸ್ ನಾರಿಮನ್ ಕಳೆದ 3 ದಶಕಗಳಿಂದ ಕಾವೇರಿಗಾಗಿ ರಾಜ್ಯದ ಪರ ವಾದ ಮಂಡಿಸುತ್ತಿದ್ದಾರೆ. ಆದರೆ ನಿನ್ನೆ ವಿಧಾನಸಭೆಯ ನಿರ್ಣಯ ಕೈಗೊಳ್ಳುತ್ತಿದ್ದಂತೆ ಇವರು ವಾದದಿಂದ ಹಿಂದೆ ಸರಿದ್ದಾರೆ. ಇದಕ್ಕೆ ಕಾರಣ ನಿನ್ನೆಯ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ವಿಪಕ್ಷಗಳು ಆಡಿದ ಮಾತುಗಳು.
ವಿಪಕ್ಷ ನಾಯಕರ ಮಾತಿನಿಂದಾಗಿ ಕಳೆದ 3 ದಶಕಗಳಿಂದ ಕಾವೇರಿಗಾಗಿ ರಾಜ್ಯ ಪರವಾದಿಸುತ್ತಿದ್ದ ನಾರಿಮನ್ ಅಕ್ಷರಶಃ ನೊಂದು ಹೋಗಿದ್ದಾರೆ. ಸರ್ಕಾರದ ಪರವಾಗಿ ನಾರಿಮನ್ ಮನೆಗೆ ತೆರಳಿದ್ದ ವ್ಯಕ್ತಿಯೊಬ್ಬರಿಗೆ ಕಟು ಶಬ್ದಗಳಿಂದ ತಿಳಿಸಿರುವ ನಾರಿಮನ್, ಕಲಾಪದಲ್ಲಿ ಆಡಿದ ಮಾತುಗಳಿಂದ ಬೇಸರವಾಗಿದೆ. ಇನ್ನು ನಾನು ಕರ್ನಾಟಕದ ಪರ ವಾದಿಸುವುದಿಲ್ಲ. ಇನ್ನು ಮುಂದೆ ನನ್ನ ಮನೆ ಗೇಟ್'ಗೆ ಬರುವುದು ಬೇಡ. ನನ್ನ ಮನೆಗೂ ಬರುವುದು ಬೇಡ' ಎಂದಿದ್ದಾರಂತೆ.
ಸುಪ್ರೀಂ ಕೋರ್ಟ್ ಆದೇಶ ಪಾಲಿಸದೆ ನ್ಯಾಯಾಲಯಕ್ಕೆ ಒಬ್ಬ ಹಿರಿಯ ವಕೀಲನಾಗಿ ಎದುರು ಹೋಗಲು ಸಾಧ್ಯವಿದೆಯೇ ಎಂದು ನಾರಿಮನ್ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೂ ಇವರ ರಾಜಕೀಯ ಕಾರಣಗಳಿಗಾಗಿ ನಾನು ಎಷ್ಟೋ ಬಾರಿ ತಪ್ಪು ಹೊರಿಸಿಕೊಂಡಿದ್ದೇನೆ ಎಂಬುದು ಇವರಿಗೆಲ್ಲ ನೆನಪಿಲ್ಲ. ಇನ್ಮುಂದೆ ಬೇರೆ ನ್ಯಾಯವಾದಿಗಳನ್ನು ನೋಡಿಕೊಳ್ಳುವಂತೆ ಹೇಳಿದ್ದಾರೆ.
ಮುಂದೆ ಕಾವೇರಿ ಪರ ಧ್ವನಿ ಎತ್ತುವವರು ಯಾರು..?
ಸದ್ಯ ನಮ್ಮ ಕರುನಾಡ ಜನತೆಯ ಮುಂದೆ ಇರುವ ದೊಡ್ಡ ಪ್ರಶ್ನೆ ಎಂದರೆ ಮುಂದೆ ಕಾವೇರಿ ಪರ ವಾದ ಮಾಡುವ ವಕೀಲರು ಯಾರು ಎಂಬುದು. ಆದರೆ ಇಂದು ನಡೆಯುವ ವಿಚಾರಣೆಗೆ ಕರ್ನಾಟಕ ಸರ್ಕಾರ ಹಿರಿಯ ವಕೀಲ ಕಪಿಲ್ ಸಿಬಲ್'ರನ್ನು ಕರೆದುಕೊಂಡು ಮಾತುಕತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಆದರೆ ಮತ್ತೊಂದು ಮೂಲಗಳ ಪ್ರಕಾರ ಕರ್ನಾಟಕದ ಕಾನೂನು ತಂಡದಲ್ಲಿದ್ದ ಮೂವರು ಹಿರಿಯ ವಕೀಲರಲ್ಲಿ ಒಬ್ಬರಾದ ಅನಿಲ್ ಬಿ ದಿವಾನ್ ಕಾವೇರಿ ಪರ ನಿಲ್ಲುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಯಾರೇ ವಾದಿಸಿದರೂ, ಕಾವೇರಿಗೆ ನ್ಯಾಯ ಸಿಗಲಿ ಎನ್ನುವುದು ಕರ್ನಾಟಕ ಜನರ ಆಗ್ರಹ