
ಕೋಲ್ಕತ್ತಾ(ಜು.4): ಹೊಟ್ಟೆ ಕಿಚ್ಚು ಎಂಬುದು ಅದೆಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಬಲ್ಲದು. ಮನೆಯಲ್ಲಿ ಎಲ್ಲರೂ ಗಂಡನ ತಮ್ಮನನ್ನು ಪ್ರೀತಿಸುತ್ತಾರೆ ಎಂಬ ಕಾರಣಕ್ಕೆ ಅತ್ತಿಗೆಯೋರ್ವಳು ತನ್ನ ಮೈದುನನ್ನೇ ಕೊಂದ ಘಟನೆ ಕೋಲ್ಕತ್ತಾದ ಪಹಾರ್ ಪುರ್ ರಸ್ತೆಯಲ್ಲಿ ನಡೆದಿದೆ.
ಮೂರನೇ ತರಗತಿ ಓದುತ್ತಿದ್ದ ರಾಜು ದಾಸ್ ಎಂಬ ಬಾಲಕ, ಮನೆಯಲ್ಲಿ ನೀರು ತುಂಬಿದ್ದ ಡ್ರಮ್ ನಲ್ಲಿ ಮುಳುಗಿ ಸಾವನ್ನಪ್ಪಿದ್ದ. ಪೊಲೀಸರು ತನಿಖೆ ನಡೆಸಿ ರಾಜುವಿನದ್ದು ಆಕಸ್ಮಿಕ ಸಾವು ಎಂದು ತಿಳಿಸಿದ್ದರು. ಆದರೆ ಬಾಲಕ ರಾಜುನ ಅಣ್ಣ ಸುಬ್ರತಾ ದಾಸ್ ಈ ಕುರಿತು ಮೊದಲಿನಿಂದಲೂ ಅನುಮಾನ ವ್ಯಕ್ತಪಡಿಸುತ್ತಲೇ ಇದ್ದ.
ರಾಜು ಇಷ್ಟು ಸಣ್ಣ ಡ್ರಮ್ ನಲ್ಲಿ ಮುಳುಗಿ ಸಾಯಲು ಸಾಧ್ಯವೇ ಇಲ್ಲ ಎಂಬುದು ಅಣ್ಣ ಸುಬ್ರತಾ ದಾಸ್ ನ ವಾದವಾಗಿತ್ತು. ಅದರಂತೆ ತನ್ನ ಪತ್ನಿ ಪ್ರಿಯಾಂಕಾಳನ್ನು ಪ್ರಶ್ನಿಸಿದಾಗ, ರಾಜುವನ್ನು ತಾನೇ ಕೊಂದಿರುವುದಾಗಿ ಪ್ರಿಯಾಂಕಾ ಬಾಯ್ಬಿಟ್ಟಿದ್ದಾಳೆ.
ಮನೆಯಲ್ಲಿ ಎಲ್ಲರೂ ತನಗಿಂತ ಹೆಚ್ಚಾಗಿ ರಾಜುವನ್ನು ಪ್ರೀತಿಸುತ್ತಿದ್ದೇ ಆತನ ಕೊಲೆಗೆ ಕಾರಣ ಎಂದು ಪ್ರಿಯಾಂಕಾ ತಿಳಿಸಿದ್ದಾಳೆ. ರಾಜು ಡ್ರಮ್ ಮೇಲೆ ಕುಳಿತು ಆಟವಾಡುತ್ತಿದ್ದಾಗ ಆತನನ್ನು ಒಳಗೆ ತಳ್ಳಿ ಮೇಲಿನಿಂದ ಮುಚ್ಚಳ ಮುಚ್ಚಿದ್ದಾಗಿ ಆಕೆ ತಿಳಿಸಿದ್ದಾಳೆ. ನಾಳೆ ರಾಜು ದೊಡ್ಡವನಾದ ಮೇಲೆ ತನ್ನ ಗಂಡನನ್ನು ಮೂಲೆಗುಂಪು ಮಾಡಿ ಬಿಡುತ್ತಾನೆ ಎಂಬ ಭಯದಿಂದ ಆತನನ್ನು ಕೊಲೆ ಮಾಡಿದ್ದಾಗಿ ಪ್ರಿಯಾಂಕಾ ಹೇಳಿದ್ದಾಳೆ. ಇನ್ನು ಪ್ರಿಯಾಂಕಾ ಸತ್ಯ ಬಾಯ್ಬಿಡುತ್ತಿದ್ದಂತೇ ಆಕೆಯನ್ನು ಠಾಣೆಗೆ ಎಳೆದೊಯ್ದ ಪತಿ ಸುಬ್ರತಾ, ತಮ್ಮನ ಕೊಲೆ ಮಾಡಿದ ಆರೋಪದ ಮೇಲೆ ತಾನೇ ಸ್ವತಃ ದೂರು ನೀಡಿ ಪತ್ನಿಯನ್ನು ಅರೆಸ್ಟ್ ಮಾಡಿಸಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.