ಮುಗ್ಧ ಬಾಲಕನನ್ನು ಬಲಿ ಪಡೆದ ಹೊಟ್ಟೆ ಕಿಚ್ಚು
ಮೈದುನನ್ನೇ ಕೊಲೆ ಮಾಡಿದ ಪಾಪಿ ಅತ್ತಿಗೆ
ಡ್ರಮ್ನಲ್ಲಿ ಮುಳುಗಿಸಿ ಕೊಲೆ ಮಾಡಿದ ಅತ್ತಿಗೆ
ಕೊಲೆ ರಹಸ್ಯ ಬಯಲು ಮಾಡಿದ್ಯಾರು ಗೊತ್ತಾ?
ಕೋಲ್ಕತ್ತಾ(ಜು.4): ಹೊಟ್ಟೆ ಕಿಚ್ಚು ಎಂಬುದು ಅದೆಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಬಲ್ಲದು. ಮನೆಯಲ್ಲಿ ಎಲ್ಲರೂ ಗಂಡನ ತಮ್ಮನನ್ನು ಪ್ರೀತಿಸುತ್ತಾರೆ ಎಂಬ ಕಾರಣಕ್ಕೆ ಅತ್ತಿಗೆಯೋರ್ವಳು ತನ್ನ ಮೈದುನನ್ನೇ ಕೊಂದ ಘಟನೆ ಕೋಲ್ಕತ್ತಾದ ಪಹಾರ್ ಪುರ್ ರಸ್ತೆಯಲ್ಲಿ ನಡೆದಿದೆ.
ಮೂರನೇ ತರಗತಿ ಓದುತ್ತಿದ್ದ ರಾಜು ದಾಸ್ ಎಂಬ ಬಾಲಕ, ಮನೆಯಲ್ಲಿ ನೀರು ತುಂಬಿದ್ದ ಡ್ರಮ್ ನಲ್ಲಿ ಮುಳುಗಿ ಸಾವನ್ನಪ್ಪಿದ್ದ. ಪೊಲೀಸರು ತನಿಖೆ ನಡೆಸಿ ರಾಜುವಿನದ್ದು ಆಕಸ್ಮಿಕ ಸಾವು ಎಂದು ತಿಳಿಸಿದ್ದರು. ಆದರೆ ಬಾಲಕ ರಾಜುನ ಅಣ್ಣ ಸುಬ್ರತಾ ದಾಸ್ ಈ ಕುರಿತು ಮೊದಲಿನಿಂದಲೂ ಅನುಮಾನ ವ್ಯಕ್ತಪಡಿಸುತ್ತಲೇ ಇದ್ದ.
ರಾಜು ಇಷ್ಟು ಸಣ್ಣ ಡ್ರಮ್ ನಲ್ಲಿ ಮುಳುಗಿ ಸಾಯಲು ಸಾಧ್ಯವೇ ಇಲ್ಲ ಎಂಬುದು ಅಣ್ಣ ಸುಬ್ರತಾ ದಾಸ್ ನ ವಾದವಾಗಿತ್ತು. ಅದರಂತೆ ತನ್ನ ಪತ್ನಿ ಪ್ರಿಯಾಂಕಾಳನ್ನು ಪ್ರಶ್ನಿಸಿದಾಗ, ರಾಜುವನ್ನು ತಾನೇ ಕೊಂದಿರುವುದಾಗಿ ಪ್ರಿಯಾಂಕಾ ಬಾಯ್ಬಿಟ್ಟಿದ್ದಾಳೆ.
ಮನೆಯಲ್ಲಿ ಎಲ್ಲರೂ ತನಗಿಂತ ಹೆಚ್ಚಾಗಿ ರಾಜುವನ್ನು ಪ್ರೀತಿಸುತ್ತಿದ್ದೇ ಆತನ ಕೊಲೆಗೆ ಕಾರಣ ಎಂದು ಪ್ರಿಯಾಂಕಾ ತಿಳಿಸಿದ್ದಾಳೆ. ರಾಜು ಡ್ರಮ್ ಮೇಲೆ ಕುಳಿತು ಆಟವಾಡುತ್ತಿದ್ದಾಗ ಆತನನ್ನು ಒಳಗೆ ತಳ್ಳಿ ಮೇಲಿನಿಂದ ಮುಚ್ಚಳ ಮುಚ್ಚಿದ್ದಾಗಿ ಆಕೆ ತಿಳಿಸಿದ್ದಾಳೆ. ನಾಳೆ ರಾಜು ದೊಡ್ಡವನಾದ ಮೇಲೆ ತನ್ನ ಗಂಡನನ್ನು ಮೂಲೆಗುಂಪು ಮಾಡಿ ಬಿಡುತ್ತಾನೆ ಎಂಬ ಭಯದಿಂದ ಆತನನ್ನು ಕೊಲೆ ಮಾಡಿದ್ದಾಗಿ ಪ್ರಿಯಾಂಕಾ ಹೇಳಿದ್ದಾಳೆ. ಇನ್ನು ಪ್ರಿಯಾಂಕಾ ಸತ್ಯ ಬಾಯ್ಬಿಡುತ್ತಿದ್ದಂತೇ ಆಕೆಯನ್ನು ಠಾಣೆಗೆ ಎಳೆದೊಯ್ದ ಪತಿ ಸುಬ್ರತಾ, ತಮ್ಮನ ಕೊಲೆ ಮಾಡಿದ ಆರೋಪದ ಮೇಲೆ ತಾನೇ ಸ್ವತಃ ದೂರು ನೀಡಿ ಪತ್ನಿಯನ್ನು ಅರೆಸ್ಟ್ ಮಾಡಿಸಿದ್ದಾನೆ.