ರಾಜ್ಯ ಸರ್ಕಾರದ ಬಗ್ಗೆ JDS ನಾಯಕ ದೇವೇಗೌಡರ ಶ್ಲಾಘನೆ

By Web DeskFirst Published Aug 12, 2019, 7:26 AM IST
Highlights

ರಾಜ್ಯ ಸರ್ಕಾರ ರಚನೆಯಾಗಿ ತಿಂಗಳುಗಳುಗಳಾಗುತ್ತಿದ್ದರೂ ಸಂಪುಟ ವಿಸ್ತರಣೆಯಾಗಿಲ್ಲ. ಇಂತಹ ಸಂದರ್ಭದಲ್ಲಿಯೇ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದಕ್ಕೆ ಜೆಡಿಎಸ್ ನಾಯಕ ಎಚ್.ಡಿ ದೇವೇಗೌಡ ಸರ್ಕಾರವನ್ನು ಶ್ಲಾಘಿಸಿದಿದ್ದಾರೆ.

ಬೆಂಗಳೂರು [ಆ.12] :  ರಾಜ್ಯದಲ್ಲಿ ಎಂದೂ ಕಂಡರಿಯದ ನೆರೆ ಆವರಿಸಿರುವ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸ್ಪಂದಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕಾರ್ಯವೈಖರಿ ಬಗ್ಗೆ ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಭಾನುವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಕಳೆದ ಐದಾರು ದಿನಗಳಿಂದ ನೆರೆಪೀಡಿತ ಪ್ರದೇಶದಲ್ಲಿ ತಂಗಿದ್ದು, ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಂತ್ರಿಮಂಡಲ ರಚನೆಯಾಗಿಲ್ಲ ಎಂಬ ಕಾರಣವನ್ನು ನೀಡಿ ರಾಜಕೀಯ ಮಾಡಲು ಮುಂದಾಗಬಾರದು ಎಂದು ಹೇಳಿದರು.

ನೆರೆಯಿಂದಾಗಿ ಸಹಸ್ರಾರು ಕೋಟಿ ರು. ಬೆಲೆಬಾಳುವ ಆಸ್ತಿಪಾಸ್ತಿ ನಾಶವಾಗಿದೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಾಗಲಕೋಟೆ ಸೇರಿದಂತೆ ನೆರೆ ಪೀಡಿತ ಪ್ರದಶಗಳಿಗೆ ಭೇಟಿ ನೀಡಿ ಸಂಕಷ್ಟಕ್ಕೆ ಸಿಲುಕಿರುವವರ ಸಮಸ್ಯೆಗಳನ್ನು ಆಲಿಸಿದ್ದಾರೆ. ಮೂರು ಪಕ್ಷಗಳ ನಾಯಕರು ಒಟ್ಟಾಗಿ ಶ್ರಮಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದು ಅವರು ವಿವರಿಸಿದರು.

5 ಸಾವಿರ ಕೋಟಿ ರು.ಬಿಡುಗಡೆಗೆ ಆಗ್ರಹ:

ರಾಜ್ಯದಲ್ಲಿನ ನೆರೆಯಿಂದ ಕೃಷ್ಣಾ ಅಚ್ಚುಕಟ್ಟು ಪ್ರದೇಶ ಸಂಪೂರ್ಣ ಮುಳುಗಡೆಯಾಗಿದೆ. ಅಲ್ಲದೆ, ದಕ್ಷಿಣ ಕನ್ನಡ ಹಾಗೂ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲದೆ, ಹಲವು ಜನ ಮನೆ ಕಳೆದುಕೊಂಡಿದ್ದಾರೆ. ಈ ಭಾಗಗಳಲ್ಲಿ ಪರಿಹಾರ ಕಾರ್ಯಗಳನ್ನು ಹಮ್ಮಿಕೊಳ್ಳುವುದಕ್ಕಾಗಿ ಕೇಂದ್ರ ಸರ್ಕಾರ ಮಧ್ಯಂತರವಾಗಿ ಐದು ಸಾವಿರ ಕೋಟಿ ರು. ಬಿಡುಗಡೆ ಮಾಡಬೇಕು ಎಂದು ಇದೇ ವೇಳೆ ದೇವೇಗೌಡ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಕೇಂದ್ರ ಸಚಿವರು ನೆರೆ ಹಾವಳಿಗೆ ಒಳಗಾಗಿರುವ ಪ್ರದೇಶವನ್ನು ವೈಮಾನಿಕ ಸಮೀಕ್ಷೆ ನಡೆಸಬೇಕು. ಆ ಬಳಿಕ ಎಷ್ಟುಪ್ರಮಾಣದಲ್ಲಿ ನಷ್ಟಉಂಟಾಗಿದೆ ಎಂದು ಗುರುತಿಸಿ ರಾಜ್ಯದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದ್ದು, ಅಗತ್ಯ ಹಣ ಬಿಡುಗಡೆಗೆ ಮುಂದಾಗಬೇಕು ಎಂದು ಅವರು ಹೇಳಿದರು.

click me!