
ಬಳ್ಳಾರಿ(ಅ.02): ಜನಾರ್ದನ ರೆಡ್ಡಿ ತನ್ನೂರಿಗೆ ಬಂದಿದ್ದಾರೆ. ಐದು ವರುಷಗಳ ಹಿಂದೆ ಬಂಧನವಾಗಿ ಹೋಗಿದ್ದ ರೆಡ್ಡಿ ಇದೀಗ ತನ್ನ ಖದರ್ ಏನು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ನಿರೀಕ್ಷೆಯಂತೆ ಭರ್ಜರಿ ಸ್ವಾಗತ ದೊರೆತಿದ್ದು ಮೆರವಣಿಗೆ ವೇಳೆ ಇಡೀ ಬಳ್ಳಾರಿಯೇ ಗಣಿಧಣಿ ಹಿಂದೆ ನಿಂತಿತ್ತು. ಆದರೆ, ನಿಯಮ ಉಲ್ಲಂಘಿಸಿದ ಅಭಿಮಾನಿಯೊಬ್ಬ ಬಿಯರ್ ಬಾಟಲಿ ಓಪನ್ ಮಾಡಿದ್ದು ಪೊಲೀಸರನ್ನು ಕೆರಳಿಸಿದೆ
ಜನಾರ್ದನ ರೆಡ್ಡಿ ಅವರನ್ನು ನೋಡಲು, ಕೂತೂಹಲದಿಂದ ಜನರೆಲ್ಲಾ ರಸ್ತೆಗಿಳಿದಿದ್ದರು. ಬರೋಬ್ಬರಿ 5 ವರ್ಷಗಳ ನಂತರ ಆಗಮಿಸಿದ ರೆಡ್ಡಿ, ಕರ್ನೂಲು ಜಿಲ್ಲೆಯ ತುಂಗಭದ್ರ ನದಿಗೆ ಕೈಮುಗಿದು ತಮ್ಮ ಯಾತ್ರೆ ಆರಂಭಿಸಿದರು. ರೆಡ್ಡಿಗೆ ಕಂಪ್ಲಿ ಶಾಸಕ ಸುರೇಶ್ ಬಾಬು ಸಾಥ್ ನೀಡಿದ್ದರು. ಅಲ್ಲಿಂದ ಪ್ರತಿ ಗ್ರಾಮಗಳಲ್ಲಿ ಜನರು ಹೂಮಾಲೆ, ಪಟಾಕಿ ಸಿಡಿಸಿ ಸ್ವಾಗತ ಕೋರಲಾಯಿತು. ಬಳ್ಳಾರಿ ನಗರಕ್ಕೆ ಆಗಮಿಸಲು ಬರೋಬ್ಬರಿ ಆರು ಗಂಟೆಗಳೇ ಬೇಕಾಯಿತು. ರಸ್ತೆಯುದ್ದಕ್ಕೂ ಟ್ರಾಫಿಕ್ ಸಮಸ್ಯೆ, ಹತ್ತು ಕಿಲೋಮೀಟರ್ ನಷ್ಟು ಫುಲ್ ಟ್ರಾಫಿಕ್ ಕಿರಿಕಿರಿ ರೆಡ್ಡಿ ಮೆರವಣಿಗೆ ಸಂಬಂಧ ಜನ ಅನುಭವಿಸಿದ್ದರು. ನನ್ನ ಕೊನೆ ಉಸಿರು ಇರುವವರೆಗೂ ಬಳ್ಳಾರಿಯಲ್ಲಿಯೇ ಅಂತ ಜನತೆ ಮುಂದೆ ತೆರೆದ ವಾಹನದಲ್ಲಿ ಜನಾರ್ದನ ರೆಡ್ಡಿ ಭಾವುಕರಾಗಿ ನುಡಿದರು.
ರೋಡ್ ಶೋ ಸಮಯದಲ್ಲಿ ಬಳ್ಳಾರಿಯ ರಾಯಲ್ ಸರ್ಕಲ್'ನಲ್ಲಿ ಅಭಿಮಾನಿಗಳಿಬ್ಬರು ರಸ್ತೆಯಲ್ಲೇ ಬಿಯರ್ ಸಿಂಚಿಸಿ, ಸಾರ್ವಜನಿಕವಾಗಿ ಕುಡಿದು ತಮ್ಮ ಅತಿರೇಕತೆಯನ್ನು ಪ್ರದರ್ಶಿಸಿದರು. ರಸ್ತೆಯುದ್ದಕ್ಕೂ ರೆಡ್ಡಿ ತೆರೆದ ವಾಹನದಲ್ಲಿ ಆಗಮಿಸಿದ್ದು, ಡಿಜೆ ವ್ಯವಸ್ಥೆಯನ್ನೂ ಮಾಡಲಾಯಿತು. ಆದರೆ ಇದಕ್ಕೆ ಪೊಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆದಿರಲಿಲ್ಲ. ಹೀಗಾಗಿ ಕಾನೂನು ಉಲ್ಲಂಘನೆ ಆರೋಪ ದೂರು ದಾಖಲು ಮಾಡಿಕೊಳ್ಳುವಂತೆ ಜಿಲ್ಲಾ ಎಸ್ಪಿ ಆರ್ ಚೇತನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರೆಡ್ಡಿಗೆ ಭರ್ಜರಿ ಸ್ವಾಗತ ಕೋರಲು ಪೂರ್ವ ತಯಾರಿ ಬಲು ಜೋರಾಗಿಯೇ ಇತ್ತು. ಎರಡು ಲಾರಿಗಳ ಮೂಲಕ ಪಟಾಕಿಯನ್ನು ತರಿಸಲಾಗಿತ್ತು. ರೆಡ್ಡಿ ಹೂವಿನ ಸ್ವಾಗತ ಮಾಡಲು ಎರಡು ಪ್ರತ್ಯೇಕ ವಾಹನಗಳು ಅಕ್ಕಪಕ್ಕದಲ್ಲಿಯೇ ಇದ್ದವು. ರೋಡ್ ಶೋ ಸಂದರ್ಭದಲ್ಲಿ ರೆಡ್ಡಿ ಶರ್ಟ್ ಕಾರಿನಲ್ಲಿಯೇ ಬದಲಾವಣೆ ಮಾಡಿದ್ದು ಮತ್ತೊಂದು ವಿಶೇಷವಾಗಿತ್ತು. ಒಟ್ನಲ್ಲಿ ಹುಟ್ಟೂರಿಗೆ ರೆಡ್ಡಿ 5 ವರ್ಷಗಳ ಬಳಿಕ ಗ್ರ್ಯಾಂಡ್ ರೀ ಎಂಟ್ರಿ ಪಡೆದಿದ್ದಾರೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.