
ಚೆನ್ನೈ(ಜ.19): ತಮಿಳುನಾಡು ರಾಜಕಾರಣ. ಚಿತ್ರರಂಗ ತುಂಬಾನೇ ಡಿಫರೆಂಟ್. ನಾಡು-ನುಡಿ ಮತ್ತು ಭಾಷೆ ವಿಚಾರದಲ್ಲಿ ಇಲ್ಲಿ ಕಂಡು ಬರೋ ಒಗ್ಗಟ್ಟು ದೇಶದ ಯಾವುದೇ ಮೂಲೆಯಲ್ಲೂ ಕಾಣಸಿಗಲ್ಲ. ಇದೀಗ ಜಲ್ಲಿಕಟ್ಟು ಕ್ರೀಡೆ ವಿಚಾರದಲ್ಲೂ ಕೂಡ ತಮಿಳರ ಒಗ್ಗಟ್ಟು ಜಗಜ್ಜಾಹೀರಾಗಿದೆ. ಸುಪ್ರೀಂಕೋರ್ಟ್ ಆದೇಶದ ವಿರುದ್ಧವೇ ವಿದ್ಯಾರ್ಥಿ ಸಮೂಹ ಬೀದಿಗಿಳಿದಿದೆ. ಇದರಿಂದ ಇಕ್ಕಟ್ಟಿಗೆ ಸಿಲುಕಿರುವ ಸಿಎಂ ಪನ್ನೀರ್ ಸೆಲ್ವಂ ಇಂದು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಲಿದ್ದಾರೆ.
ತಮಿಳುನಾಡಿನಲ್ಲಿ ಪೊಂಗಲ್ ಹಬ್ಬ ಮುಗಿದಿದ್ದರೂ, ಜಲ್ಲಿಕಟ್ಟು ಜಟಾಪಟಿ ಉಲ್ಬಣಗೊಳ್ಳುತ್ತಲೆ ಇದೆ. . ದಿನದಿಂದ ದಿನಕ್ಕೆ ಜಲ್ಲಿಕಟ್ಟು ವಿಚಾರ ಪನ್ನಿರ್ ಸೆಲ್ವಂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿದೆ. ಜಲ್ಲಿಕಟ್ಟು ಆಚರಣೆಗೆ ನಿಷೇಧ ಹೇರಿರುವ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಸಣ್ಣದಾಗಿ ಆರಂಭಗೊಂಡ ಪ್ರತಿಭಟನೆ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದಕ್ಕೆ ನಿನ್ನೆ ಚೆನ್ನೈನ ಮರಿನಾ ಬೀಚ್ ಸಮೀಪ ಕಂಡು ಬಂದ ಈ ಜನಸ್ತೋಮವೇ ಸಾಕ್ಷಿ.
ಮಧುರೈ ಹಾಗೂ ಕೊಯಮತ್ತೂರಲ್ಲಿ ಕೆಲ ಯುವಕರು ಶುರು ಮಾಡಿದ ಸಣ್ಣ ಪ್ರತಿಭಟನೆ ಇಡೀ ರಾಜ್ಯಕ್ಕೆ ಕೆನ್ನಾಲಗೆ ರೀತಿ ಹಬ್ಬಿದೆ. ಪರಿಣಾಮ ತಮಿಳುನಾಡಿನ ಆಡಳಿತ ಯಂತ್ರವೇ ಕುಸಿಯುವ ರೀತಿ ಅಹೋರಾತ್ರಿ ಧರಣಿ ನಡೆಯುತ್ತಿದೆ.
ಸುಪ್ರೀಂ ಕೋರ್ಟ್ ಆದೇಶದ ವಿರುದ್ಧವೇ ಧರಣಿ?
ತಮಿಳರ ಒಗ್ಗಟ್ಟು ಇರೋದೇ ಇಲ್ಲಿ. ಯಾವುದೇ ನಾಡು-ನುಡಿ ಮತ್ತು ಭಾಷೆ ವಿಚಾರದಲ್ಲಿ ವಿವಾದ ಎದುರಾದಾಗ ಪಕ್ಷಾತೀತ ಬೆಂಬಲ ವ್ಯಕ್ತವಾಗುತ್ತದೆ. ಆಡಳಿತರೂಢ ಎಐಎಡಿಎಂಕೆ, ವಿಪಕ್ಷ ಡಿಎಂಕೆ, ಡಿಎಂಡಿಕೆ, ಪಿಎಂಕೆ, ಬಿಜೆಪಿ ಸೇರಿ ಎಲ್ಲರದ್ದೂ ಒಂದೇ ನಿಲುವು. ಮೊದಲು ನಮ್ಮ ಸಂಸ್ಕೃತಿಗೆ ಅವಕಾಶ ನೀಡಿ ಬಳಿಕ ಕೋರ್ಟ್ ಅಂತಿದ್ದಾರೆ. ಇದಕ್ಕೆ ಇಡೀ ತಮಿಳು ಚಿತ್ರರಂಗ ಬೆಂಬಲ ನೀಡಿದೆ. ರಜನಿಕಾಂತ್, ಕಮಲಹಾಸನ್, ಸೂರ್ಯ, ವಿಜಿ, ತ್ರಿಷಾ ಸೇರಿ ಖ್ಯಾತ ನಟ-ನಟಿಯರೆಲ್ಲರೂ ಜಲ್ಲಿಕಟ್ಟು ಕ್ರೀಡೆ ಬಗ್ಗೆ ಬ್ಯಾಟ್ ಬೀಸಿದ್ದಾರೆ.
ಆ ಮೂರು ಪ್ರಮುಖ ಬೇಡಿಕೆಗಳು ಗೊತ್ತಾ?
ಹೋರಾಟಗಾರರ ಪ್ರಮುಖವಾಗಿ ಮೂರು ಬೇಡಿಕೆಗಳನ್ನ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮುಂದಿಟ್ಟಿದ್ದಾರೆ. ಅದೇನಪ್ಪ ಅಂದ್ರೆ ತಂಗಂ ಸಂಸ್ಕೃತಿಯ ಶಿಖರ ಜಲ್ಲಿಕಟ್ಟು ಆಚರಣೆಗೆ ಅವಕಾಶ ಕೊಡಬೇಕು. ಆಚರಣೆಗೆ ಅಡಚಣೆಯಾಗದಂತೆ ಈ ಕೂಡಲೇ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವುದು. ಮತ್ತು ದೇಶ ವಿರೋಧಿ ಪ್ರಾಣಿ ದಯಾ ಸಂಘಟನೆಯನ್ನ ನಿಷೇಧವಾಗಲಿ ಅಂತ ಒತ್ತಾಯಿಸುತ್ತಿದ್ದಾರೆ. ಅಂದ ಹಾಗೆ ಪ್ರಮುಖ ಬೇಡಿಕೆ ಏನು ಗೊತ್ತಾ? ಜಲ್ಲಿಕಟ್ಟು ಆಚರಣೆಗೆ ಅನುಮತಿ ಸಾಧ್ಯವಾಗದಿದ್ರೆ ಒಕ್ಕೂಟ ವ್ಯವಸ್ಥೆಯಿಂದ ತಮಿಳುನಾಡನ್ನ ಕೈ ಬಿಡಿ ಅಂತಲೂ ಗಂಭೀರವಾಗಿ ಒತ್ತಾಯಿಸಿದ್ದಾರೆ.
ಸಿಎಂ ಪನ್ನೀರ್ ಸೆಲ್ವಂ ಮನವಿಗೂ ಕಿಮ್ಮತ್ತಿಲ್ಲ!
ಈ ಮಧ್ಯೆ ಧರಣಿ ನಡೀತಿರುವ ಮರೀನಾ ಬೀಚ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ 3 ಪುಟಗಳ ಮನವಿ ಪತ್ರ ರವಾನೆ ಮಾಡಿದರು. ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನ ಭೇಟಯಾಗಿ ಮಾತಾನಾಡುವೆ. ನಿಷೇಧವನ್ನು ತೆರವುಗೊಳಿಸಲು ಒತ್ತಾಯಿಸುವೆ ಎಂದು ಹೇಳಿದರೂ ಹೋರಾಟಗಾರರು ಮಾತ್ರ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ..
ಇಂದು ಶಾಲಾ-ಕಾಲೇಜುಗಳಿಗೆ ರಜೆ
ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ಕೋರಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿರುವ ಹಿನ್ನೆಲೆಯಲ್ಲಿ ಇಂದು ತಮಿಳುನಾಡು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಲ್ದೇ ಪ್ರತಿಭಟನೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.