ಐಟಿ ಬೇಟೆ: ಚುನಾವಣಾ ಹೊಸ್ತಿಲಲ್ಲಿ ಸಚಿವರ ಆಪ್ತನ ರೂಂನಲ್ಲಿ ಕೋಟಿ ಕೋಟಿ ಹಣ!

By Web DeskFirst Published Mar 15, 2019, 10:19 AM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಚುನಾವಣಾ ಅಖಾಡ ರಂಗೇರಿದೆ. ಹೀಗಿರುವಾಗಲೇ ಕರ್ನಾಟಕ ಸರ್ಕಾರದ ಪ್ರಭಾವಿ ಸಚಿವರ ಆಪ್ತರೊಬ್ಬರ ಬಳಿ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಚುನಾವಣಾ ಹೊಸ್ತಿಲಲ್ಲಿ ಐಟಿ ಇಲಾಖೆಯ ಅಧಿಕಾರಿಗಳು ಭರ್ಜರಿ ಬೇಟೆ ನಡೆಸಿದ್ದಾರೆ. ಅಷ್ಟಕ್ಕೂ ಆ ಅಧಿಕಾರಿ ಹಾಗೂ ಸಚಿವರು ಯಾರು? ಹಣ ಪತ್ತೆಯಾಗಿದ್ದು ಎಲ್ಲಿ? ಇಲ್ಲಿದೆ ಎಲ್ಲಾ ಪ್ರಶ್ನೆಗಳ ಉತ್ತರ

ಬೆಂಗಳೂರು[ಮಾ.15]: ಚುನಾವಣೆಗೆ ಒಂದೆಡೆ ರಾಜಕೀಯ ಪಕ್ಷಗಳು ಭರ್ಜರಿ ಕ್ಯಾಂಪೇನ್ ನಡೆಸುತ್ತಿದ್ದರೆ ಇತ್ತ ಐಟಿ ಇಲಾಖೆಯ ಅಧಿಕಾರಿಗಳು ಚುನಾವಣೆಗೆ ಹಣ ಸಾಗಿಸುವವರ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಿರುವಾಗ ಗುತ್ತಿಗೆದಾರರಿಂದ ಕಂತೆ ಕಂತೆ ಹಣ ಪಡೆಯುತ್ತಿದ್ದ ಗ್ರಾಮೀಣಾಭಿವೃದ್ದಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ನಾರಾಯಣಗೌಡ ಪಾಟೀಲ್ ಐಟಿ  ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. 

ಗುತ್ತಿಗೆದಾರರಿಂದ ಕೋಟಿ ಕೋಟಿ ಹಣ ಪಡೆಯುತ್ತಿದ್ದ ನಾರಾಯಣಗೌಡ ಪಾಟೀಲ್ ಬೆಂಗಳೂರಿನ ಆನಂದ್ ರಾವ್ ಸರ್ಕಲ್ ನಲ್ಲಿರುವ ಖಾಸಗಿ ಹೋಟೆಲ್ ನ 2 ಕೋಣೆಗಳಲ್ಲಿ ಸಂಗ್ರಹಿಸಿಟ್ಟಿದ್ದರು. ಅಲ್ಲದೇ ಈ ಕಲೆಕ್ಷನ್ ರಾಜಕಾರಣಿಗಳಿಗೆ ಚುನಾವಣೆ ಖರ್ಚಿಗೆಂದೇ ಮಾಡಲಾಗುತ್ತಿತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ. ಆದರೆ ಈ ಗ್ರಾಮೀಣಾಭಿವೃದ್ಧಿ ಅಧಿಕಾರಿಯ ಮೇಲೆ ಕಣ್ಣಿಟ್ಟಿದ್ದ ಐಟಿ ಅಧಿಕಾರಿಗಳು ಬೆಂಗಳೂರು ಮತ್ತು ಹಾವೇರಿಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದರು. 

ಕೋಟಿ ಕೋಟಿ ದುಡ್ಡು ಪತ್ತೆ

ದಾಳಿ ನಡೆಸಿದ ಅಧಿಕಾರಿಗಳಿಗೆ ಬೆಂಗಳೂರಿನ ಹೋಟೆಲ್ ರೂಮಿನಲ್ಲಿ 2 ಕೋಟಿ ರೂಪಾಯಿಗೂ ಹೆಚ್ಚು ಹಣ ಸಿಕ್ಕಿದ್ದರೆ, ಹಾವೇರಿಯ ಮನೆಯಲ್ಲಿ 25 ಲಕ್ಷ ರೂಪಾಯಿಗೂ ಹೆಚ್ಚು ನಗದು ಲಭಿಸಿದೆ. ಇನ್ನು ಐಟಿ ದಾಳಿಯ ಸುಳಿವು ಸಿಗುತ್ತಿದ್ದಂತೆ ಹೊಟೇಲ್ ನಲ್ಲಿದ್ದ ನಾರಾಯಣಗೌಡ ಪರಾರಿಯಾಗಿದ್ದಾರೆ ಆದರೆ ಅವರ ಕಾರ್ ಡ್ರೈವರ್ ನನ್ನು ಬಂಧಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಸದ್ಯ ಅಧಿಕಾರಿಗಳು ನಾರಾಯಣಗೌಡನ ಹುಡುಕಾಟ ನಡೆಸುತ್ತಿದ್ದು, ಈ ದುಡ್ಡು ಯಾರಿಗಾಗಿ ಸಂಗ್ರಹಿಸಲಾಗುತ್ತಿತ್ತು? ಯಾವೆಲ್ಲಾ ರಾಜಕಾರಣಿಗಳೊಂದಿಗೆ ಸಂಪರ್ಕ ಹೊಂದಿದ್ದರು? ಈವರೆಗೆ ಚುನಾವಣೆಗಾಗಿ ಎಷ್ಟು ಹಣ ಕೊಟ್ಟಿದ್ದಾರೆ ಎಂಬಿತ್ಯಾದಿ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಗ್ರಾಮೀಣಾಭಿವೃದ್ದಿ ಸಚಿವರು ಹೇಳುವುದೇನು?

"

ದಾಳಿ ಸಂಬಂಧ ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ದಿ ಸಚಿವ ಕೃಷ್ಣಬೈರೇಗೌಡ 'ಈ ವಿಚಾರಕ್ಕೂ ನನಗೂ ಸಂಬಂಧವಿಲ್ಲ. ನನಗೆ ಈ ಬಗ್ಗೆ ಏನೂ ತಿಳಿದಿಲ್ಲ' ಎಂದಿದ್ದಾರೆ. ಒಟ್ಟಾರೆಯಾಗಿ ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಇಷ್ಟು ಪ್ರಮಾಣದ ಹಣ ಪತ್ತೆಯಾಗಿರುವುದು ಬೆಚ್ಚಿ ಬೀಳಿಸಿದೆ. 

click me!