ಗೌಡರನ್ನು ನಂಬಿ ಯಾರೂ ಬದುಕಿಲ್ಲ: ಜೆಡಿಎಸ್ ಸಂಸದ

By Web DeskFirst Published Mar 15, 2019, 9:19 AM IST
Highlights

ಗೌಡರನ್ನು ನಂಬಿ ಯಾರೂ ಬದುಕಿಲ್ಲ: ಶಿವರಾಮೇಗೌಡ| ಬಾಯಿ ತಪ್ಪಿ ಹೇಳಿದ್ದಾರೆ: ಸಿಎಂ

ಮಂಡ್ಯ[ಮಾ.15]: ಮಂಡ್ಯದಲ್ಲಿ ಗುರುವಾರ ಜೆಡಿಎಸ್‌ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ‘ದೇವೇಗೌಡರನ್ನು ನಂಬಿ ಯಾರೂ ಬದುಕಿಲ್ಲ’ ಎಂದು ಸಂಸದ ಶಿವರಾಮೇಗೌಡರು ಮಾತಿನ ಭರದಲ್ಲಿ ಹೇಳಿದ್ದು ವಿವಾದಕ್ಕೆ ಕಾರಣವಾಯಿತು. ಆದರೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಶಿವರಾಮೇಗೌಡರು ಉದ್ವೇಗದಲ್ಲಿ ಬಾಯಿ ತಪ್ಪಿ ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜೆಡಿಎಸ್‌ ಸಮಾವೇಶದಲ್ಲಿ ಮಾತನಾಡಿದ ಶಿವರಾಮೇಗೌಡರು ಬೆಂಗಳೂರಿನಲ್ಲಿ ಹೋಟೆಲ್‌ ಒಂದರಲ್ಲಿ ಬಿಜೆಪಿಯವರ ಜೊತೆಗೆ ಮಾತನಾಡಿದ ಪ್ರಸಂಗವನ್ನು ವಿವರಿಸುತ್ತಿದ್ದರು. ‘ಮೊನ್ನೆ ಯಾವುದೋ ಹೋಟೆಲ್ ಗೆ ಊಟಕ್ಕೆ ಹೋಗಿದ್ದೆವು. ಅಲ್ಲಿಗೆ ಬಿಜೆಪಿಯವರೂ ಬಂದಿದ್ದರು. ನಮ್ಮನ್ನು ನೋಡಿ ಮಾಧ್ಯಮದವರೂ ಓಡಿ ಬಂದ್ರು. ಏನ್‌ ಸರ್‌, ಬಿಜೆಪಿ ಜೊತೆ ಸೇರಿಕೊಂಡಿದ್ದೀರಾ ಅಂತ ಕೇಳಿದರು. ನಾನು ಹೇಳಿದೆ, ನನ್ನನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ನಾನು ಜೆಡಿಎಸ್‌ ಕುಟುಂಬದವನಾಗಿದ್ದೇನೆ’ ಎಂದು ಹೇಳಿದವರೇ ಬಾಯಿತಪ್ಪಿ ಜೆಡಿಎಸ್‌ಗೆ ನನ್ನ ಮಾರಿಕೊಂಡಿದ್ದೇನೆ. ದೇವೇಗೌಡರನ್ನು ನಂಬಿ ಯಾರೂ ಬದುಕಿಲ್ಲ ಎಂದು ಬಾಯಿತಪ್ಪಿ ಹೇಳಿದರು.

ಈ ಬಗ್ಗೆ ಕುಮಾರಸ್ವಾಮಿಯವರು ತಮ್ಮ ಭಾಷಣದ ವೇಳೆ ಸ್ಪಷ್ಟನೆ ನೀಡಿ, ‘ನಮ್ಮ ಶಿವರಾಮೇಗೌಡರು ಏನೋ ಹೇಳಿದ್ರು ಅಂಥ ಮಾಧ್ಯಮಗಳಲ್ಲಿ ಬರ್ತಿದೆ. ಅವರು ಉದ್ವೇಗದಲ್ಲಿ ಏನು ಮಾತಾಡ್ತಾ ಇದೀನಿ ಅಂತಾ ಗೊತ್ತಾಗದೇ ತೊದಲ್ತಾರೆ. ದೇವೇಗೌಡರನ್ನು ನಂಬಿದವರು ಉದ್ಧಾರ ಆಗಿಲ್ಲ ಅಂತಾ ಮಾತು ತಪ್ಪಿ ಹೇಳಿದ್ರು. ಅಷ್ಟೇ ಸಾಕಲ್ಲ ನಮ್ಮ ಮಾಧ್ಯಮದವರಿಗೆ. ಅದನ್ನೇ ದೊಡ್ಡದು ಮಾಡ್ತಾ ಇದೀರಾ’ ಎಂದರು.

click me!