ಐಟಿ ದಾಳಿಯಿಂದ ಜೆಡಿಎಸ್‌-ಕಾಂಗ್ರೆಸ್‌ಗೆ ಲಾಭ!

By Web DeskFirst Published Mar 29, 2019, 9:04 AM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕರ್ನಾಟಕದ ಹಲವೆಡೆ ಐಟಿ ದಾಳಿ ಶಾಕ್ ನೀಡಿದೆ. ಈ ದಾಳಿಯ ಲಾಭವನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಪಡೆದುಕೊಳ್ಳುವ ಯತ್ನ ಮಾಡಿವೆ. 

ಬೆಂಗಳೂರು :  ಜೆಡಿಎಸ್‌ ಮುಖಂಡರ ಆಪ್ತರ ಮೇಲೆ ನಡೆದಿರುವ ದಾಳಿ ಹಿನ್ನೆಲೆಯಲ್ಲಿ ಹಳೆ ಮೈಸೂರು ಭಾಗದಲ್ಲಿನ ಒಕ್ಕಲಿಗ ಮತಗಳು ಕ್ರೋಢೀಕರಣಗೊಂಡು ತಮಗೆ ಅನುಕೂಲವಾಗಬಹುದು ಎಂಬ ಲೆಕ್ಕಾಚಾರ ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷಗಳಾದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಾಳೆಯದಲ್ಲಿ ನಡೆದಿದೆ. ಈ ಮೂಲಕ ತಮ್ಮ ವಿರುದ್ಧದ ಐಟಿ ದಾಳಿಯನ್ನೇ ಲಾಭವನ್ನಾಗಿ ಮಾಡಿಕೊಳ್ಳುವ ಪ್ರಯತ್ನವೂ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯವಾಗಿ ಜೆಡಿಎಸ್‌ ಸಚಿವರಾದ ಎಚ್‌.ಡಿ.ರೇವಣ್ಣ, ಸಿ.ಎಸ್‌.ಪುಟ್ಟರಾಜು ಅವರ ಆಪ್ತ ಗುತ್ತಿಗೆದಾರರು, ಉದ್ಯಮಿಗಳು ಹಾಗೂ ಅಧಿಕಾರಿಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆದಿರುವುದರಿಂದ ಅದು ಒಕ್ಕಲಿಗ ಸಮುದಾಯದ ಮೇಲೆ ನಡೆದ ದಾಳಿ ಎಂದೇ ಬಿಂಬಿಸುವ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದೆ. ಇದಕ್ಕೆಲ್ಲ ಬಿಜೆಪಿಯೇ ಕಾರಣ ಎಂಬ ಆರೋಪವನ್ನು ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಾಯಕರು ಮಾಡುತ್ತಿರುವುದರಿಂದ ಸಮುದಾಯದ ಮತಗಳು ಬಿಜೆಪಿಗೆ ಹೋಗದಂತೆ ತಡೆಯಬಹುದು ಎಂಬ ಮಾತು ಕೇಳಿಬರುತ್ತಿವೆ.

ಒಟ್ಟಾರೆ ದಾಳಿಯಿಂದ ಸದ್ಯಕ್ಕೆ ಹಿನ್ನಡೆ ಆಗುವಂತೆ ಕಂಡುಬಂದರೂ ಅದನ್ನು ರಾಜಕೀಯವಾಗಿ ಲಾಭ ಮಾಡಿಕೊಳ್ಳುವತ್ತ ಉಭಯ ಪಕ್ಷಗಳು ಗಮನಹರಿಸಿದ್ದು, ಶನಿವಾರದಿಂದ ರಾಜ್ಯಾದ್ಯಂತ ಚುನಾವಣಾ ಪ್ರಚಾರದಲ್ಲೂ ಇದನ್ನೇ ಪ್ರಮುಖವಾಗಿ ಪ್ರಸ್ತಾಪಿಸುವ ಮೂಲಕ ಅನುಕಂಪ ಗಿಟ್ಟಿಸಿಕೊಳ್ಳುವ ಯತ್ನ ನಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

click me!