
ಲಂಡನ್: ಕೆಲವರಿಗಂತೂ ಬೆಕ್ಕೆಂದರೆ ಪಂಚ ಪ್ರಾಣ. ರಾತ್ರಿ ನಿದ್ದೆ ಮಾಡುವಾಗಲಂತೂ ಜತೆಗೇ ಮಲಗಿಸುತ್ತಾರೆ. ಆದರೆ ಇಲ್ಲಿ ವಿಚಾರವೇನು ಗೊತ್ತಾ? ಮಾನವರ ವಿರುದ್ಧ ಫತ್ವಾ ಹೊರಡಿಸುವ ಉಗ್ರ ಸಂಘಟನೆ ಈಗ ಬೆಕ್ಕುಗಳಿಗೇ ಫತ್ವಾ ಹೊರಡಿಸಿವೆ. ಈ ಬಗ್ಗೆ ‘ಮೆಟ್ರೋ ಯುಕೆ' ವರದಿ ಮಾಡಿದೆ. ಅದರ ಪ್ರಕಾರ ಬೆಕ್ಕು ಸಂಘಟನೆಯ ‘ಗುರಿ, ಯೋಚನೆ ಹಾಗೂ ನಂಬಿಕೆಗಳ ವಿರುದ್ಧವಾಗಿದೆ'. ಈ ಮೂಲಕ ಸಂಘಟನೆ ಪ್ರಾಣಿಗಳ ವಿರುದ್ಧವೂ ಸಮರ ಸಾರುತ್ತದೆ ಎಂಬ ಸಂದೇಶವನ್ನೂ ಜಗತ್ತಿಗೆ ಸಾರಿದೆ.
ಇಸ್ಲಾಮಿಕ್ ಕಾನೂನಿನ ಪ್ರಕಾರ ಉಗ್ರ ಸಂಘಟನೆಯ ಹಿಡಿತದಲ್ಲಿರುವ ಇರಾಕ್'ನ ಮೊಸೂಲ್ ನಗರದಲ್ಲಿ ‘ಇಂದೂರ್' ಬೆಕ್ಕಿನ ತಳಿಗಳನ್ನು ನಿಷೇಧಿಸಿ ಉಗ್ರರು ಆದೇಶ ಹೊರಡಿಸಿದ್ದಾರೆ. ಯಾರೂ ಕೂಡ ಅದನ್ನು ಉಲ್ಲಂಘಿಸಬಾರದು ಎಂದು ಕಟ್ಟಪ್ಪಣೆಯನ್ನೂ ನೀಡಲಾಗಿದೆ. ಇಷ್ಟುಮಾತ್ರವಲ್ಲದೆ ಮನೆ ಮನೆಗಳಲ್ಲಿ ಬೆಕ್ಕುಗಳು ಇವೆಯೇ ಎಂದು ಶೋಧಿಸಲೂ ಆರಂಭಿಸಿದ್ದಾರಂತೆ. ಅಚ್ಚರಿಯಾಗಿರುವ ಅಂಶವೇನೆಂದರೆ ಉಗ್ರ ಸಂಘಟನೆಯ ಸದಸ್ಯರೇ ಬೆಕ್ಕಿನ ಜತೆಗೆ ತೆಗೆಸಿಕೊಂಡಿರುವ ವಿವಿಧ ರೀತಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಅದರ ಬೆನ್ನಲ್ಲೇ ಉಗ್ರರು ಈ ರೀತಿಯ ಫತ್ವಾ ಹೊರಡಿಸಿದ್ದಾರೆ. ಇದೊಂದು ರೀತಿಯ ಪ್ರಚಾರದ ತಂತ್ರವೂ ಇರಬಹುದು ಎಂದು ಪತ್ರಿಕೆ ಹೇಳಿಕೊಂಡಿದೆ.
ವಿಶ್ವಸಂಸ್ಥೆ 2014ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಮುಸುಕುಧಾರಿಯೊಬ್ಬ ಎ.ಕೆ.47 ಬಂದೂಕುಧಾರಿಯಾಗಿ ಬೆಕ್ಕಿನ ಜತೆಗೆ ಇದ್ದ ಫೋಟೋಗಳನ್ನು ನೋಡಿ 80ಕ್ಕೂ ಅಧಿಕ ದೇಶಗಳಿಂದ ಸುಮಾರು 15 ಸಾವಿರ ಮಂದಿ ಉಗ್ರ ಸಂಘಟನೆಯತ್ತ ಆಕರ್ಷಿತರಾಗಿ ಇರಾಕ್, ಸಿರಿಯಾಗೆ ಆಗಮಿಸಿದ್ದರು. ಟ್ವಿಟರ್ನಲ್ಲಿಯೂ ಕೂಡ ಐಎಸ್ ಉಗ್ರ ಸಂಘಟನೆಯ ಸದಸ್ಯರು ಬೆಕ್ಕಿನ ಮರಿಗಳು ಹಾಲು ಕುಡಿಸುತ್ತಿರುವ ಚಿತ್ರಗಳೂ ಹರಿದಾಡಿವೆ. ಬ್ರಿಟನ್ ಮೂಲದ ಐಎಸ್ ನೇಮಕ ಮಾಡುವ ಒಮರ್ ಹುಸೇನ್ ಕೂಡ ಟ್ವಿಟರ್ನಲ್ಲಿ ಬೆಕ್ಕಿನ ಜತೆಗಿನ ಫೋಟೋ ಹಾಕಿದ್ದ.
ಆಕ್ಷೇಪಾರ್ಹ ಅಂಶ ಕಲಿಸುತ್ತಿದ್ದ ಶಾಲೆ ವಿರುದ್ಧ ಕೇಸು
ಕೊಯಮತ್ತೂರು: ಇಸ್ಲಾಂ ಧರ್ಮಕ್ಕಾಗಿ ಪ್ರಾಣ ತ್ಯಾಗ ಮತ್ತು ಆಕ್ಷೇಪಾರ್ಹ ಅಂಶಗಳನ್ನು ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದ ಶಾಲೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಶಾಲೆಯ ಪಠ್ಯ ಚಟುವಟಿಕೆಗಳು ವಿವಾದಾತ್ಮಕ ಧರ್ಮ ಬೋಧಕ ಝಾಕಿರ್ ನಾಯ್ಕ್ ಆಪ್ತರಿಂದ ಸಿದ್ಧಪಡಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಎರ್ನಾಕುಲಂನ ತಮ್ಮನಮ್'ನಲ್ಲಿರುವ ಪೀಸ್ ಇಂಟರ್ನ್ಯಾಷನಲ್ ಸ್ಕೂಲ್ ಸ್ಥಳೀಯ ಉದ್ಯಮಿಗಳಿಂದ ನಡೆಯುತ್ತಿದೆ. ಇದೇ ವೇಳೆ, ಕಣ್ಣೂರಿನಲ್ಲಿ ಬಂಧಿತನಾದ ಐಎಸ್ ಶಂಕಿತ ಅಬು ಬಶೀರ್ನೊಂದಿಗೆ ಸಂಪರ್ಕ ಹೊಂದಿದ ವಿಚಾರವಾಗಿ ನಾಲ್ವರು ಶಂಕಿತರ ವಶಕ್ಕೆ ಪಡೆದಿರುವ ಎನ್ಐಎ ಶನಿವಾರ ವಿಚಾರಣೆಗೆ ಒಳಪಡಿಸಿದೆ.
(ಏಜನ್ಸಿ ವರದಿ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.