ಹ್ಯಾರೀಸ್ ಪುತ್ರನನ್ನು ರಕ್ಷಿಸಲು ಇನ್ಸ್’ಪೆಕ್ಟರ್ ಅಮಾನತು ಪ್ರಹಸನ

By suvarna Web DeskFirst Published Feb 19, 2018, 8:27 AM IST
Highlights

ಹ್ಯಾರಿಸ್ ಅವರ ಪುತ್ರ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್‌ಪಾರ್ಕ್ ಇನ್ಸ್‌ಪೆಕ್ಟರ್ ವಿಜಯ್ ಹಡಗಲಿ ಅವರನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್
ಆದೇಶಿಸಿದ್ದಾರೆ. ಆದರೆ, ಹ್ಯಾರಿಸ್ ಪುತ್ರ ನಲಪಾಡ್‌ನನ್ನು ರಕ್ಷಿಸುವುದಕ್ಕೆಂದೇ ಈ ರೀತಿಯ ಪ್ರಹಸನ ಸೃಷ್ಟಿಸಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಬೆಂಗಳೂರು (ಫೆ.17): ಹ್ಯಾರಿಸ್ ಅವರ ಪುತ್ರ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್‌ಪಾರ್ಕ್ ಇನ್ಸ್‌ಪೆಕ್ಟರ್ ವಿಜಯ್ ಹಡಗಲಿ ಅವರನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್
ಆದೇಶಿಸಿದ್ದಾರೆ. ಆದರೆ, ಹ್ಯಾರಿಸ್ ಪುತ್ರ ನಲಪಾಡ್‌ನನ್ನು ರಕ್ಷಿಸುವುದಕ್ಕೆಂದೇ ಈ ರೀತಿಯ ಪ್ರಹಸನ ಸೃಷ್ಟಿಸಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ಅವರ ಸಂಪೂರ್ಣ ನಿರ್ಲಕ್ಷ್ಯತೆ ಇದೆ. ಹೀಗಾಗಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಇನ್ನು ಕಬ್ಬನ್‌ಪಾರ್ಕ್ ಎಸಿಪಿ ಮಂಜುನಾಥ್ ಅವರನ್ನು ಅಮಾನತು ಮಾಡುವಂತೆ ಆದೇಶಿಸಿ ಆಯುಕ್ತರು ಸರ್ಕಾರಕ್ಕೆ ಶಿಫಾರಸು ಮಾಡಿ ಅವರನ್ನು ತಕ್ಷಣಕ್ಕೆ ಆಯುಕ್ತರ ಕಚೇರಿ ಕರ್ತವ್ಯಕ್ಕೆ  ನಿಯೋಜಿಸಿದ್ದಾರೆ ಮತ್ತು ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರಿಗೆ ವಹಿಸಿದ್ದಾರೆ. ಘಟನೆ ನಡೆದ ಕೂಡಲೇ ರಾತ್ರಿ ಎಸಿಪಿ ಮಂಜುನಾಥ್ ಸ್ಥಳಕ್ಕೆ ತೆರಳಿ ಗಾಯಾಳುವಿನ ಸ್ಥಿತಿ ನೋಡಿದ್ದರೂ ತಂಡ ರಚಿಸಿ ಆರೋಪಿಗಳನ್ನು ಬಂಧಿಸುವ ನಿರ್ಣಯ ಕೈಗೊಳ್ಳುವಲ್ಲಿ ತಡಮಾಡಿದ್ದಾರೆ. ಈ ನಿರ್ಲಕ್ಷ್ಯದ
ಹಿನ್ನೆಲೆಯಲ್ಲಿ ಎಸಿಪಿ ಅವರನ್ನು ಆಯುಕ್ತರ ಕಚೇರಿ ಕೆಲಸಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಸುನೀಲ್ ಕುಮಾರ್ ತಿಳಿಸಿದ್ದಾರೆ.

ಸಿಸಿಬಿಗೆ ವರ್ಗಾವಣೆ: ಸ್ಥಳೀಯ ಪೊಲೀಸರ ಮೇಲೆ ಆರೋಪಗಳು ಕೇಳಿ ಬಂದ ಕಾರಣ ಪ್ರಕರಣವನ್ನು ಆಯುಕ್ತರು ಸಿಸಿಬಿಗೆ ವರ್ಗಾಯಿಸಿದ್ದಾರೆ. ಸಿಸಿಬಿ  ಪೊಲೀಸರ ತನಿಖೆಗೆ ಪ್ರಕರಣ ವರ್ಗಾಯಿಸಿ ಆದೇಶಿಸಲಾಗಿದೆ. ಸಿಸಿಬಿ ಹಿರಿಯ ಅಧಿಕಾರಿಯ
ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ನಡೆಸಲಾಗುವುದು ಎಂದು ಸುನೀಲ್ ಕುಮಾರ್ ಮಾಹಿತಿ ನೀಡಿದರು.
 

ಗಡುವು ನೀಡಿದ್ದ ಸಚಿವರು: ವಿದ್ವತ್ ಮೇಲೆ ಹಲ್ಲೆ  ನಡೆದ ಪ್ರಕರಣವನ್ನು ಇನ್ಸ್‌ಪೆಕ್ಟರ್ ವಿಜಯ್ ಹಡಗಲಿ ಗಂಭೀರವಾಗಿ ಪರಿಗಣಿಸದೆ ಶಾಸಕರ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಗೃಹ ಸಚಿವ
ರಾಮಲಿಂಗಾರೆಡ್ಡಿ ಅವರು ಭಾನುವಾರ ಸಂಜೆಯೊಳಗೆ ಪ್ರಮುಖ ಆರೋಪಿ ನಲಪಾಡ್‌ನನ್ನು  ಬಂಧಿಸಬೇಕೆಂದು ಇನ್ಸ್‌ಪೆಕ್ಟರ್ ಮತ್ತು ಎಸಿಪಿಗೆ ಸೂಚಿಸಿದ್ದರು. ಒಂದು ವೇಳೆ ಬಂಧನವಾಗದಿದ್ದರೆ ಅಮಾನತು ಮಾಡುವುದಾಗಿ ಗಂಭೀರವಾಗಿ
ಎಚ್ಚರಿಸಿದ್ದರು. ಸಂಜೆಯಾದರೂ ಪೊಲೀಸರು ನಲಪಾಡ್‌ನನ್ನು ಬಂಧಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಮುಂದಿನ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಗೃಹ ಸಚಿವರು ಸೂಚನೆ ನೀಡಿದ್ದು, ಅದರಂತೆ ಅಮಾನತು ನಿರ್ಣಯ ಹೊರಬಿದ್ದಿದೆ.

click me!