ಹ್ಯಾರೀಸ್ ಪುತ್ರನ ದಾಂಧಲೆ ಇದೆ ಮೊದಲಲ್ಲ!

By suvarna Web DeskFirst Published Feb 19, 2018, 8:14 AM IST
Highlights

ಶಾಸಕ ಎನ್.ಎ.ಹ್ಯಾರಿಸ್ ಅವರ ಪುತ್ರ ನಲಪಾಡ್‌ನ ದಾಂಧಲೆ ಇದೇ ಮೊದಲಲ್ಲ. ಈ ಹಿಂದೆ ಕೂಡ ಹಲವು ಬಾರಿ ಇದೇ ರೀತಿ ಹೋಟೆಲ್‌ಗಳಲ್ಲಿ ದಾಂಧಲೆ ನಡೆಸಿ ಅಲ್ಲಿನ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಪ್ರಕರಣಗಳಿವೆ. 

ಬೆಂಗಳೂರು (ಫೆ.17): ಶಾಸಕ ಎನ್.ಎ.ಹ್ಯಾರಿಸ್ ಅವರ ಪುತ್ರ ನಲಪಾಡ್‌ನ ದಾಂಧಲೆ ಇದೇ ಮೊದಲಲ್ಲ. ಈ ಹಿಂದೆ ಕೂಡ ಹಲವು ಬಾರಿ ಇದೇ ರೀತಿ ಹೋಟೆಲ್‌ಗಳಲ್ಲಿ ದಾಂಧಲೆ ನಡೆಸಿ ಅಲ್ಲಿನ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಪ್ರಕರಣಗಳಿವೆ. 

2017 ರ ಜೂನ್‌ನಲ್ಲಿ ಪಕ್ಷದ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಪೀಟರ್ ಎಂಬುವರ ಮೇಲೆ ಹಲ್ಲೆ ನಡೆಸಿದ್ದ. ಪ್ರಕರಣದ ಸಂಬಂಧ ಜೀವನ್ ಬಿಮಾ ನಗರ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿತ್ತು. ಶಾಂತಿ ನಗರದ ‘ಪ್ಲಾನ್ ಬಿ’ ಪಬ್‌ನಲ್ಲಿ ಗಲಾಟೆಯೊಂದರಲ್ಲಿ ಈತ ಭಾಗಿಯಾಗಿದ್ದ. ಶಾಸಕರ ಪುತ್ರನಾಗಿದ್ದ ಕಾರಣ ಪಬ್‌ನವರು ಯಾವುದೇ ದೂರು ನೀಡಿರಲಿಲ್ಲ. ಇದಾದ ಬಳಿಕ ಬೌರಿಂಗ್ ಕ್ಲಬ್‌ನಲ್ಲಿ ತನ್ನ ಸಹಚರರೊಂದಿಗೆ ಸೇರಿ ಅಲ್ಲಿನ ಭದ್ರತಾ ಸಿಬ್ಬಂದಿ ಮೇಲೆ ನಡೆಸಿದ್ದ. ಇಂದಿರಾ ನಗರದ ಪಬ್ ಒಂದರಲ್ಲಿ ಸಹ ಗಲಾಟೆ ಮಾಡಿ ಸುದ್ದಿಯಾಗಿದ್ದ. ಈ ಪೈಕಿ ಇಂದಿರಾನಗರದ ಪಬ್ ಗಲಾಟೆ ಸ್ವಲ್ಪ ಸುದ್ದಿಯಾಗಿತ್ತು. ಆದರೆ ಪ್ರಭಾವಿ ಶಾಸಕರ ಪುತ್ರನಾದ ಕಾರಣ ಪೊಲೀಸ್ ಠಾಣೆಯ ಮೆಟ್ಟಿಲೇ ರಿಲಿಲ್ಲ. ಹೀಗಾಗಿ ಯಾವುದೇ ಪ್ರಕರಣಗಳು ದಾಖಲಾಗಿರಲಿಲ್ಲ. ಈ ಪ್ರಕರಣಗಳ ಬಳಿಕ ಶಾಸಕ ಹ್ಯಾರೀಸ್ ಅವರು ತಮ್ಮ ಪುತ್ರನನ್ನು ದುಬೈಗೆ ಕಳುಹಿಸಿದ್ದರು. ಸುಮಾರು ಒಂದೂವರೆ ವರ್ಷ ದುಬೈನಲ್ಲಿಯೇ ಇದ್ದ ನಲಪಾಡ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬೆಂಗಳೂರಿಗೆ ವಾಪಸ್ ಹಿಂತಿರುಗಿದ್ದ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
 

ಎರಡನೇ ಬಾರಿ ಅಮಾನತು: ಪ್ರಕರಣದಲ್ಲಿ ಅಮಾನತುಗೊಂಡಿರುವ ವಿಜಯ್ ಹಡಗಲಿ ಈ ಹಿಂದೆ ಕೂಡ ಅಮಾನತಾಗಿದ್ದರು ಎನ್ನಲಾಗಿದೆ. ವಿವೇಕನಗರ ಠಾಣೆಯಲ್ಲಿ
ಪ್ರಕರಣವೊಂದನ್ನು ದಾಖಲಿಸದೆ ನಿರ್ಲಕ್ಷ್ಯ ತೋರಿ ದೂರು ದಾಖಲಿಸಿರಲಿಲ್ಲ. ಈ ಸಂಬಂಧ ಅಮಾನತುಗೊಂಡಿದ್ದರು. 
 

ನಲಪಾಡ್ ರಕ್ಷಿಸಲು ನಡೆಸಿದ ಪ್ರಹಸನ
1. ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆದರೂ ಪೊಲೀಸರು ಮೊದಲಿಗೆ ಕೊಲೆ ಯತ್ನ ಪ್ರಕರಣ ದಾಖಲಿಸಲಿಲ್ಲ
2. ಹ್ಯಾರಿಸ್ ಪುತ್ರ ನಲಪಾಡ್ ವಿರುದ್ಧ ಅಷ್ಟೇನೂ ಪ್ರಮುಖವಲ್ಲದ ಸೆಕ್ಷನ್‌ಗಳನ್ನು ಹಾಕಿ, ಪ್ರಕರಣ ದಾಖಲಿಸಿದರು
3. ಯುವಕ ವಿದ್ವತ್ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದರೂ ಆತ ಮದ್ಯ ಸೇವಿಸಿದ್ದನೇ ಎಂದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು
4. ಒಂದು ವೇಳೆ ವಿದ್ವತ್ ಕುಡಿದಿದ್ದರೆ ಕುಡಿತದ ಅಮಲಿನಲ್ಲಿ ಗಲಾಟೆ ಮಾಡಿಕೊಂಡಿದ್ದಾನೆ ಎಂದು ಆತನ ವಿರುದ್ಧವೇ ಪ್ರಕರಣವನ್ನು ತಿರುಗಿಸುವ
ಸಾಧ್ಯತೆಯಿತ್ತು 
5. ಜಾಮೀನು ಪಡೆಯಲು ಅನುಕೂಲವಾಗಲಿ ಎಂಬ ಕಾರಣಕ್ಕೆ ನಲಪಾಡ್ ಬಂಧನ ವಿಳಂಬಗೊಳಿಸಲಾಯಿತು ಎಂಬ ಆರೋಪವಿದೆ. 

click me!