ಬೆಂಗಳೂರು ಮೂಲದ ಜಾಗತಿಕ ಮಾಹಿತಿ ತಂತ್ರಜ್ಞಾನ ಕಂಪನಿ ಇನ್ಫೋಸಿಸ್ನ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ವಿಶಾಲ್ ಸಿಕ್ಕಾ ರಾಜೀನಾಮೆ ನೀಡಿದ ಬೆನ್ನಲ್ಲೇ ಆ ಸಂಸ್ಥೆಗೆ ಕಾನೂನು ಮತ್ತು ಆಡಳಿತಾತ್ಮಕ ಸಂಕಷ್ಟ ಎದುರಾಗಿದೆ. ಇನ್ಫೋಸಿಸ್ನ ಅಧಿಕಾರಿಗಳು ಹಾಗೂ ನಿರ್ದೇಶಕರು ಅಮೆರಿಕದಲ್ಲಿನ ಷೇರುಪೇಟೆ ನಿಯಮಗಳನ್ನು ಉಲ್ಲಂಘಿಸಿದ್ದಾರೆಯೇ ಎಂಬ ಕುರಿತು ಅಲ್ಲಿನ ನಾಲ್ಕು ಕಾನೂನು ಸಂಸ್ಥೆಗಳು ತನಿಖೆ ಆರಂಭಿಸಿವೆ. ಮತ್ತೊಂದೆಡೆ ಸಿಕ್ಕಾ ರಾಜೀನಾಮೆಗೆ ಕಾರಣವಾದ ಅಂಶಗಳು, ಅವರ ಸ್ಥಾನಕ್ಕೆ ಮತ್ತೊಬ್ಬ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಲು ಕಂಪನಿಗೆ ಸಾಕಷ್ಟು ಸಮಸ್ಯೆ ತರಲಿದೆ ಎಂದು ವಿಶ್ಲೇಷಿಸಲಾಗಿದೆ.
ನವದೆಹಲಿ (ಆ.19): ಬೆಂಗಳೂರು ಮೂಲದ ಜಾಗತಿಕ ಮಾಹಿತಿ ತಂತ್ರಜ್ಞಾನ ಕಂಪನಿ ಇನ್ಫೋಸಿಸ್ನ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ವಿಶಾಲ್ ಸಿಕ್ಕಾ ರಾಜೀನಾಮೆ ನೀಡಿದ ಬೆನ್ನಲ್ಲೇ ಆ ಸಂಸ್ಥೆಗೆ ಕಾನೂನು ಮತ್ತು ಆಡಳಿತಾತ್ಮಕ ಸಂಕಷ್ಟ ಎದುರಾಗಿದೆ. ಇನ್ಫೋಸಿಸ್ನ ಅಧಿಕಾರಿಗಳು ಹಾಗೂ ನಿರ್ದೇಶಕರು ಅಮೆರಿಕದಲ್ಲಿನ ಷೇರುಪೇಟೆ ನಿಯಮಗಳನ್ನು ಉಲ್ಲಂಘಿಸಿದ್ದಾರೆಯೇ ಎಂಬ ಕುರಿತು ಅಲ್ಲಿನ ನಾಲ್ಕು ಕಾನೂನು ಸಂಸ್ಥೆಗಳು ತನಿಖೆ ಆರಂಭಿಸಿವೆ. ಮತ್ತೊಂದೆಡೆ ಸಿಕ್ಕಾ ರಾಜೀನಾಮೆಗೆ ಕಾರಣವಾದ ಅಂಶಗಳು, ಅವರ ಸ್ಥಾನಕ್ಕೆ ಮತ್ತೊಬ್ಬ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಲು ಕಂಪನಿಗೆ ಸಾಕಷ್ಟು ಸಮಸ್ಯೆ ತರಲಿದೆ ಎಂದು ವಿಶ್ಲೇಷಿಸಲಾಗಿದೆ.
ಇನ್ಫಿ ವಿರುದ್ಧ ತನಿಖೆ:
ಅಮೆರಿಕದ ಷೇರುಪೇಟೆಯಲ್ಲಿ ಕೂಡಾ ನೊಂದಾಯಿತವಾಗಿರುವ ಇನ್ಫೋಸಿಸ್ ವಿರುದ್ಧ, ಅಮೆರಿಕದ್ದೇ ಆದ ೪ ಕಾನೂನು ಸಂಸ್ಥೆಗಳು ವಿವಿಧ ಕಾರಣಕ್ಕಾಗಿ ತನಿಖೆ ಆರಂಭಿಸಿವೆ. ಬ್ರಾನ್ಸ್ಟೀನ್, ಗೀವಿರ್ಟ್ಜ್ ಆ್ಯಂಡ್ ಗ್ರಾಸ್ಮ್ಯಾನ್; ರೋಸನ್; ಪೊಮೆರಾಂಟ್ಜ್ ಹಾಗೂ ಗೋಲ್ಡ್ಬರ್ಗ್ ಕಂಪನಿಗಳು ಈಗಾಗಲೇ ಇನ್ಫೋಸಿಸ್ ವಿರುದ್ಧ ತನಿಖೆ ಆರಂಭಿಸಿರುವುದಾಗಿ ಹೇಳಿವೆ. ಹೂಡಿಕೆದಾರರಿಗೆ ಇನ್ಫೋಸಿಸ್ ಕಂಪನಿ ದಾರಿ ತಪ್ಪಿಸುವಂತಹ ವ್ಯವಹಾರ ಮಾಹಿತಿಯನ್ನು ನೀಡಿದೆಯೇ ಎಂಬ ಕುರಿತು ತನಿಖೆ ಮಾಡುತ್ತಿರುವುದಾಗಿ ರೋಸೆನ್ ಸಂಸ್ಥೆ ತಿಳಿಸಿದೆ. ಅಲ್ಲದೆ ಇನ್ಫೋಸಿಸ್ ಹೂಡಿಕೆದಾರರಿಗೆ ಆಗಿರುವ ನಷ್ಟವನ್ನು ವಸೂಲು ಮಾಡುವ ಸಂಬಂಧ ಅರ್ಜಿಯೊಂದನ್ನು ತಯಾರಿಸುತ್ತಿರುವುದಾಗಿ ಹೇಳಿದೆ.
ಇನ್ನು, ಅಮೆರಿಕದ ಷೇರು ನಿಯಮಗಳನ್ನು ಇನ್ಫೋಸಿಸ್ ಕಂಪನಿಯ ಕೆಲವು ಅಧಿಕಾರಿಗಳು ಅಥವಾ ನಿರ್ದೇಶಕರು ಪಾಲಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಬ್ರಾನ್ಸ್ಟೀನ್ ಹಾಗೂ ಗೋಲ್ಡ್ಬರ್ಗ್ ಹೇಳಿದ್ದರೆ, ಷೇರು ವಂಚನೆ ಅಥವಾ ಅಕ್ರಮ ವ್ಯವಹಾರಗಳಲ್ಲಿ ಇನ್ಫೋಸಿಸ್ನ ಅಧಿಕಾರಿಗಳು/ನಿರ್ದೇಶಕರು ತೊಡಗಿದ್ದರೆ ಎಂಬುದರ ಕುರಿತು ತನ್ನ ತನಿಖೆ ಕೇಂದ್ರೀಕೃತವಾಗಿದೆ ಎಂದು ಪೊಮೆರಾಂಟ್ಜ್ ಹೇಳಿದೆ.
ಸಿಕ್ಕಾ ಸ್ಥಾನ ತುಂಬುವವರು ಯಾರು?:
ವಿಶಾಲ್ ಸಿಕ್ಕಾ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಹೊಸ ಸಮರ್ಥ ವ್ಯಕ್ತಿಯನ್ನು ಕರೆತರುವುದು ಇನ್ಫಿ ಪಾಲಿಗೆ ದೊಡ್ಡ ಸವಾಲಾಗಿದೆ ಎಂದು ಹೇಳಲಾಗಿದೆ. ೨೦೧೪ರವರೆಗೂ ಕಂಪನಿಯ ಸಂಸ್ಥಾಪಕ ಸದಸ್ಯರೇ ಸಿಇಒ ಹುದ್ದೆ ನಿರ್ವಹಿಸುತ್ತಿದ್ದರು. ಆದರೆ ೨೦೧೪ರಲ್ಲಿ ಸ್ಯಾಪ್ನಂಥ ದೊಡ್ಡ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಶಾಲ್ ಸಿಕ್ಕಾ ಅವರನ್ನು ಸ್ವತಃ ಇನ್ಫೋಸಿಸ್ನ ಸಂಸ್ಥಾಪಕ ಸದಸ್ಯರೇ ಆಯ್ಕೆ ಮಾಡಿ ಕರೆ ತಂದಿದ್ದರು. ಇದು ಮೊದಲ ಬಾರಿಗೆ ಹೊರಗಿನ ವ್ಯಕ್ತಿಯೊಬ್ಬರಿಗೆ ಕಂಪನಿಯಲ್ಲಿ ಸಿಇಒ ಹುದ್ದೆ ನೀಡಿದ ಪ್ರಕರಣವಾಗಿತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ ಸಿಕ್ಕಾ ಅವರನ್ನು ಇನ್ಫಿ ಸಂಸ್ಥಾಪಕ ಸದಸ್ಯರು ಅದರಲ್ಲೂ ನಾರಾಯಣ ಮೂರ್ತಿ ಅವರು ಟೀಕಿಸಿದ ರೀತಿ ಎಲ್ಲರಲ್ಲೂ ಅಚ್ಚರಿಗೆ ಕಾರಣವಾಗಿತ್ತು. ಕೊನೆಗೆ ಇದೇ ಕಾರಣ ನೀಡಿ ಇದೀಗ ಸಿಕ್ಕಾ ರಾಜೀನಾಮೆ ನೀಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಉನ್ನತ ಸ್ಥಾನದಲ್ಲಿರುವ ಇತರೆ ಯಾವ ವ್ಯಕ್ತಿಗೆ ಇನ್ಫಿಗೆ ಬಂದಾರು ಎಂಬ ಪ್ರಶ್ನೆ ಎಲ್ಲರಲ್ಲೂ ಉದ್ಭವಿಸಿದೆ. ಹೀಗಾಗಿ ಹೊಸ ನಾಯಕನ ಆಯ್ಕೆ ಇನ್ಫಿ ಆಡಳಿತ ಮಂಡಳಿ ಪಾಲಿಗೆ ಸವಾಲಿನ ವಿಷಯವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.